ಕೋವಿಡ್ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಬಿಹಾರ ಸರ್ಕಾರದಿಂದ 4 ಲಕ್ಷ ರೂ. ಪರಿಹಾರ
ಪಾಟ್ನಾ, ಜೂನ್ 7: ಕೊರೊನಾವೈರಸ್ನಿಂದ ಮೃತಪಟ್ಟವರ ಕುಟುಂಬಕ್ಕೆ ಬಿಹಾರ ಸರ್ಕಾರ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮಂಗಳವಾರ ಘೋಷಣೆ ಮಾಡಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಬೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಬಿಹಾರದಲ್ಲಿ ಈವರೆಗೆ 5424 ಜನರು ಕೊರೊನಾವೈರಸ್ಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ರಾಜ್ಯದಲ್ಲಿ ಇಳಿಮುಖವಾದ ಕೊರೊನಾ ಸೋಂಕು: 9,808 ಪ್ರಕರಣಗಳು ಪತ್ತೆ
ಬಿಹಾರದಲ್ಲಿ ಈವರೆಗೆ ಒಟ್ಟು 7,13,879 ಜನರಿಗೆ ಕೊರೊನಾವೈರಸ್ ದೃಢಪಟ್ಟಿದೆ. ಇದರಲ್ಲಿ 7,00,224 ಜನರು ಈಗಾಗಲೇ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಚೇತರಿಕೆ ಕಂಡವರ ಪ್ರಮಾಣ 98.08 ಶೇಕಡಾಗೆ ಏರಿಕೆಯಾಗಿದೆ. ಸದ್ಯ 8,230 ಕೊರೊನಾವೈರಸ್ ಪ್ರಕರಣಗಳು ಸಕ್ರಿಯವಾಗಿದೆ.
ಇದಕ್ಕೂ ಮುನ್ನ ರಾಜ್ಯದಲ್ಲಿ ತಿಂಗಳಿಗೂ ಹೆಚ್ಚು ಕಾಲ ಹೇರಲಾಗಿದ್ದ ಲಾಕ್ಡೌನ್ ಮುಂದುವರಿಸದಿರುವ ನಿರ್ಧಾರ ತೆಗೆದುಕೊಳ್ಳಲಾಯಿತು. ಹಾಗಾಗಿ ಜೂನ್ 9ರಿಂದ ಬಿಹಾರದಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭವಾಗಲಿದೆ. ಹಾಗಿದ್ದರೂ ಬಿಹಾರದಲ್ಲಿ ನೈಟ್ ಕರ್ಫ್ಯೂ ಮುಂದುವರಿಯಲಿದ್ದು ಸಾರ್ವಜನಿಕ ಸಭೆಗಳಿಗೆ ನಿಷೇಧ ಮುಂದುವರಿಯಲಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಕೊರೊನಾ ವೈರಸ್ನ ಹರಡುವಿಕೆ ಪ್ರಮಾಣ ಕಡಿಮೆಯಾದ ಕಾರಣದಿಂದಾಗಿ ಅನ್ಲಾಕ್ಗೆ ಪ್ರಕ್ರಿಯೆ ಆರಂಭಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ನಂತರ ಅನ್ಲಾಕ್ ಪ್ರಕ್ರಿಯೆಯ ಬಗ್ಗೆ ನಿತೀಶ್ ಕುಮಾರ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಯಾಗದಂತೆ ಎಚ್ಚರವಹಿಸುವ ಅಗತ್ಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಹಾರದಲ್ಲಿ ಎರಡನೇ ಅಲೆಯ ಅಬ್ಬರವನ್ನು ಆರಂಭಿಸಿದ ಬಳಿಕ ಮೇ 5ರಿಂದ ಲಾಕ್ಡೌನ್ ಘೋಷಿಸಲಾಯಿತು. ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷ ದಾಟಿತ್ತು. ಇದು ಏಪ್ರಿಲ್ ಮೊದಲ ವಾರದಲ್ಲಿದ್ದ ಪ್ರಮಾಣಕ್ಕಿಂತ 50 ಶೇಕಡಾದಷ್ಟು ಹೆಚ್ಚಾಗಿತ್ತು. ಆದರೆ ಲಾಕ್ಡೌನ್ ಬಳಿಕ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ.