ಮತ ಎಣಿಕೆ ತಡವಾಗಲು ನಿತೀಶ್, ಮೋದಿ ಕಾರಣ: ಆರ್ಜೆಡಿ ಆರೋಪ
ಪಟ್ನಾ, ನವೆಂಬರ್ 10: ಅತ್ಯಂತ ನಿಕಟ ಹಣಾಹಣಿ ಇರುವ ಕ್ಷೇತ್ರಗಳಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟದ ಪರವಾಗಿ ಫಲಿತಾಂಶ ಬರುವಂತೆ ಜಿಲ್ಲಾ ಹಾಗೂ ಚುನಾವಣಾ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಸಂಚು ನಡೆಸುತ್ತಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ವಿರುದ್ಧ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಆರೋಪ ಮಾಡಿದ್ದಾರೆ.
Recommended Video
ಮಂಗಳವಾರ ರಾತ್ರಿ ಹಿಂದಿಯಲ್ಲಿ ಚಿಕ್ಕ ಟ್ವೀಟ್ ಮಾಡಿರುವ ಆರ್ಜೆಡಿ, ಅಧಿಕಾರಿಗಳು ಕನಿಷ್ಠ ಹತ್ತು ಕ್ಷೇತ್ರಗಳಲ್ಲಿ ಮತ ಎಣಿಕೆಯನ್ನು ತಡ ಮಾಡುತ್ತಿದ್ದಾರೆ ಮತ್ತು ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿದೆ.
'ನಿತೀಶ್ ಕುಮಾರ್ ಅವರ ಆಡಳಿತವು ಹತ್ತು ಸೀಟುಗಳಲ್ಲಿನ ಎಣಿಕೆಯನ್ನು ವಿಳಂಬ ಮಾಡುತ್ತಿದೆ. ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡುತ್ತಿಲ್ಲ. ಮುಖ್ಯಮಂತ್ರಿಗಳ ಮನೆಯಲ್ಲಿ ಕುಳಿತು ನಿತೀಶ್ ಕುಮಾರ್ ಮತ್ತು ಸುಶೀಲ್ ಕುಮಾರ್ ಮೋದಿ, ಮತಗಳ ಅಂತರ ತೀರಾ ಕಡಿಮೆ ಇರುವ ಸೀಟುಗಳಲ್ಲಿ ಅಧಿಕಾರಿಗಳ ಮೇಲೆ ಮುಖ್ಯ ಕಾರ್ಯದರ್ಶಿ ಒತ್ತಡ ಹೇರುವಂತೆ ಮಾಡುತ್ತಿದ್ದಾರೆ' ಎಂದು ಆರ್ಜೆಡಿ ಆರೋಪ ಮಾಡಿದೆ.
ಆರ್ಜೆಡಿಯ ಸೀಟುಗಳನ್ನು 105-110ರ ನಡುವೆಯೇ ಇರುವಂತೆ ನೋಡಿಕೊಳ್ಳಲು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ನಿತೀಶ್ ಹಾಗೂ ಸುಶೀಲ್ ಒತ್ತಡ ಹೇರುತ್ತಿದ್ದಾರೆ. ಜನರ ತೀರ್ಪನ್ನು ಲೂಟಿ ಮಾಡಲು ಆರ್ಜೆಡಿ ಬಿಡುವುದಿಲ್ಲ ಎಂದು ಅದು ಹೇಳಿದೆ.
119 ಕ್ಷೇತ್ರಗಳಲ್ಲಿನ ವಿಜೇತ ಅಭ್ಯರ್ಥಿಗಳ ಪಟ್ಟಿಯನ್ನು ಹಂಚಿಕೊಂಡಿರುವ ಆರ್ಜೆಡಿ, ಗೆಲುವಿಗಾಗಿ ತನ್ನ ಅಭ್ಯರ್ಥಿಗಳನ್ನು ರಿಟರ್ನಿಂಗ್ ಅಧಿಕಾರಿ ಈಗಾಗಲೇ ಅಭಿನಂದಿಸಿದ್ದಾರೆ. ಆದರೆ ಅವರು ಸೋಲು ಅನುಭವಿಸಿದ್ದಾರೆ ಎಂದು ಹೇಳುವ ಮೂಲಕ ಪ್ರಮಾಣಪತ್ರ ನೀಡಲು ನಿರಾಕರಿಸಿದ್ದಾರೆ ಎಂದು ಮತ್ತೊಂದು ಆರೋಪ ಮಾಡಿದೆ.