ಬಿಹಾರ ಫಲಿತಾಂಶಕ್ಕೆ ಪ್ರಧಾನಿ ಮೋದಿ ಕಾರಣ: ಸಂಸದ ತೇಜಸ್ವಿಸೂರ್ಯ
ಪಾಟ್ನಾ, ನವೆಂಬರ್.10: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಮತದಾರರೇ ನೀಡಿರುವ ಸಮರ್ಥನೆ ಎಂದು ಸಂಸದ ತೇಜಸ್ವಿ ಸೂರ್ಯ ಬಣ್ಣಿಸಿದ್ದಾರೆ.
ಭಾರತವು ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಸುಳಿಗೆ ಸಿಲುಕಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಉತ್ತಮ ಕಾರ್ಯವೈಖರಿಯು ಬಡವರನ್ನು ರಕ್ಷಿಸಿದೆ. ಕೊರೊನಾವೈರಸ್ ಸಂದಿಗ್ಧ ಸ್ಥಿತಿಯಲ್ಲಿ ದೇಶವನ್ನು ಸಮರ್ಥವಾಗಿ ನಡೆಸಿಕೊಂಡು ಹೋಗಿದ್ದಕ್ಕಾಗಿ ಇಂದು ಮತದಾರರು ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ
ಬಿಹಾರದಲ್ಲಿ ಜನರು ಮತ್ತೊಮ್ಮೆ ಜಂಗಲ್ ರಾಜ್ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಬಯಸುವುದಿಲ್ಲ. ಈ ನಿಟ್ಟಿನಲ್ಲಿ ಮತ ಚಲಾವಣೆ ಮಾಡಿರುವುದು ದೇಶದ ಹಿತದೃಷ್ಟಿಯಿಂದಲೂ ಉತ್ತಮ ಬೆಳವಣಿಗೆ ಆಗಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ನಂಬಿರುವ ಬಿಹಾರದ ಪ್ರತಿಯೊಬ್ಬ ಮತದಾರರಿಗೂ ಧನ್ಯವಾದಗಳು ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ಏನ್ ಹೇಳುತ್ತೆ ಟ್ರೆಂಡ್:
ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟಿಸಲಾಗಿದೆ. ಬಿಜೆಪಿ 3, ಆರ್ ಜೆಡಿ 2, ಜೆಡಿಯು 2, ಕಾಂಗ್ರೆಸ್ 1 ಹಾಗೂ ವಿಕಾಸಶೀಲ ಇನ್ಸಾನ್ ಪಕ್ಷವು 1 ಕ್ಷೇತ್ರದಲ್ಲಿ ಗೆಲುವು ದಾಖಲಿಸಿದೆ ಎಂದು ಬಿಹಾರ ಚುನಾವಣಾ ಆಯೋಗವು ಮಾಹಿತಿ ನೀಡಿದೆ. ಬಿಹಾರದಲ್ಲಿ 9 ಕ್ಷೇತ್ರಗಳ ಸ್ಪಷ್ಟ ಚಿತ್ರಣ ಹೊರ ಬಿದ್ದಿದೆ. ಇದರ ಹೊರತಾಗಿ ಎನ್ ಡಿಎ ಮೈತ್ರಿಕೂಟವು 126 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಹಾಘಟಬಂಧನ್ 107 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಎಐಎಂಐಎಂ 5 ಕಡೆಗಳಲ್ಲಿ ಮುನ್ನಡೆ ಕಂಡುಕೊಂಡಿದೆ. ಬಿಎಸ್ ಪಿ 2 ಹಾಗೂ ಪಕ್ಷೇತರ ಅಭ್ಯರ್ಥಿಗಳು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.