ಬಿಹಾರ: ಸೆರೆವಾಸ ಅನುಭವಿಸಿದವರನ್ನೇ ಕರೆದು ಟಿಕೆಟ್ ಕೊಟ್ಟಿದ್ದೇಕೆ ಸಿಎಂ ನಿತೀಶ್?
ಪಾಟ್ನಾ, ಆಕ್ಟೋಬರ್.09: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ. ಎರಡು ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಮಂದಗತಿಯ ಸವಾರಿ ನಡೆಸುತ್ತಿದ್ದ ಮಾಜಿ ಸಚಿವೆ ಮಂಜು ವರ್ಮಾ ಅವರಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕರೆದು ಜೆಡಿಯು ಟಿಕೆಟ್ ನೀಡಿದ್ದಾರೆ.
ಮುಜಾಫರ್ ಪುರ್ ಆಶ್ರಯ ಗೃಹದಲ್ಲಿ 34 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಹಗರಣವೊಂದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಅಂದಿನ ಸಮಾಜ ಕಲ್ಯಾಣ ಇಲಾಖೆ ಸಚಿವೆಯಾಗಿದ್ದ ಮಂಜು ವರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಕ್ಕೆ ಸಿಎಂ ಅಧಿಕೃತ ನಿವಾಸಕ್ಕೆ ತೆರಳಿದ್ದರು.
ನಡತೆ ಪ್ರಮಾಣಪತ್ರ ತರಲು ಹೋಗಿದ್ದ ಟಿಕೆಟ್ ಆಕಾಂಕ್ಷಿ ಬಂಧನ
2018 ಆಗಸ್ಟ್ ನಲ್ಲಿ ಅನೆ ಮಾರ್ಗ್ 1ರಲ್ಲಿ ಇರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ತೆರಳಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಅಂದು ಹಗರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮಾಜಿ ಸಚಿವರಿಗೇ ಇಂದು ನಿತೀಶ್ ಕುಮಾರ್ ಅವರು ಮತ್ತೆ ಕರೆದು ತಮ್ಮ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಇದರ ಹಿಂದೆ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳಿವೆ. ಸೋಲು-ಗೆಲುವಿನ ರಾಜಕೀಯ ತಂತ್ರಗಳಿವೆ. ಆದರೆ ಅದೆಲ್ಲಕ್ಕಿಂತ ಮೊದಲು ಇದೇ ಸಚಿವರನ್ನು ಕರೆದು ಟಿಕೆಟ್ ನೀಡುವುದಕ್ಕೆ ಕಾರಣವೇನು ಮತ್ತು ಈ ಹಿಂದಿನ ಇತಿಹಾಸವೇನು ಎನ್ನುವುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ನೋಡಿ.
ಏನಿದು ಮುಜಾಫರ್ ಪುರ್ ಆಶ್ರಯ ಗೃಹ ಹಗರಣ?
ಮುಜಾಫರ್ ಪುರ್ ನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಶ್ರಯ ಗೃಹವನ್ನು ಸ್ಥಾಪಿಸಲಾಗಿತ್ತು. ಸ್ಥಳೀಯ ಪತ್ರಿಕೆ ಮುಖ್ಯಸ್ಥ ಬ್ರಜೇಶ್ ಠಾಕೂರ್ ಅವರು, ಈ ಆಶ್ರಯ ಗೃಹ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಸಚಿವೆ ಮಂಜು ವರ್ಮಾ ಅವರ ಪತಿ ಚಂದ್ರಶೇಖರ್ ವರ್ಮಾ ಕೂಡಾ ಆಗಾಗ ಈ ಆಶ್ರಯ ಗೃಹಕ್ಕೆ ಭೇಟಿ ನೀಡುತ್ತಿದ್ದರು. 2018ರಲ್ಲಿ 34 ಬಾಲಕಿಯರಿದ್ದ ಆಶ್ರಯ ಗೃಹದಲ್ಲಿ ಲೈಂಗಿಕ ದೌರ್ಜನ್ಯದ ಹಗರಣ ನಡೆದಿದ್ದು, ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಮಂಜು ವರ್ಮಾ ರಾಜೀನಾಮೆ ಸಲ್ಲಿಸಿದ್ದರು.
ಚೆರಿಯಾ-ಬರಿಯಾಪುರ್ ವಿಧಾನಸಭಾ ಕ್ಷೇತ್ರ
ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ನಡೆಯುವ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿ ಚೆರಿಯಾ-ಬರಿಯಾಪುರ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಜಿ ಸಚಿವೆ ಮಂಜು ವರ್ಮಾ ಅವರಿಗೆ ಸ್ವತಃ ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಅವರು ಟಿಕೆಟ್ ನೀಡಿದ್ದಾರೆ. ಕುಶ್ವಹಾ ಜನಾಂಗವೇ ಹೆಚ್ಚಾಗಿರುವ ಈ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಮೊದಲು ಮಂಜು ವರ್ಮಾ ಅವರೇ ಎರಡು ಬಾರಿ ಗೆಲುವು ಸಾಧಿಸಿದ್ದರು. ಹೀಗಾಗಿ ಈ ಬಾರಿಯೂ ಮಂಜು ವರ್ಮಾರನ್ನು ಜೆಡಿಯು ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಮಾಜಿ ಸಚಿವೆ ಮಂಜು ವರ್ಮಾ ಜೈಲುವಾಸ
ಮಜಾಫರ್ ಪುರ್ ಆಶ್ರಯ ಗೃಹ ಹಗರಣದ ಮೇಲ್ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಂಜು ವರ್ಮಾರನ್ನು ಏಕೆ ಬಂಧಿಸಿಲ್ಲ ಎಂದು ಖಡಕ್ ಆಗಿ ಪ್ರಶ್ನಿಸಿತ್ತು. ಇದಾದ ನಂತರ ಬಂಧಿಸಲ್ಪಟ್ಟಿದ್ದ ಮಾಜಿ ಸಚಿವೆ ಆರು ತಿಂಗಳು ಸೆರೆವಾಸ ಅನುಭವಿಸಿದ್ದರು. ಇದಕ್ಕೆ ಕಾರಣವಾಗಿದ್ದು ಸಚಿವೆಯ ನಿವಾಸದಲ್ಲಿ ಸಿಕ್ಕಿದ್ದ ಅಕ್ರಮ ಶಸ್ತ್ರಾಸ್ತ್ರಗಳು. ಬಿಹಾರ ಸರ್ಕಾರವು ರಚಿಸಿದ ವಿಶೇಷ ತನಿಖಾ ತಂಡದ ತನಿಖೆಯಲ್ಲಿ ಚೆರಿಯಾ ಬರಿಯಾಪುರ್ ನಲ್ಲಿರುವ ಸಚಿವೆ ಮಂಜು ವರ್ಮಾ ಅವರ ನಿವಾಸದಲ್ಲಿ 50 ಬುಲೆಟ್ ಗಳು ಪತ್ತೆಯಾಗಿದ್ದವು. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣವನ್ನೂ ದಾಖಲಿಸಿಕೊಳ್ಳಲಾಗಿತ್ತು.
ಬಿಹಾರ ಚುನಾವಣೆ: ಬಿಜೆಪಿ ರೆಬೆಲ್ಗಳ ಆಶ್ರಯತಾಣವಾದ ಎಲ್ಜೆಪಿ
ಅಂದು ಹಗರಣದ ಬಗ್ಗೆ ಸಚಿವೆ ಮಂಜು ವರ್ಮಾ ಹೇಳಿಕೆ
ಆಶ್ರಯ ಗೃಹ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವೆ ಮಂಜು ವರ್ಮಾ ವರದಿಗಾರರಿಗೆ ಹೀಗೆ ಹೇಳಿದ್ದರು. "ಸಮಾಜ ಕಲ್ಯಾಣ ಇಲಾಖೆ ಸಚಿವೆಯಾಗಿ ಹಗರಣವನ್ನು ಬಹಿರಂಗಪಡಿಸಿದ್ದಕ್ಕಾಗಿ ನನಗೆ ಮನ್ನಣೆ ನೀಡಬೇಕಿತ್ತು. ಅಂದು ನಾನು ಇಲಾಖೆಯ ಮಂತ್ರಿಯಾಗಿ, ಆಶ್ರಯ ಗೃಹಗಳ ಸಾಮಾಜಿಕ ಲೆಕ್ಕಪರಿಶೋಧನೆಗೆ ಆದೇಶಿಸಿದೆ ನಂತರದಲ್ಲಿ ಅದರ ವರದಿಯಿಂದ ಹಗರಣವನ್ನು ಬಹಿರಂಗಪಡಿಸಿದೆ. ನಾನು ವೈಯಕ್ತಿಕವಾಗಿ ಒಮ್ಮೆ ಆಶ್ರಯ ಗೃಹಕ್ಕೆ ಭೇಟಿ ನೀಡಿದ್ದೆ, ಆ ಸಮಯದಲ್ಲಿ ಎಲ್ಲವೂ ಸರಿಯಾಗಿತ್ತು" ಎಂದು ಹೇಳಿದ್ದರು. ಅಲ್ಲದೇ "ಕುಶ್ವಾಹ ಜಾತಿಯ ಸದಸ್ಯರು "ಎಂದಿಗೂ ಯಾರನ್ನೂ ನಿಗ್ರಹಿಸುವುದಿಲ್ಲ ಅಥವಾ ಘೋರ ಅಪರಾಧಗಳಿಗೆ ಒಳಗಾಗುವುದಿಲ್ಲ, ಅದನ್ನು ಮಾಡುವವರು ಯಾದವರು" ಎಂದು ಹೇಳಿದ್ದರು.
ಸಿಬಿಐ ಅಧಿಕಾರಿಗಳಿಂದ ಆಶ್ರಯ ಗೃಹ ಹಗರಣದ ತನಿಖೆ
ಅಂತಿಮವಾಗಿ ಮುಜಾಫರ್ ಪುರ್ ಆಶ್ರಯ ಗೃಹ ಹಗರಣವನ್ನು ಸಿಬಿಐ ಅಧಿಕಾರಿಗಳ ತಂಡವು ತನಿಖೆ ನಡೆಸಿತು. ದೆಹಲಿ ನ್ಯಾಯಾಲಯವು 2020ರ ಫೆಬ್ರವರಿಯಲ್ಲಿ ತಪ್ಪಿತಸ್ಥರ ಬಗ್ಗೆ ತೀರ್ಪು ನೀಡಿತು. ಆದರೆ ತಪ್ಪಿತಸ್ಥರ ಪಟ್ಟಿನಲ್ಲಿ ಮಾಜಿ ಸಚಿವೆ ಮಂಜು ವರ್ಮಾ ಮತ್ತು ಚಂದ್ರಶೇಖರ್ ವರ್ಮಾ ಹೆಸರನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರಲಿಲ್ಲ.
ಜೈಲಿಗೆ ಹೋಗಿದ್ದ ಮಾಜಿ ಸಚಿವೆಗೆ ಟಿಕೆಟ್ ನೀಡಲು ಕಾರಣ?
ಮಜುಫರ್ ಪುರ್ ಆಶ್ರಯ ಗೃಹ ಹಗರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಸಚಿವೆ ಮಂಜು ವರ್ಮಾರಿಗೆ ಕರೆದು ಟಿಕೆಟ್ ನೀಡುವುದಕ್ಕೂ ಕಾರಣವಿದೆ. ಕುಶ್ವಾಹ ಸಮುದಾಯದ ಪ್ರಾಬಲ್ಯ ಹೊಂದಿರುವ ಚೆರಿಯಾ-ಬರಿಯಾಪುರ್ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವೆ ಮಂಜು ವರ್ಮಾ ಮತ್ತು ಅವರ ಪತಿ ಚಂದ್ರಶೇಖರ್ ವರ್ಮಾ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. 2010ರಲ್ಲಿ ಮೊದಲ ಬಾರಿಗೆ ಸಿಎಂ ನಿತೀಶ್ ಕುಮಾರ್ ಮಂಜು ವರ್ಮಾರಿಗೆ ಟಿಕೆಟ್ ನೀಡಿದ್ದರು.
ಮಂಜು ವರ್ಮಾ ತಪ್ಪೇ ಮಾಡಿಲ್ಲ ಎಂದ ಬಿಹಾರ ಸಿಎಂ!
ಮಾಜಿ ಸಚಿವೆ ಮಂಜು ವರ್ಮಾ ಜೈಲಿನಿಂದ 2019ರಲ್ಲಿ ಜೈಲಿನಿಂದ ಜಾಮೀನು ಪಡೆದು ಹೊರ ಬಂದಿದ್ದರು. ಅಲ್ಲಿಂದ ತೆರೆಮರೆಗೆ ಸರಿದಿದ್ದ ಮಂಜು ವರ್ಮಾರನ್ನು ಜೆಡಿಯು ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನದಿಂದಲೂ ತೆಗೆದು ಹಾಕಲಾಗಿತ್ತು. ಇಂದು ಈ ಬಗ್ಗೆ ಸ್ವತಃ ನಿತೀಶ್ ಕುಮಾರ್ ಅವರೇ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ. ಅಂದು ಮಾಧ್ಯಮಗಳೆಲ್ಲ ಆಕೆಯನ್ನು ಅಪರಾಧಿ ಎನ್ನುವಂತೆ ಸುದ್ದಿ ವಾಹಿನಿಗಳಲ್ಲಿ ತೋರಿಸಿದಿರಿ. ಹಾಗಾಗಿ ನಾನು ಪಕ್ಷದಿಂದ ವಜಾಗೊಳಿಸಲಾಗಿತ್ತು ಎಂದು ಸಿಎಂ ನಿತೀಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.