"ಬಿಜೆಪಿ-ಜೆಡಿಯು ಎಂದರೆ ತೆಂಡೂಲ್ಕರ್-ಸೆಹ್ವಾಗ್ ಜೋಡಿಯಷ್ಟೇ ಯಶಸ್ವಿ"
ಪಾಟ್ನಾ, ಅಕ್ಟೋಬರ್.21: ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ನಡುವಿನ ಜೋಡಿಯು ಭಾರತೀಯ ಕ್ರಿಕೆಟ್ ತಂಡದ ಓಪನಿಂಗ್ ಜೋಡಿ ಆಗಿರುವ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಜೋಡಿಯಷ್ಟೇ ಯಶಸ್ವಿಯಾಗಿರಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ಭಗಲ್ಪುರ್ ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಸಚಿವ ರಾಜನಾಥ್ ಸಿಂಗ್ ಭಾಷಣ ಮಾಡಿದರು. ರಾಜ್ಯದಲ್ಲಿ ಮೈತ್ರಿ ಸರ್ಕಾರವು ಎಷ್ಟರ ಮಟ್ಟಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದು ಪ್ರಶ್ನೆ ಮಾಡುವುದಕ್ಕೆ ಸಾಧ್ಯವಿದೆ. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಭ್ರಷ್ಟಾಚಾರದ ಬಗ್ಗೆ ಯಾರೊಬ್ಬರೂ ಬೊಟ್ಟು ಮಾಡಿ ತೋರಿಸುವಂತೆಯೂ ಇಲ್ಲ ಎಂದು ರಾಜನಾಥ್ ಸಿಂಗ್ ಕೊಂಡಾಡಿದರು.
ಬಿಹಾರ ಚುನಾವಣಾ ಸಮೀಕ್ಷೆ; ನಿತೀಶ್ಗೆ ಮತ್ತೊಂದು ಅವಕಾಶ ಬೇಕೆ?
ರಾಜ್ಯದ ಜನರು 15 ವರ್ಷಗಳ ಕಾಲ ರಾಷ್ಟ್ರೀಯ ಜನತಾ ದಳ ಮೈತ್ರಿಕೂಟದ ಆಡಳಿತವನ್ನೂ ಕಂಡಿದ್ದಾರೆ. ತದನಂತರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟದ ಸರ್ಕಾರ ನಡೆಸಿದ ಆಡಳಿತವನ್ನು ಅವರೂ ಕೂಡಾ ಕಂಡಿದ್ದಾರೆ. ಈ ಎರಡು ಸರ್ಕಾರಗಳು ನಡೆಸಿದ ಆಡಳಿತಾವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಹೋಲಿಕೆ ಮಾಡುವುದಕ್ಕೂ ಸಾಧ್ಯವಿಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟದ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಸಿಎಂ ನಿತೀಶ್ ಸಮಗ್ರತೆಗೆ ಸರಿಸಾಟಿಯಿಲ್ಲ":
ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಈಗಾಗಲೇ ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದಾರೆಯೇ, ಕಡಿಮೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆಯೇ ಅಥವಾ ಇನ್ನೂ ಸಾಕಷ್ಟು ಅಭಿವೃದ್ಧಿ ಮಾಡಬೇಕಿದೆಯೇ ಎಂಬುದರ ಬಗ್ಗೆ ಚರ್ಚಿಸುವುದಕ್ಕೆ ಅವಕಾಶವಿದೆ. ಆದರೆ ಅವರ ಆಡಳಿತ ವೈಖರಿಯಲ್ಲಿ ಇರುವ ಸಮಗ್ರತೆ ಬಗ್ಗೆ ಯಾರೊಬ್ಬರೂ ಪ್ರಶ್ನೆ ಮಾಡುವುದಕ್ಕೆ ಸಾಧ್ಯವಿಲ್ಲ" ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಬಿಹಾರದಲ್ಲಿ ನಡೆಯುವ ಮೂರು ಹಂತಗಳ ಚುನಾವಣೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಅಕ್ಟೋಬರ್.22ರಂದು ಬಂಕಾ, ಬರ್ಹರ್ ಮತ್ತು ರಾಮಘರ್ ನಲ್ಲಿ ಬಿಜೆಪಿ ಚುನಾವಣಾ ರ್ಯಾಲಿ ಮತ್ತು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ರಾಜನಾಥ್ ಸಿಂಗ್ ಮಾತನಾಡಲಿದ್ದಾರೆ.
ಬಿಹಾರದಲ್ಲಿ ಮೂರು ಹಂತಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್.28 ಮೊದಲ ಹಂತದ ಚುನಾವಣೆ, ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಖಾಲಿ ಆಗಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್.07ರಂದೇ ಮತದಾನ ನಡೆಯಲಿದೆ.