ಸಿಎಂ ನಿತೀಶ್ ಕುಮಾರ್ ಎದುರಲ್ಲೇ ಲಾಲೂ ಜಿಂದಾಬಾದ್ ಘೋಷಣೆ!
ಪಾಟ್ನಾ, ಅಕ್ಟೋಬರ್.21: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಚಾರದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಜೈಕಾರ ಕೂಗಿರುವ ಘಟನೆಯೊಂದು ನಡೆದಿದೆ.
"ಲಾಲೂ ಯಾದವ್ ಜಿಂದಾಬಾದ್" ಎಂಬ ಘೋಷಣೆ ಕೇಳಿ ಬರುತ್ತಿದ್ದಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೆಂಡಾಮಂಡಲರಾಗಿದ್ದರು. "ಏನು ಹೇಳಿದಿರಿ.. ನೀವೇನು ಹೇಳುತ್ತಿದ್ದೀರಿ. ಇದೇನು ಅಸಂಬದ್ಧ ಘೋಷಣೆ" ಎಂದು ಕೆರಳಿ ಕೇಳಿದರು. ಯಾರು ಆ ರೀತಿ ಘೋಷಣೆಗಳನ್ನು ಕೂಗಿದ್ದು, ನಿಮ್ಮ ಕೈಗಳನ್ನು ಎತ್ತಿ ಸ್ವಲ್ಪ ಎಂದು ನಿತೀಶ್ ಕುಮಾರ್ ಕೇಳಿದರು.
ಬಿಹಾರ ಚುನಾವಣಾ ಸಮೀಕ್ಷೆ; ನಿತೀಶ್ಗೆ ಮತ್ತೊಂದು ಅವಕಾಶ ಬೇಕೆ?
ಸಿಎಂ ನಿತೀಶ್ ಕುಮಾರ್ ಜೋರಾಗಿ ಪ್ರಶ್ನೆ ಮಾಡುತ್ತಿದ್ದಂತೆ ಸ್ವಲ್ಪ ಕಾಲ ವಾತಾವರಣ ನಿಶಬ್ಧವಾಯಿತು. ಈ ನಡುವೆ ಜನರ ನಡುವಿನಿಂದ "ಮೇವು ಕಳ್ಳ" ಎಂಬ ಮತ್ತೊಂದು ಘೋಷಣೆ ಕೇಳಿ ಬಂತು. ತದನಂತರ ರಾಜ್ಯದಲ್ಲಿ ನಡೆದ ಮೇವು ಹಗರಣದ ಬಗ್ಗೆಯೂ ಉಲ್ಲೇಖಸಲಾಯಿತು.
ಲಾಲೂ ಜಿಂದಾಬಾದ್ ಘೋಷಣೆಗೆ ಕೆಂಡ
"ಲಾಲೂ ಯಾದವ್ ಜಿಂದಾಬಾದ್" ಎಂಬ ಘೋಷಣೆಯನ್ನು ಕೇಳಿದ ಸಿಎಂ ನಿತೀಶ್ ಕುಮಾರ್ ಕೆರಳಿ ಕೆಂಡವಾಗಿದ್ದರು. ನೀವು ನನಗೆ ಮತ ನೀಡದಿದ್ದರೆ ಬೇಕಾಗಿಲ್ಲ. ಆದರೆ ಇಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುವುದು ಬೇಡ. ನೀವು ಇಲ್ಲಿಗೆ ಬಂದು, ಮತದಾರರ ಮನಸಿನಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನು ಮಾಡಬೇಡಿ" ಎಂದು ಖಾರವಾಗಿ ನುಡಿದರು.
ತೇಜಸ್ವಿ ಯಾದವ್ ಹೇಳಿಕೆಗೆ ನಿತೀಶ್ ಕುಮಾರ್ ಲೇವಡಿ
ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ವಿರುದ್ಧ ಸಿಎಂ ನಿತೀಶ್ ಕುಮಾರ್ ವಾಗ್ದಾಳಿ ಮುಂದುವರಿಸಿದ್ದಾರೆ. ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಆಗಿರುವ ತೇಜಸ್ವಿ ಯಾದವ್ ಅವರು, ಉದ್ಯೋಗ ಕೊಡಿಸುವ ಭರವಸೆ ನೀಡುವುದನ್ನೇ ಒಂದು ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಸಿಎಂ ನಿತೀಶ್ ಕುಮಾರ್ ಲೇವಡಿ ಮಾಡಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ 10 ಲಕ್ಷ ಜನರಿಗೆ ಉದ್ಯೋಗ ಕೊಡಿಸುವುದಾಗಿ ತೇಜಸ್ವಿ ಯಾದವ್ ಆಶ್ವಾಸನೆ ನೀಡಿದ್ದಾರೆ. ಬಹುಶಃ ಅವರಿಗೆ ಜ್ಞಾನ ಮತ್ತು ಅನುಭವದ ಕೊರತೆ ಹೆಚ್ಚಾದಂತೆ ತೋರುತ್ತಿದೆ. ಈ ಹಿನ್ನೆಲೆ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳುವುದನ್ನೇ ಹೊಸ ಉದ್ಯೋಗ ಮಾಡಿಕೊಂಡಿದ್ದಾರೆ ಎಂದು ಸಿಎಂ ನಿತೀಶ್ ಕುಮಾರ್ ತಿವಿದಿದ್ದಾರೆ.
ಎಲ್ಲರಿಗೂ ಉದ್ಯೋಗ ನೀಡುವುದಕ್ಕೆ ಸಾಧ್ಯವಿಲ್ಲವೇ?
ಕೆಲವು ಜನರಿಗೆ ಯಾವುದೇ ರೀತಿ ಜ್ಞಾನ ಇರುವುದಿಲ್ಲ. ಸುಖಾಸುಮ್ಮನೆ ಉದ್ಯೋಗ ನೀಡುತ್ತೇನೆ ಎಂದು ಆಶ್ವಾಸನೆ ಮತ್ತು ಭರವಸೆಗಳನ್ನು ನೀಡುತ್ತಾ ಹೋಗುತ್ತಿದ್ದಾರೆ. ಉದ್ಯೋಗ ನೀಡುವುದಕ್ಕೆ ಹಣವು ಎಲ್ಲಿಂದ ಬರುತ್ತದೆ. ಲಕ್ಷಗಟ್ಟಲೆ ಜನರಿಗೆ ಉದ್ಯೋಗ ನೀಡುವುದು ಹೇಗೆ ಎಂಬ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲದೇ ಮಾತನಾಡುತ್ತಿದ್ದಾರೆ. ಒಂದು ವೇಳೆ ನೀವು ಉದ್ಯೋಗ ನೀಡುವಲ್ಲಿ ಸಮರ್ಥರಾಗಿದ್ದರೆ ಕೇವಲ 10 ಲಕ್ಷ ಜನರಿಗಷ್ಟೇ ಏಕೆ ಉದ್ಯೋಗ ನೀಡುತ್ತೀರಿ. ಎಲ್ಲರಿಗೂ ಉದ್ಯೋಗವಕಾಶ ಕಲ್ಪಿಸಿ ಕೊಡಿ ಎಂದ ತೇಜಸ್ವಿ ಯಾದವ್ ರನ್ನು ಪ್ರಶ್ನೆ ಮಾಡಿದ್ದರು.
"ಉದ್ಯೋಗ ಕಲ್ಪಿಸಲು ಕಳ್ಳನೋಟು ಮುದ್ರಿಸುತ್ತೀರಾ?"
ಬಿಹಾರದಲ್ಲಿ ಈಗಾಗಲೇ ಸರ್ಕಾರಿ ಉದ್ಯೋಗಿಗಳ ವೇತನಕ್ಕಾಗಿ 52734 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇನ್ನೂ 10 ಲಕ್ಷ ಜನರಿಗೆ ಉದ್ಯೋಗವನ್ನು ನೀಡಿದ್ದಲ್ಲಿ ಅವರ ವೇತನಕ್ಕೆ 1.11 ಲಕ್ಷ ಕೋಟಿ ರೂಪಾಯಿ ಖರ್ಚಾಗುತ್ತದೆ. ಇಷ್ಟೊಂದು ಹಣವನ್ನು ಏನು ಜೈಲಿನಿಂದ ತರಿಸಿಕೊಳ್ಳುತ್ತೀರಾ ಅಥವಾ ಕಳ್ಳ ನೋಟುಗಳನ್ನು ಮುದ್ರಿಸುತ್ತೀರಾ ಎಂದು ಸಿಎಂ ನಿತೀಶ್ ಕುಮಾರ್ ಪ್ರಶ್ನೆ ಮಾಡಿದ್ದರು. ಪ್ರಸ್ತುತ ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ಘೋಷಿಸಲಾಗಿದೆ. ಅಕ್ಟೋಬರ್.28 ಮೊದಲ ಹಂತದ ಚುನಾವಣೆ, ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಖಾಲಿ ಆಗಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್.07ರಂದೇ ಮತದಾನ ನಡೆಯಲಿದೆ.