ನಿರ್ಭಯಾ ಆರೋಪಿಗಳನ್ನು ಗಲ್ಲಿಗೇರಿಸಲು ರೆಡಿ ಆಗ್ತಿದೆ ನೇಣು ಕುಣಿಕೆ
ನವದೆಹಲಿ, ಡಿಸೆಂಬರ್ 10: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸಲು ಕುಣಿಗೆ ರೆಡಿಯಾಗುತ್ತಿದೆ.
ಹೈದರಾಬಾದ್ ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಿರುವ ಬೆನ್ನಲ್ಲೇ ನಿರ್ಭಯಾ ಆರೋಪಿಗಳನ್ನು ಕೂಡ ಗಲ್ಲಿಗೇರಿಸಿ ಎನ್ನುವ ಒತ್ತಡ ಕೇಳಿಬರುತ್ತಿದೆ.
ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧರಿರುವ ಪೊಲೀಸ್ ಇವರೇ!
ಅಪರಾಧಿಗಳನ್ನು ಗಲ್ಲಿಗೇರಿಸಲು 10 ಹಗ್ಗಗಳನ್ನು ತಯಾರಿಸಿಡುವಂತೆ ಬಿಹಾರದ ಬಕ್ಸರ್ ಜೈಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
ಕಬ್ಬಿಣ ಮತ್ತು ಹಿತ್ತಾಳೆಯ ತಂತಿಗಳನ್ನು ಬಳಸಿ ಹಗ್ಗ ತಯಾರಿಸಲಾಗುತ್ತದೆ. ನೇಣುಹಗ್ಗ ತಯಾರಿಕೆಯಲ್ಲಿ ಯಂತ್ರಗಳ ಬಳಕೆ ಅತಿ ಕಡಿಮೆ. ಕೈಯಿಂದಲೇ ಇದನ್ನು ತಯಾರಿಸಬೇಕಾಗುತ್ತದೆ.
ಕಬ್ಬಿಣ ಮತ್ತು ಹಿತ್ತಾಳೆಯ 152 ಎಳೆಗಳನ್ನು ಹೆಣೆದು , ನಿಗದಿತ ಗಾತ್ರದ ಹಗ್ಗ ತಯಾರಿಸಲಾಗುತ್ತದೆ. ಇಂಥಹ ಸುಮಾರು 7 ಸಾವಿರ ಎಳೆಗಳು ಒಂದು ಹಗ್ಗದಲ್ಲಿರುತ್ತದೆ. ಒಂದು ಹಗ್ಗ ತಯಾರಿಕೆಗೆ ಐದರಿಂದ ಆರು ಕಾರ್ಮಿಕರು ಮೂರು ದಿನಗಳ ಕಾಲ ಕೆಲಸ ಮಾಡಬೇಕಾಗುತ್ತದೆ.
ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಶೀಗ್ರವೇ ನೇಣುಗಂಬಕ್ಕೆ ಏರಿಸಲಾಗುತ್ತದೆ.
ಅತ್ಯನ್ನುತ ವಿಶ್ವಸನೀಯ ಮೂಲಗಳು ಈ ವಿಷಯವನ್ನು ಖಚಿತಪಡಿಸಿವೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ನಿರ್ಭಯಾ ಅತ್ಯಾಚಾರಿ ಮತ್ತು ಹಂತಕರ ಕ್ಷಮಾದಾನ ಅರ್ಜಿಯನ್ನು ಕೇಂದ್ರ ಗೃಹ ಸಚಿವಾಲಯ ಸರಾಸಗಟಾಗಿ ತಳ್ಳಿ ಹಾಕಿ ಅಂತಿಮ ನಿರ್ಧಾರಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲಾಗಿತ್ತು.