ತೇಜಸ್ವಿ ಯಾದವ್ ನೇತೃತ್ವದ ಮಹಾ ಮೈತ್ರಿಕೂಟಕ್ಕೆ ಮುಳ್ಳಾದ ಕಾಂಗ್ರೆಸ್?
ಪಟ್ನಾ, ನವೆಂಬರ್ 10: ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ಗಳು ವಿರೋಧಪಕ್ಷಗಳ ಭರ್ಜರಿ ಜಯಭೇರಿಯನ್ನು ಊಹಿಸಿದ್ದರೂ, ಫಲಿತಾಂಶದಲ್ಲಿ ಇದುವರೆಗೂ ಎನ್ಡಿಎ ಮುನ್ನಡೆ ಪಡೆದುಕೊಂಡಿದೆ. ಹೀಗಾಗಿ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ ಎರಡನೆಯ ಸ್ಥಾನಕ್ಕೆ ತೃಪ್ತಿಪಡುವ ಸಾಧ್ಯತೆಗಳು ಕಂಡುಬರುತ್ತಿವೆ.
ಅಧಿಕಾರರೂಢ ಎನ್ಡಿಎ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ, ನಿರುದ್ಯೋಗ, ಬಡತನ, ವಲಸೆ, ಕೊರೊನಾ ವೈರಸ್ ಸೋಂಕು ನಿರ್ವಹಣೆಯಲ್ಲಿನ ವೈಫಲ್ಯ ಮುಂತಾದವು ತಮಗೆ ವರದಾನವಾಗಲಿದೆ ಎಂದು ಮಹಾಘಟಬಂಧನ ಆಲೋಚಿಸಿತ್ತು. ಯುವ ಮುಖಂಡನಿಗೆ ಮತದಾರರು ಮನ್ನಣೆ ಹಾಕಲಿದ್ದಾರೆ ಎಂದು ಭಾವಿಸಿತ್ತು. ಆದರೆ ಆರ್ಜೆಡಿ-ಕಾಂಗ್ರೆಸ್ ಮತ್ತು ಎಡಪಕ್ಷಗಳ ಮಹಾ ಮೈತ್ರಿಕೂಟಕ್ಕೆ ತೀವ್ರ ಹಿನ್ನಡೆಯಾಗಿದೆ.
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ: ಇಲ್ಲಿದೆ ಕ್ಷಣಕ್ಷಣದ ಮಾಹಿತಿ
ಮಹಾಘಟಬಂಧನದ ಹಿನ್ನಡೆಗೆ ಕಾಂಗ್ರೆಸ್ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಸೀಟು ಹಂಚಿಕೆಯಲ್ಲಿ ತೇಜಸ್ವಿ ಯಾದವ್ ಗೊಂದಲಕ್ಕೆ ಒಳಗಾಗಿದ್ದರು. ಕೊನೆಗೆ ಕಾಂಗ್ರೆಸ್ನ ಅರ್ಹತೆಗೂ ಮೀರಿ ಹೆಚ್ಚಿನ ಸೀಟುಗಳನ್ನು ಬಿಟ್ಟುಕೊಟ್ಟರೇ? ಎಂಬ ಪ್ರಶ್ನೆ ಮೂಡಿದೆ.
ಬಿಹಾರ ವಿಧಾನಸಭೆಯ 243 ಸೀಟುಗಳ ಪೈಕಿ ರಾಷ್ಟ್ರೀಯ ಜನತಾದಳ (ಆರ್ಜೆಡಿ) 144 ಸೀಟುಗಳಲ್ಲಿ ಕಣಕ್ಕಿಳಿದರೆ, ಒಪ್ಪಂದದ ಪ್ರಕಾರ ಕಾಂಗ್ರೆಸ್ಗೆ 70 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿತು. ಇನ್ನು ಎಡಪಕ್ಷಗಳಲ್ಲಿ ಸಿಪಿಎಂ ನಾಲ್ಕು ಕ್ಷೇತ್ರ, ಸಿಪಿಐ ಆರು ಮತ್ತು ಸಿಪಿಐ (ಎಂಎಲ್) 19 ಕ್ಷೇತ್ರಗಳನ್ನು ಪಡೆದುಕೊಂಡಿದ್ದವು.
ಮಹಾಘಟಬಂಧನದಲ್ಲಿ ಕಾಂಗ್ರೆಸ್ ಹೊರತಾಗಿ ಬೇರೆಲ್ಲ ಪಕ್ಷಗಳೂ ಉತ್ತಮ ಸ್ಟ್ರೈಕ್ ರೇಟ್ ಪ್ರದರ್ಶಿಸಿವೆ. ಮುಖ್ಯ ಪಕ್ಷಗಳ ಸಾಲಿನಲ್ಲಿ ಅತ್ಯಂತ ಹಳೆಯ ಪಕ್ಷ ನಾಲ್ಕನೆಯ ಸ್ಥಾನದಲ್ಲಿದೆ. 70 ಸೀಟುಗಳ ಪೈಕಿ ಕಾಂಗ್ರೆಸ್ ಮುನ್ನಡೆ 25 ಕ್ಷೇತ್ರಗಳನ್ನೂ ದಾಟಿಲ್ಲ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಹಾರದಲ್ಲಿ ಹಲವು ಪ್ರಚಾರ ಸಭೆಗಳನ್ನು ನಡೆಸಿದ್ದರು. ಆದರೆ ತೇಜಸ್ವಿ ಯಾದವ್ ಅವರ ಬೃಹತ್ ಸಭೆಗಳ ಎದುರು ಅವರ ಪ್ರಚಾರ ಮಂಕಾಗಿತ್ತು. ಕಾಂಗ್ರೆಸ್ ಇಲ್ಲಿ ಗೆಲ್ಲುವ ಛಾತಿಯನ್ನೇ ಪ್ರದರ್ಶಿಸಲಿಲ್ಲ.
ಕಳೆದ ವರ್ಷ ಸಂಸತ್ ಚುನಾವಣೆಯಲ್ಲಿ ಇಲ್ಲಿನ 40 ಲೋಕಸಭೆ ಕ್ಷೇತ್ರಗಳಲ್ಲಿ ಎನ್ಡಿಎ 39 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಗೆದ್ದಿದ್ದರೆ, ಆರ್ಜೆಡಿ ಸಾಧನೆ ಶೂನ್ಯವಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ತನಗೆ 75 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್ ಬೇಡಿಕೆ ಇರಿಸಿತ್ತು. ಕೊನೆಗೆ ಆರ್ಜೆಡಿ 70 ಕ್ಷೇತ್ರಗಳನ್ನು ನೀಡಲು ಒಪ್ಪಿಕೊಂಡಿತ್ತು. ಬಹುಶಃ ಆರ್ಜೆಡಿ ಅಷ್ಟು ಕ್ಷೇತ್ರಗಳನ್ನು ಕೂಡ ನೀಡದೆ ತನ್ನಲ್ಲಿಯೇ ಉಳಿಸಿಕೊಂಡಿದ್ದರೆ ಅದು ಉತ್ತಮ ಪ್ರದರ್ಶನ ತೋರಿಸುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.