ಮುಖ್ಯಮಂತ್ರಿ ಸ್ಥಾನಕ್ಕೆ ಬಿಹಾರ ಜನರ ಆಯ್ಕೆ ತೇಜಸ್ವಿ ಯಾದವ್: ನಿತೀಶ್ ಕುಮಾರ್ಗೆ ಆಘಾತ ನೀಡಿದ ಸಮೀಕ್ಷೆ
ಪಟ್ನಾ, ಆಗಸ್ಟ್ 11: ಬಿಹಾರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿಯಲ್ಲಿ ಬಿಜೆಪಿ ತೊರೆದ ನಿತೀಶ್ ಕುಮಾರ್ ರಾಷ್ಟ್ರೀಯ ಜನತಾದಳ, ಕಾಂಗ್ರೆಸ್ ಬೆಂಬಲದೊಂದಿಗೆ 8ನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಆದರೆ ಇದೇ ಸಮಯದಲ್ಲಿ ಬಂದಿರುವ ಸಮೀಕ್ಷೆಯೊಂದು ನಿತೀಶ್ ಕುಮಾರ್ ರಾಜಕೀಯ ಭವಿಷ್ಯದ ಬಗ್ಗೆ ಆತಂಕಗೊಳ್ಳುವಂತೆ ಮಾಡಿದೆ.
ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರಿಗಿಂತ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅಧಿಕಾರ ಸ್ವೀಕರಿಸಬೇಕು ಎಂದು ಬಿಹಾರದ ಜನ ಆಶಿಸಿದ್ದರು ಎಂದು ಸಿ ವೋಟರ್ ಸಮೀಕ್ಷೆ ತಿಳಿಸಿದೆ. ಈಗ ಚುನಾವಣೆ ನಡೆದರು ತೇಜಸ್ವಿ ಯಾದವ್ ಅವರ ಪಕ್ಷಕ್ಕೆ ಹೆಚ್ಚಿನ ಬೆಂಬಲ ಸಿಗಲಿದೆ ಎಂದು ಸಮೀಕ್ಷೆ ತಿಳಿಸಿದೆ. ಎಲ್ಲಾ ವರ್ಗದ ಜನತೆಯ ಬೆಂಬಲ ಪಡೆಯುವಲ್ಲಿ ಯುವ ನಾಯಕ ತೇಜಸ್ವಿ ಯಾದವ್ ಯಶಸ್ವಿಯಾಗಿದ್ದಾರೆ.
ನಿತೀಶ್ ಜೊತೆ ಕೈಜೋಡಿಸದಂತೆ ಇತರೆ ಪಕ್ಷಗಳ ಮೇಲೆ ಬಿಜೆಪಿ ಒತ್ತಡ ಹಾಕಲು ಯತ್ನಿಸಿತ್ತು: ಜೆಡಿಯು ಆರೋಪ
ನಿತೀಶ್ ಕುಮಾರ್ ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಬುಧವಾರ 8ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆರ್ಜೆಡಿಯ ನಾಯಕ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಫಾಗು ಚೌಹಾಣ್ ಇಬ್ಬರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು. ಕುಟುಂಬಸ್ಥರು, ಮುಖಂಡರ ಸಮ್ಮುಖದಲ್ಲಿ ರಾಜಭವದನಲ್ಲಿ ಸರಳ ಸಮಾರಂಭ ನಡೆಯಿತು.
ತೇಜಸ್ವಿ ಯಾದವ್ಗೆ ಯುವ ಜನತೆ ಬೆಂಬಲ
ಆಜ್ ತಕ್ನ ಇತ್ತೀಚಿನ ಸಿ-ವೋಟರ್ ಸಮೀಕ್ಷೆಯ ಪ್ರಕಾರ, ಶೇಕಡಾ 43 ರಷ್ಟು ಜನರು ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿಯಾಗಬೇಕು ಎಂದು ಆಶಿಸಿದ್ದಾರೆ. ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಲು 24 ಪ್ರತಿಶತದಷ್ಟು ಜನ ಬೆಂಬಲ ಸೂಚಿಸಿದ್ದಾರೆ. ಶೇಕಡ 19 ರಷ್ಟು ಜನರು ಬಿಜೆಪಿ ಅಭ್ಯರ್ಥಿಯೊಬ್ಬರು ಮುಖ್ಯಮಂತ್ರಿಯಾಗಬೇಕು ಎಂದು ಒಲವು ವ್ಯಕ್ತಪಡಿಸಿದ್ದಾರೆ.
ನಿತೀಶ್ ಕುಮಾರ್ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಇದು ಎಚ್ಚರಿಕೆಯ ಸಂದೇಶವಾಗಿದೆ. ತೇಜಸ್ವಿ ಯಾದವ್ ಅವರಿಗೆ ಎಲ್ಲಾ ವರ್ಗದವರಿಂದ ಬೆಂಬಲ ವ್ಯಕ್ತವಾಗಿದೆ. ಆರ್ಜೆಡಿ ನಾಯಕ ತೇಜಸ್ವಿ ಯಾದವ್ಗೆ ಬಿಹಾರದ ಯುವ ಜನತೆ ಹೆಚ್ಚಿನ ಬೆಂಬಲ ಸೂಚಿಸಿದ್ದಾರೆ. ಬಿಹಾರ ಯುವಜನತೆ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಾರೆ ಎಂದು ಸಮೀಕ್ಷೆಯು ತಿಳಿಸಿದೆ.
ತೇಜಸ್ವಿ ಯಾದವ್ರನ್ನು ಮೆಚ್ಚಿದ ಮಹಿಳಾ ಮತದಾರರು
ಮಹಿಳಾ ಮತದಾರರೂ ಕೂಡ ತೇಜಸ್ವಿ ಯಾದವ್ ಅವರ ಪರವಾಗಿದ್ದಾರೆ. ಆರ್ಜೆಡಿ ನಾಯಕನ ಜನಪ್ರಿಯತೆಯು ಸಮಾಜದ ಎಲ್ಲಾ ವರ್ಗಗಳಲ್ಲಿ ಹೆಚ್ಚಳವಾಗಿದೆ. ಸಮೀಕ್ಷೆಯ ಪ್ರಕಾರ, ಶೇಕಡಾ 44 ರಷ್ಟು ಮಹಿಳೆಯರು ತೇಜಸ್ವಿಯನ್ನು ಬಿಹಾರ ಸಿಎಂ ಆಗಿ ತಮ್ಮ ಮೊದಲ ಆಯ್ಕೆ ಎಂದು ಪರಿಗಣಿಸಿದ್ದರೆ, ಕೇವಲ ಶೇಕಡಾ 23.3ರಷ್ಟು ಮಹಿಳೆಯರು ಮಾತ್ರ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ.
ನಿತೀಶ್ ಕುಮಾರ್ ಅವರನ್ನು 2020 ರಲ್ಲಿ ಬೆಂಬಲಿಸಿದ ಸಮುದಾಯದ ಮಹಿಳೆಯರಲ್ಲಿ ಜನಪ್ರಿಯತೆಯ ಕುಸಿತಕ್ಕೆ ಸಾಕ್ಷಿಯಾಗಿದೆ. ಭಾರತೀಯ ಜನತಾ ಪಕ್ಷವು ಮತ್ತೆ ಮೂರನೇ ಸ್ಥಾನದಲ್ಲಿದೆ, ಕೇವಲ ಶೇಕಡಾ 17.5 ರಷ್ಟು ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದೆ.
ಒಬಿಸಿ, ಮುಸ್ಲಿಮರು ಏನಂತಾರೆ
ಜಾತಿಗಳ ಆಧಾರದ ಮೇಲೆ ಜನಪ್ರಿಯತೆಯನ್ನು ಗಮನಿಸಿದರೆ ಇಲ್ಲಿಯೂ ತೇಜಸ್ವಿ ಯಾದವ್ ನಿತೀಶ್ ಕುಮಾರ್ ಅವರಿಗಿಂತ ಮುಂದಿದ್ದಾರೆ. ಒಬಿಸಿ ವರ್ಗದಲ್ಲಿ ಶೇಕಡ 44.6ರಷ್ಟು ಜನರು ತೇಜಸ್ವಿ ಯಾದವ್ ಪರವಾಗಿ ಒಲವು ತೋರಿದರೆ, ನಿತೀಶ್ ಕುಮಾರ್ ಪರವಾಗಿ ಶೇಕಡಾ 24.7ರಷ್ಟು ಜನ ಬೆಂಬಲ ನೀಡಿದ್ದಾರೆ. ಶೇಕಡ 12.4ರಷ್ಟು ಮಂದಿ ಮಾತ್ರ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ಸಮುದಾಯ ಕೂಡ ಬಹಿರಂಗವಾಗಿ ತೇಜಸ್ವಿ ಯಾದವ್ ಪರವಾಗಿ ಒಲವು ತೋರಿದೆ. ಪ್ರಸ್ತುತ ಶೇಕಡ 54ರಷ್ಟು ಮುಸ್ಲಿಮರು ತೇಜಸ್ವಿ ಯಾದವ್ ಅವರನ್ನು ಉತ್ತಮ ಸಿಎಂ ಎಂದು ಪರಿಗಣಿಸಿದ್ದು, ಶೇಕಡ 30ರಷ್ಟು ಮಂದಿ ಮಾತ್ರ ನಿತೀಶ್ ಕುಮಾರ್ ಪರವಾಗಿದ್ದಾರೆ. ಬಿಜೆಪಿ ಪಕ್ಷ ಮುಸ್ಲಿಮರ ವಿಶ್ವಾಸ ಗಳಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಕೇವಲ 3.3 ಪ್ರತಿಶತ ಮುಸ್ಲಿಮರು ಬಿಜೆಪಿ ಅಭ್ಯರ್ಥಿ ಸಿಎಂ ಆಗಬೇಕು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ಅವಮಾನ
77 ಶಾಸಕರನ್ನು ಹೊಂದಿರುವ ವಿಧಾನಸಭೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ನಾಯಕರು ಪ್ರಮಾಣ ವಚನ ಸಮಾರಂಭದಲ್ಲಿ ಗೈರುಹಾಜರಾಗಿದ್ದರು.
"ನಮಗೆ ಯಾವುದೇ ಆಹ್ವಾನ ಬಂದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎಗೆ ಮತ ಹಾಕಿದ ಬಿಹಾರದ ಜನತೆಗೆ ದ್ರೋಹ ಬಗೆದ ನಂತರ ಸ್ಥಾಪಿಸಲಾದ ಸರ್ಕಾರ ರಚನೆಗೆ ಸಾಕ್ಷಿಯಾಗಲು ನಾವು ಇಷ್ಟಪಡುವುದಿಲ್ಲ" ಎಂದು ಬಿಜೆಪಿ ನಾಯಕ ಸುಶೀಲ್ ಮೋದಿ ಹೇಳಿದ್ದಾರೆ.