ಅಧಿಕಾರಿಗಳು ಮಾತು ಕೇಳಿಲ್ಲವೆಂದರೆ ಬಾರುಕೋಲಿನಿಂದ ಬಾರಿಸಿ; ಬಿಜೆಪಿ ನಾಯಕನ ಹೇಳಿಕೆ
ಬೆಗುಸರೈ, ಮಾರ್ಚ್ 7: "ಸರ್ಕಾರಿ ಅಧಿಕಾರಿಗಳು ನಿಮ್ಮ ಸಮಸ್ಯೆಯನ್ನು ಆಲಿಸದೇ ಇದ್ದರೆ ಅವರಿಗೆ ಬಾರುಕೋಲಿನಿಂದ ಹೊಡೆಯಿರಿ" ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಜನರಿಗೆ ಸಲಹೆ ನೀಡುವ ಮೂಲಕ ತಮ್ಮ ಕ್ಷೇತ್ರದಲ್ಲಿನ ಅಸಮರ್ಥ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶನಿವಾರ ಬೆಗುಸರೈನ ಖೋಡವಾಂಡ್ಪುರದಲ್ಲಿ ಕೃಷಿ ಸಂಸ್ಥೆಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಜನರಿಂದ ನನಗೆ ಹಲವು ದೂರುಗಳು ಬರುತ್ತಿವೆ. ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ, ಸ್ಪಂದಿಸುತ್ತಿಲ್ಲ ಎಂದು ದೂರುಗಳನ್ನು ನೀಡುತ್ತಿದ್ದಾರೆ. ಆದರೆ ಯಾರೂ ತಲೆಕೆಡಿಸಿಕೊಂಡಿಲ್ಲ" ಎಂದು ಹೇಳಿದ್ದಾರೆ.
ಮಕ್ಕಳನ್ನು ಹೆರುವುದು ನೀವು, ಖರ್ಚನ್ನೇಕೆ ಸರ್ಕಾರ ಭರಿಸಬೇಕು?; ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ
"ಅದಕ್ಕೆ ನಾನು, ಈ ಸಣ್ಣ ಸಣ್ಣ ವಿಷಯಕ್ಕೆ ಏಕೆ ನನ್ನ ಬಳಿ ಬರುತ್ತೀರ? ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು, ಬಿಡಿಒ ಇವರೆಲ್ಲರೂ ಜನರ ಸೇವೆಗೆಂದೇ ಇರುವವರು. ಇವರು ನಿಮ್ಮ ಮಾತುಗಳನ್ನು ಕೇಳಲಿಲ್ಲ ಎಂದರೆ, ಬಿದಿರು ಕೋಲನ್ನು ತೆಗೆದುಕೊಂಡು ಎರಡೂ ಕೈಗಳಿಂದ ಅವರನ್ನು ಚೆನ್ನಾಗಿ ಥಳಿಸಿ" ಎಂದು ಹೇಳಿದ್ದಾರೆ.
"ಅಧಿಕಾರಿಗಳಿಂದ ನ್ಯಾಯಸಮ್ಮತವಲ್ಲದ ಕೆಲಸವನ್ನು ಮಾಡಲು ಹೇಳುತ್ತಿಲ್ಲ. ನ್ಯಾಯಸಮ್ಮತವಲ್ಲದ ಕೆಲಸವನ್ನು ನಾವು ಸಹಿಸುವುದೂ ಇಲ್ಲ" ಎಂದು ಆಕ್ರೋಶದಲ್ಲಿ ಮಾತನಾಡಿದ್ದಾರೆ.
ಆದರೆ ಈ ಹೇಳಿಕೆ ಕುರಿತು ಮತ್ತೊಬ್ಬ ಬಿಜೆಪಿ ನಾಯಕ ಆಕ್ಷೇಪ ವ್ಯಕ್ತಪಡಿಸಿದ್ದು, ಸಿಂಗ್ ಅವರ ಈ ಹೇಳಿಕೆಯನ್ನು ಪ್ರಾಯೋಗಿಕವಾಗಿ ಪಾಲಿಸಲು ಹೋಗಬೇಡಿ. ಸಾರ್ವಜನಿಕವಾಗಿ ಹೇಳಿಕೆ ನೀಡುವಾಗ ಸಚಿವರು ಜವಾಬ್ದಾರಿಯುತವಾಗಿರಬೇಕಾಗುತ್ತದೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಳೆದ ವಾರವಷ್ಟೇ ಮೀನುಗಾರಿಕೆ ಸಚಿವಾಲಯ ಸ್ಥಾಪನೆ ಕುರಿತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಸಿಂಗ್ ಮಾತನಾಡಿದ್ದರು. "ಸಾಲು ಸಾಲು ಸೋಲಿನಿಂದ ರಾಹುಲ್ ಗಾಂಧಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಮೀನುಗಾರಿಕೆಗೆಂದೇ 20,050 ಕೋಟಿ ರೂ ಹೂಡಿಕೆ ಮಾಡಿರುವುದೂ ಇವರಿಗೆ ತಿಳಿದಿಲ್ಲವೇ" ಎಂದು ತಿರುಗೇಟು ನೀಡಿದ್ದರು.