ಬಿಜೆಪಿ ಕಚೇರಿ ಎದುರು 35 ರೂ.ಗೆ ಈರುಳ್ಳಿ ಮಾರಾಟ ಮಾಡಿದ ಮಾಜಿ ಸಂಸದ
ಪಟ್ನಾ, ಡಿಸೆಂಬರ್ 3: ಬಿಹಾರದ ಮಾಜಿ ಸಂಸದ ಮತ್ತು ಜನ್ ಅಧಿಕಾರ್ ಪಾರ್ಟಿಯ (ಜೆಎಪಿ) ಸಂಚಾಲಕ ಪಪ್ಪು ಯಾದವ್, ಪಟ್ನಾದ ಬಿಜೆಪಿ ಕಚೇರಿ ಎದುರು ಮಂಗಳವಾರ ಈರುಳ್ಳಿ ಮಾರಾಟ ಮಾಡುವ ಮೂಲಕ ಈರುಳ್ಳಿ ದರ ಹೆಚ್ಚಳದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ದೇಶದಾದ್ಯಂತ ಈರುಳ್ಳಿ ದರ ಗಗನಕ್ಕೇರಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಪಪ್ಪು ಯಾದವ್ ಕೆ.ಜಿಗೆ ಕೇವಲ 35 ರೂ. ದರದಲ್ಲಿ ಈರುಳ್ಳಿ ಮಾರಾಟ ಮಾಡಿದರು.
ಪಟ್ನಾದಲ್ಲಿ ಒಂದು ಕೆ.ಜಿ. ಈರುಳ್ಳಿ 80-90 ರೂ. ದರದಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ ಜನಸಾಮಾನ್ಯರನ್ನು ತಲುಪಲು ಮತ್ತು ಬಿಜೆಪಿ ವಿರುದ್ಧ ದಾಳಿ ನಡೆಸಲು ಪಪ್ಪು ಯಾದವ್ ಈ ಸಂದರ್ಭವನ್ನು ಬಳಸಿಕೊಂಡಿದ್ದಾರೆ.
ಹೆಲ್ಮೆಟ್ ಧರಿಸಿ ಕಡಿಮೆ ಬೆಲೆಗೆ ಈರುಳ್ಳಿ ಮಾರಿದ ಸೊಸೈಟಿ ಸಿಬ್ಬಂದಿ
ಪಪ್ಪು ಯಾದವ್ ಅವರು ಕಡಿಮೆ ದರದಲ್ಲಿ ಈ ಪ್ರದೇಶದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಜನರು ಬಿಜೆಪಿ ಕಚೇರಿಯತ್ತ ಧಾವಿಸಿದರು. ಈರುಳ್ಳಿ ಖರೀದಿ ಮಾಡಲು ಮುಗಿಬಿದ್ದರು. ಇದರಿಂದ ಬಿಜೆಪಿ ಕಚೇರಿ ಎದುರು ಜನಜಂಗುಳಿ ತುಂಬಿತ್ತು.
ಸರ್ಕಾರ ಏನೂ ಮಾಡುತ್ತಿಲ್ಲ
ಕಳೆದ ಕೆಲವು ವಾರಗಳಿಂದ ಈರುಳ್ಳಿ ತೀರಾ ದುಬಾರಿಯಾಗಿದೆ. ಅಡುಗೆಗೆ ನಿತ್ಯವೂ ಬಹಳ ಅಗತ್ಯವಾಗಿರುವ ಈರುಳ್ಳಿಯನ್ನು ಖರೀದಿ ಮಾಡಲಾಗದೆ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಜನರಿಗೆ ಕಡಿಮೆ ಬೆಲೆಯಲ್ಲಿ ಈರುಳ್ಳಿ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಪಪ್ಪು ಯಾದವ್ ಕಿಡಿಕಾರಿದರು.
ಪಾಸ್ವಾನ್ ವಿರುದ್ಧ ವಾಗ್ದಾಳಿ
ಈರುಳ್ಳಿ ಆಮದು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಡಿಸೆಂಬರ್ ಮಧ್ಯದ ವೇಳೆಗೆ ಬೆಲೆ ಕಡಿಮೆಯಾಗಲಿದೆ ಎಂದು ನಿರಂತರವಾಗಿ ಭರವಸೆ ನೀಡುತ್ತಿರುವ ಕೇಂದ್ರ ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ವಿತರಣೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ವಿರುದ್ಧ ಕೂಡ ಪಪ್ಪು ಯಾದವ್ ಹರಿಹಾಯ್ದರು.
ಇಳಿಯುವವರೆಗೆ ಏನು ಮಾಡಬೇಕು?
'ಜನಸಾಮಾನ್ಯರಿಗೆ ನೆಮ್ಮದಿ ನೀಡಲು ಕೇಂದ್ರ ಮತ್ತು ಬಿಹಾರ ಸರ್ಕಾರಗಳು ಏನನ್ನೂ ಮಾಡುತ್ತಿಲ್ಲ. ಇಂಧನದ ಮೇಲೆ ಸಬ್ಸಿಡಿ ನೀಡುತ್ತಿರುವ ಕೇಂದ್ರ ಸರ್ಕಾರಕ್ಕೆ ಈರುಳ್ಳಿ ಮೇಲೆ ಸಬ್ಸಿಡಿ ನೀಡಲು ಏಕೆ ಸಾಧ್ಯವಾಗುತ್ತಿಲ್ಲ? ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಇಳಿಯಲಿದೆ ಎಂದು ಸಚಿವರು ಹೇಳುತ್ತಲೇ ಇದ್ದಾರೆ. ಹಾಗಾದರೆ ಅಲ್ಲಿಯವರೆಗೂ ಜನರು ಏನು ಮಾಡಬೇಕು?' ಎಂದು ಪ್ರಶ್ನಿಸಿದರು.
ಪಪ್ಪು ಯಾದವ್ 'ನಾಟಕ'
ಪಪ್ಪು ಯಾದವ್ ಅವರು ಪಟ್ನಾದ ಬಿಜೆಪಿ ಕಚೇರಿ ಎದುರು ಕಡಿಮೆ ಬೆಲೆಗೆ ಈರುಳ್ಳಿ ಮಾರಾಟ ಮಾಡಿರುವ ನಡೆಯನ್ನು 'ನಾಟಕ' ಎಂದು ಬಿಜೆಪಿ ಶಾಸಕ ಮತ್ತು ವಕ್ತಾರ ಪ್ರೇಮ್ ರಂಜನ್ ಪಟೇಲ್ ಟೀಕಿಸಿದರು.
ಹೆಲ್ಮೆಟ್ ಧರಿಸಿ ಮಾರಾಟ
ಕೆಲವು ದಿನಗಳ ಹಿಂದಷ್ಟೇ ಸಹಕಾರ ಸಂಘವೊಂದರ ಸಿಬ್ಬಂದಿ ಪಟ್ನಾದಲ್ಲಿ ಕೆ.ಜಿ.ಗೆ 30 ರೂ. ದರದಲ್ಲಿ ಈರುಳ್ಳಿ ಮಾರಾಟ ಮಾಡಿತ್ತು. ಈ ವೇಳೆ ನೂಕುನುಗ್ಗಲು ಸಂಭವಿಸುವುದರಿಂದ ಭದ್ರತೆ ನೀಡುವಂತೆ ಸಂಘವು ಪೊಲೀಸರಿಗೆ ಕೇಳಿತ್ತು. ಅದಕ್ಕೆ ಪೊಲೀಸರು ನಿರಾಕರಿಸಿದ್ದರಿಂದ ಸಂಘದ ಸಿಬ್ಬಂದಿ ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡಿದ್ದರು.