ಬಿಹಾರದಲ್ಲಿ ಜಂಗಲ್ ರಾಜ್ ನಿರ್ಮಿಸಿದವರ ಸೋಲಿಸಲು ಸಂಕಲ್ಪ
ಪಾಟ್ನಾ, ಅಕ್ಟೋಬರ್.28: ಬಿಹಾರವನ್ನು ಲೂಟಿ ಹೊಡೆದು ರಾಜ್ಯವನ್ನು "ಜಂಗಲ್ ರಾಜ್" ಆಗಿ ಪರಿವರ್ತಿಸಿದ ಪಕ್ಷವನ್ನು ಮತ್ತೊಮ್ಮೆ ಸೋಲಿಸಲು ಮತದಾರರು ಸಂಕಲ್ಪ ಮಾಡಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ದರ್ಭಾಂಗ್ ನ ರಾಜ್ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು. ಈ ಹಿಂದೆ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ವಿಪರೀತವಾಗಿದ್ದವು. ನಾವು ಅಂಥ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಿದ್ದೇವೆ ಎಂದು ಹೇಳಿದರು.
"ರೈತರು ಮತ್ತು ಉದ್ಯೋಗಕ್ಕಾಗಿ ಮಹಾಘಟಬಂಧನ್ ಗೆ ಮತ"
"ರಾಮ ಮಂದಿರ ಯಾವಾಗ ನಿರ್ಮಾಣ ಮಾಡುತ್ತೀರಿ ಎಂದು ಬಹಳಷ್ಟು ಜನರು ಪ್ರಶ್ನೆ ಮಾಡುತ್ತಿದ್ದರು. ನಾವು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದೆವು. ಅಂದು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಇಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕೊರೊನಾವೈರಸ್ ಬಗ್ಗೆ ಜಾಗೃತಿ ವಹಿಸಲು ಕರೆ:
ಬಿಹಾರ ವಿಧಾನಸಭೆಯ 71 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಮತದಾನ ಪ್ರಕ್ರಿಯೆ ನಡೆಸಲಾಗುತ್ತಿದೆ. ಮತದಾರರು ಪ್ರಜಾಪ್ರಭುತ್ವದ ಉತ್ಸವದಲ್ಲಿ ಭಾಗವಹಿಸುವುದರ ಜೊತೆಗೆ ಕೊವಿಡ್-19 ಕುರಿತು ಜಾಗೃತಿ ವಹಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ ಮತದಾನ:
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್.28ರ ಬುಧವಾರ ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ 2.14 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 1.01 ಕೋಟಿ ಮಹಿಳೆಯರಾಗಿದ್ದು, 599 ತೃತೀಯ ಲಿಂಗದವರು ಸೇರಿದ್ದಾರೆ ಎಂದು ಚುನಾವಣಾ ಆಯೋಗವು ತಿಳಿಸಿದೆ. 71 ವಿಧಾನಸಭಾ ಕ್ಷೇತ್ರಗಳಲ್ಲಿ 952 ಪುರುಷ ಮತ್ತು 114 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸುಮಾರು 2 ಕೋಟಿಗೂ ಅಧಿಕ ಮತದಾರರು ಒಟ್ಟು 1066 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.