ಮಗನಿಗೆ ಹಿನ್ನಡೆ: ಸಿಟ್ಟಿನಿಂದ ಟಿವಿ ಆರಿಸಿ ಬಿಸಿಲಲ್ಲಿ ಕುಳಿತ ಲಾಲೂ ಪ್ರಸಾದ್
ಪಟ್ನಾ, ನವೆಂಬರ್ 10: ಫಲಿತಾಂಶ ದಿನದಂದು ಬಿಹಾರದ ಜನತೆ ತಮ್ಮ ಮಗ, ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಅವರಿಗೆ ಉಡುಗೊರೆ ನೀಡಲಿದ್ದಾರೆ ಎಂದು ಮತ ಎಣಿಕೆ ಆರಂಭಕ್ಕೂ ಮುನ್ನ ಸಂತೋಷದಿಂದ ಹೇಳಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಅವರ ನಿರೀಕ್ಷೆಗಳು ತಲೆಕೆಳಗಾಗುವ ಸನ್ನಿವೇಶ ನಿರ್ಮಾಣವಾಗಿದೆ.
ಮೇವು ಹಗರಣದಲ್ಲಿ ಜೈಲು ಪಾಲಾಗಿ, ಪ್ರಸ್ತುತ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಪ್ರಸಾದ್, ತಮ್ಮ ಮಗ ಮುಖ್ಯಮಂತ್ರಿ ಆಗುವುದು ಖಚಿತ ಎಂಬ ಭರವಸೆಯೊಂದಿಗೆ ಬೆಳಿಗ್ಗಿನಿಂದಲೇ ಟಿವಿ ಮುಂದೆ ಕುಳಿತು ಫಲಿತಾಂಶದ ನೇರ ಪ್ರಸಾರ ವೀಕ್ಷಿಸುತ್ತಿದ್ದರು. ಆದರೆ ಎನ್ಡಿಎ ಆರಂಭಿಕ ಹಂತಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವುದರಿಂದ ಸಿಟ್ಟಿಗೆದ್ದು ಟಿವಿ ಆಫ್ ಮಾಡಿ ಬಿಸಿಲಿಗೆ ಮೈಯೊಡ್ಡಿ ಕುಳಿತುಕೊಂಡರು ಎಂದು ವರದಿಯಾಗಿದೆ.
Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ
ತಮ್ಮ ಎದುರಾಳಿ ರಾಜಕೀಯ ಪಕ್ಷಗಳ ಮುನ್ನಡೆಯಿಂದ ಕಸಿವಿಸಿಗೊಂಡ ಲಾಲೂ, ರಿಮ್ಸ್ ಆಸ್ಪತ್ರೆಯ ಕೆಲ್ಲಿ ಬಂಗಲೆಯಲ್ಲಿನ ಆವರಣದ ಹುಲ್ಲು ಹಾಸಿಗೆ ಮೇಲೆ ಕುಳಿತು ಬಿಸಿಲು ಕಾಯಿಸಿಕೊಂಡರು. ಮಹಾಘಟಬಂಧನದ ಸುಲಭ ಗೆಲುವುನ್ನು ನಿರೀಕ್ಷಿಸಿದ್ದ ಲಾಲೂ, ಮಂಗಳವಾರ ಬೆಳಿಗ್ಗೆಯೇ ಎದ್ದು ಟಿವಿ ವೀಕ್ಷಿಸಲು ಆರಂಭಿಸಿದ್ದರು. ಆದರೆ ಆರಂಭದ ಟ್ರೆಂಡ್ನಲ್ಲಿ ಎನ್ಡಿಎ ಪಾರಮ್ಯ ಮೆರೆದಿದ್ದು ಅವರಿಗೆ ಕೋಪ, ಬೇಸರ ಉಂಟುಮಾಡಿತು. ಇದರಿಂದ ಟಿವಿ ಆಫ್ ಮಾಡಿ ಮನೆಯಿಂದ ಹೊರಗೆ ನಡೆದರು.
ತಂದೆಯ ಗೈರು ಹಾಜರಿಯಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ತೇಜಸ್ವಿ ಯಾದವ್, ಮಹಾಘಟಬಂಧನ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಒಂದು ವೇಳೆ ಮಹಾಘಟಬಂಧನ ನಿರೀಕ್ಷಿತ ಪ್ರಮಾಣದಲ್ಲಿ ಸೀಟುಗಳನ್ನು ಪಡೆದು 122ರ ಮ್ಯಾಜಿಕ್ ಸಂಖ್ಯೆಯನ್ನು ದಾಟಿದರೆ ಲಾಲೂ ಅವರ ಮಗ ಮುಖ್ಯಮಂತ್ರಿಯಾಗುವುದು ಬಹುತೇಕ ನಿಶ್ಚಿತ. ಒಂದೇ ಕುಟುಂಬದ ಮೂವರು ಸಿಎಂ ಆದ ಹೊಸ ದಾಖಲೆ ನಿರ್ಮಾಣವಾಗಲಿದೆ. ಲಾಲೂ ಪ್ರಸಾದ್ ಮತ್ತು ಅವರ ಪತ್ನಿ ರಾಬ್ಡಿ ದೇವಿ ಬಿಹಾರದ ಸಿಎಂ ಆಗಿದ್ದರು. ಅವರ ಮಗ ಕೂಡ ಮುಖ್ಯಮಂತ್ರಿಯಾದರೆ ಭಾರತೀಯ ರಾಜಕೀಯ ಇತಿಹಾಸದಲ್ಲಿ ಅಪರೂಪದ ದಾಖಲೆಯಾಗಲಿದೆ.
ಸೋಮವಾರವಷ್ಟೇ ಜನ್ಮದಿನ ಆಚರಿಸಿದ್ದ ತೇಜಸ್ವಿ ಯಾದವ್ಗೆ ಬೆಳಿಗ್ಗೆ ಕರೆ ಮಾಡಿದ್ದ ಲಾಲೂ ಪ್ರಸಾದ್, ಬಿಹಾರದ ಜನತೆಯು ನಿನಗೆ ನಾಳೆ ಹುಟ್ಟುಹಬ್ಬದ ಉಡುಗೊರೆ ನೀಡಲಿದ್ದಾರೆ ಎಂದು ಶುಭ ಹಾರೈಸಿದ್ದರು.