ಯಾವ ಒತ್ತಡವೂ ಇಲ್ಲ: ಚುನಾವಣಾ ಆಯೋಗದ ಸ್ಪಷ್ಟನೆ
ಪಟ್ನಾ, ನವೆಂಬರ್ 10: ಚುನಾವಣಾ ಆಯೋಗವು ಯಾರದ್ದೇ ಒತ್ತಡದ ಅಡಿಯಲ್ಲಿ ಕೆಲಸ ಮಾಡಿಲ್ಲ. ಎಲ್ಲ ಅಧಿಕಾರಿಗಳೂ ಮತ್ತು ವ್ಯವಸ್ಥೆಯು ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದು ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿ ಉಮೇಶ್ ಸಿನ್ಹಾ ತಿಳಿಸಿದ್ದಾರೆ.
Recommended Video
ಚುನಾವಣಾ ಅಧಿಕಾರಿಗಳು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೇಲೆ ಒತ್ತಡ ಹೇರುವ ಮೂಲಕ ಅತ್ಯಂತ ಸಮೀಪದ ಸ್ಪರ್ಧೆಯಿರುವ ಹತ್ತು ಕ್ಷೇತ್ರಗಳಲ್ಲಿನ ಫಲಿತಾಂಶವನ್ನು ಪ್ರಕಟಿಸದಂತೆ ನಿತೀಶ್ ಕುಮಾರ್ ಮತ್ತು ಸುಶೀಲ್ ಕುಮಾರ್ ಮೋದಿ ತಂತ್ರ ರೂಪಿಸುತ್ತಿದ್ದಾರೆ. ಮತ ಎಣಿಕೆಯಲ್ಲಿ ವಂಚನೆ ನಡೆದಿದೆ ಎಂಬ ಆರ್ಜೆಡಿಯ ಆರೋಪಕ್ಕೆ ಚುನಾವಣಾ ಆಯೋಗ ಈ ಸ್ಪಷ್ಟೀಕರಣ ನೀಡಿದೆ.
Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ
ಅಲ್ಲದೆ, ಆರ್ಜೆಡಿಯು ತನ್ನ 119 ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಚುನಾವಣಾ ಅಧಿಕಾರಿಯು ಆರ್ಜೆಡಿ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಅವರಿಗೆ ಗೆಲುವಿನ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಆರ್ಜೆಡಿ ಆರೋಪಿಸಿತ್ತು.
'ಸುಮಾರು ಒಂದು ಗಂಟೆಯ ಹಿಂದೆ ಪಕ್ಷವೊಂದು ತಾನು 119 ಸೀಟುಗಳಲ್ಲಿ ಗೆದ್ದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹೇಳಿಕೊಂಡಿದೆ. ರಾಜ್ಯದ ಎಲ್ಲ ಫಲಿತಾಂಶಗಳೂ ನಮ್ಮ ಪೋರ್ಟಲ್ನಲ್ಲಿ ಲಭ್ಯವಿದೆ ಎಂದು ಸ್ಪಷ್ಟಪಡಿಸುತ್ತೇನೆ. ಇದುವರೆಗೂ 146 ಸೀಟುಗಳಲ್ಲಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಇದು ವಾಸ್ತವ ಸ್ಥಿತಿ' ಎಂದು ಉಪ ಚುನಾವಣಾ ಆಯುಕ್ತ ಚಂದ್ರಭೂಷಣ್ ಕುಮಾರ್ ತಿಳಿಸಿದ್ದಾರೆ.
ಗೆಲುವಿನ ಅಂತರ ತೀರಾ ಕಡಿಮೆ ಇರುವ ಕ್ಷೇತ್ರಗಳಲ್ಲಿ ಫಲಿತಾಂಶವನ್ನು ಘೋಷಣೆ ಮಾಡುವ ಮುನ್ನ, ಎಣಿಕೆ ಸಂದರ್ಭದಲ್ಲಿ ಅಸಿಂಧು ಎಂದು ತಿರಸ್ಕರಿಸಿದ ಅಂಚೆ ಮತಪತ್ರಗಳನ್ನು ರಿಟರ್ನಿಂಗ್ ಅಧಿಕಾರಿ ಮರುಪರಿಶೀಲನೆ ನಡೆಸುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದ್ದಾರೆ.
ಅಂತಹ ಮರುಪರಿಶೀಲನೆ ನಡೆದ ಕಡೆಗಳಲ್ಲಿ ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಇಡೀ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.