ಅಚ್ಚರಿ ಸುದ್ದಿ: ಬಿಹಾರದಲ್ಲಿ ಬಡ ವ್ಯಕ್ತಿಯ ಬ್ಯಾಂಕ್ ಖಾತೆಗೆ 5.50 ಲಕ್ಷ ರೂ. ಜಮೆ!
ಪಾಟ್ನ, ಸೆಪ್ಟೆಂಬರ್ 15: ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಬ್ಯಾಂಕಿಂಗ್ ದೋಷದಿಂದ ಬಡ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ 5.5 ಲಕ್ಷ ರೂಪಾಯಿ ಜಮೆ ಆಗಿದ್ದು, ಅದನ್ನು ಹಿಂತಿರುಗಿಸಲು ವ್ಯಕ್ತಿ ನಿರಾಕರಿಸಿದ್ದಾರೆ. ಅದಷ್ಟೇ ಆಗಿದ್ದರೆ ಪರವಾಗಿಲ್ಲ, ತನ್ನ ಬ್ಯಾಂಕ್ ಖಾತೆಗೆ ಜಮೆ ಆಗಿರುವ 5.5 ಲಕ್ಷ ರೂಪಾಯಿ ಹಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ನೀಡಿದ್ದಾರೆ ಎಂದು ವ್ಯಕ್ತಿ ವಾದಿಸುತ್ತಿರುವುದು ಸಾಕಷ್ಟು ವೈರಲ್ ಆಗುತ್ತಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಸ್ವಿಸ್ ಬ್ಯಾಂಕಿನಲ್ಲಿರುವ ಎಲ್ಲ ಅಕ್ರಮ ಹಣವನ್ನು ದೇಶಕ್ಕೆ ವಾಪಸ್ ತರುತ್ತೇನೆ. ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಣ ನೀಡುತ್ತೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಮೊದಲು ತಮ್ಮ ಚುನಾವಣಾ ಬಾಷಣಗಳಲ್ಲಿ ಹೇಳಿದ್ದರು.
ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರು ಇಟ್ಟಿರುವ ಹಣವೆಷ್ಟು ಗೊತ್ತೇ?
ಬಿಹಾರದಲ್ಲಿ ಇತ್ತೀಚಿಗೆ ಖಗಾರಿಯಾ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಬಖ್ತಿಯಾರ್ಪುರ್ ಗ್ರಾಮದ ನಿವಾಸಿ ರಂಜಿತ್ ದಾಸ್, ಅದರ ಬಗ್ಗೆ ಉಲ್ಲೇಖಿಸಿದ್ದು ತಮ್ಮ ಖಾತೆಗೆ ಸ್ವತಃ ಪ್ರಧಾನಿಯವರೇ ಹಣ ಹಾಕಿದ್ದಾರೆ ಎಂದು ಹೇಳುತ್ತಿದ್ದಾರೆ.
ಹಣ ಹಿಂತಿರುಗಿಸಲು ನಕಾರ:
ಬ್ಯಾಂಕ್ ಲೋಪದಿಂದಾಗಿ ರಂಜಿತ್ ದಾಸ್ ಖಾತೆಗೆ 5.5 ಲಕ್ಷ ರೂಪಾಯಿ ಜಮೆ ಆಗಿರುವುದನ್ನು ಅರಿತುಕೊಂಡ ಬ್ಯಾಂಕ್ ಸಿಬ್ಬಂದಿಯು ಅದನ್ನು ವಾಪಸ್ ನೀಡುವಂತೆ ಕೋರಿದ್ದಾರೆ. ಆದರೆ ಹಣ ವಾಪಸ್ ನೀಡುವುದಕ್ಕೆ ತಿರಸ್ಕರಿಸಿದ್ದಾರೆ. ಆ ಹಣವನ್ನು ತಾವು ಖರ್ಚು ಮಾಡಲಿದ್ದು, ಅದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಖಾತೆಗೆ ಜಮೆ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಅಲ್ಲದೇ ಯಾವಾಗ ತಮ್ಮ ಖಾತೆಗೆ 5.5 ಲಕ್ಷ ರೂಪಾಯಿ ಜಮೆ ಆಯಿತೋ ಅದನ್ನು 15 ಲಕ್ಷ ರೂಪಾಯಿ ಹಣ ಜಮೆ ಮಾಡುವಂತೆ ಆಶ್ವಾಸನೆ ನೀಡಿದ್ದ ಪ್ರಧಾನಿಯವರು ನೀಡಿದ ಮೊದಲ ಕಂತು ಎಂದು ತಿಳಿದುಕೊಂಡಿದ್ದಾರೆ.
ನನ್ನ ಬ್ಯಾಂಕ್ ಖಾತೆಯಲ್ಲಿ ಹಣವೇ ಇಲ್ಲ:
"ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಯಾವಾಗ ನನ್ನ ಖಾತೆಗೆ ಹಣ ಜಮೆ ಆಯಿತೋ ಅಂದು ನಾನು ತುಂಬಾ ಸಂತೋಷವಾಗಿದ್ದೆನು. ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಹಿಂದೆ ಹೇಳಿದಂತೆ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಾಕುವುದರ ಭಾಗವಾಗಿ ಮೊದಲ ಕಂತಿನಲ್ಲಿ ಇಷ್ಟೊಂದು ಹಣವನ್ನು ಕಳುಹಿಸಿದ್ದಾರೆ ಎಂದು ತಿಳಿದುಕೊಂಡಿದ್ದೆನು. ನಾನು ಎಲ್ಲ ಹಣವನ್ನು ಖರ್ಚು ಮಾಡಿದ್ದು, ಇದೀಗ ನನ್ನ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲ. ಬ್ಯಾಂಕ್ ಖಾತೆಗೆ ತುಂಬಲು ಅಥವಾ ಅಧಿಕಾರಿಗಳಿಗೆ ನೀಡಲು ಈಗ ನನ್ನ ಬಳಿ ಹಣವೇ ಇಲ್ಲ," ಎಂದು ರಂಜಿತ್ ದಾಸ್ ಹೇಳಿಕೆ ನೀಡಿದ್ದಾರೆ.
ಹಣ ನೀಡಲು ನಿರಾಕರಿಸಿದ ವ್ಯಕ್ತಿ ಬಂಧನ:
ತನ್ನ ಬ್ಯಾಂಕ್ ಖಾತೆಗೆ ಜಮೆ ಆಗಿದ್ದ ಹಣ ವಾಪಸ್ ನೀಡುವುದಕ್ಕೆ ನಿರಾಕರಿಸಿದ ರಂಜಿತ್ ದಾಸ್ ವಿರುದ್ಧ ಬ್ಯಾಂಕ್ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿದ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. "ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ರಂಜಿತ್ ದಾಸ್ ಅನ್ನು ನಾವು ಬಂಧಿಸಿದ್ದು, ಮುಂದಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾನ್ಸಿ ಪೊಲೀಸ್ ಠಾಣೆ ಅಧಿಕಾರಿ ದೀಪಕ್ ಕುಮಾರ್ ಹೇಳಿದ್ದಾರೆ.