ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ರಿಗೆ ಪ್ರಧಾನಿ ಫುಲ್ ಮಾರ್ಕ್ಸ್!
ಪಾಟ್ನಾ, ಸಪ್ಟೆಂಬರ್.13: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಸೂಚನೆ ಸಿಕ್ಕಿದೆ. ಆ ಮೂಲಕ ಎಲ್ಲ ಅನುಮಾನಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಂತ್ಯ ಹಾಡಿದ್ದಾರೆ.
900 ಕೋಟಿ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಮೂರು ಪೆಟ್ರೋಲಿಯಂ ವಲಯದ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ, "ನಾವು ಬಿಹಾರದಲ್ಲಿ" ಸುಶಾಸನ್ "(ಉತ್ತಮ ಆಡಳಿತ) ವನ್ನು ಖಚಿತಪಡಿಸಿಕೊಳ್ಳಬೇಕು.
ನಿತೀಶ್ ನಾಯಕತ್ವದ ಬಗ್ಗೆ ನಡ್ಡಾ ಘೋಷಣೆ, ಚಿರಾಗ್ ಕಿಡಿ
ಕಳೆದ 15 ವರ್ಷಗಳಲ್ಲಿ ನಡೆದಿರುವ ಉತ್ತಮ ಕಾರ್ಯಗಳು ಅದೇ ರೀತಿಯಲ್ಲಿ ಮುಂದುವರಿಯಬೇಕಿದೆ. "ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು "ಹೊಸ ಭಾರತ, ಹೊಸ ಬಿಹಾರದತ್ತ ನಮ್ಮ ಗುರಿಯಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಲಾಲೂ ಪ್ರಸಾದ್ ಯಾದವ್ ವಿರುದ್ಧ ಮೋದಿ ವಾಗ್ದಾಳಿ
ಕಾಂಗ್ರೆಸ್, ಆರ್ ಜೆಡಿ ಹಾಗೂ ಲಾಲೂ ಪ್ರಸಾದ್ ಯಾದವ್ ಹೆಸರು ಉಲ್ಲೇಖಿಸದೇ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಬಿಹಾರದಲ್ಲಿ ಮೊದಲಿನಿಂದಲೂ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿ ಎನ್ನುವುದು ಬಾಯಿ ಮಾತಿಗಷ್ಟೇ ಸೀಮಿತವಾಗಿದೆ. ರಸ್ತೆ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದರೆ ವಾಹನಗಳೇ ಇಲ್ಲದೇ ಕಾಲಿನಲ್ಲಿ ಓಡಾಡುವ ಜನರಿಗೆ ರಸ್ತೆಗಳ ಅಗತ್ಯವೇನಿದೆ ಎನ್ನುವಂತೆ ಮರು ಪ್ರಶ್ನೆ ಹಾಕುತ್ತಿದ್ದರು ಎಂದು ಮೋದಿ ಕಿಡಿ ಕಾರಿದ್ದಾರೆ.
ಬಿಹಾರದಲ್ಲಿ 'ಸುಶಾಸನ್' ಬಗ್ಗೆ ಉಲ್ಲೇಖಿಸಿದ ಮೋದಿ
ಕಳೆದ 15 ವರ್ಷಗಳಿಂದ ಬಿಹಾರದಲ್ಲಿ ಎನ್ ಡಿಎ ಮೈತ್ರಿ ಸರ್ಕಾರವು ಉತ್ತಮ ಆಡಳಿತವನ್ನು ನೀಡುತ್ತಾ ಬಂದಿದೆ. ರಾಜ್ಯದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಯಾಗಿದೆ. ಹೊಸ ವೈದ್ಯಕೀಯ, ತಾಂತ್ರಿಕ, ಕಾನೂನು ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್ ಕಾಲೇಜುಗಳನ್ನು ತೆರೆಯಲಾಗಿದೆ. ಈ ಅಭಿವೃದ್ಧಿ ಕಾರ್ಯ ಮುಂದುವರಿಸುವಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಮುಖರಾಗಿದ್ದಾರೆ ಎಂದು ಮೋದಿ ತಿಳಿಸಿದರು.
ಮಿತ್ರಪಕ್ಷದಿಂದಲೇ ನಿತೀಶ್ ಕುಮಾರ್ ವಿರುದ್ಧ ಸಮರ
ಬಿಹಾರದಲ್ಲಿ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ಜಾಹೀರಾತಿನ ಮೂಲಕ ಸಿಎಂ ನಿತೀಶ್ ಕುಮಾರ್ ವಿರುದ್ಧ ಪರೋಕ್ಷ ತಂತ್ರ ಹೆಣೆಯುತ್ತಿದ್ದರು. ಬಿಹಾರವೇ ಮೊದಲು, ಬಿಹಾರಿಗಳೇ ಮೊದಲು ಎಂಬ ಶೀರ್ಷಿಕೆ ಅಡಿಯಲ್ಲಿ ಈ ಮೊದಲು ಜಾಹೀರಾತು ನೀಡಲಾಗಿತ್ತು. "ಅವರು ನಮ್ಮನ್ನು ಆಳಲು ಹೋರಾಡುತ್ತಿದ್ದಾರೆ, ಬಿಹಾರಕ್ಕೆ ಹೆಮ್ಮೆ ತರಲು ನಾನು ಹೋರಾಡುತ್ತಿದ್ದೇನೆ" ಎಂದು ಉಪ ಶೀರ್ಷಿಕೆಯನ್ನು ಬರೆಯಿಸಲಾಗಿದ್ದು, ಚಿರಾಗ್ ಪಾಸ್ವಾನ್ ರನ್ನು ಸಿಎಂ ಅಭ್ಯರ್ಥಿ ಎನ್ನುವಂತೆ ಬಿಂಬಿಸಲಾಗುತ್ತಿತ್ತು.
30 ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಎಲ್ ಜೆಪಿ
ಕಳೆದ 2015ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಲೋಕಜನಶಕ್ತಿ ಪಕ್ಷವು ತೀವ್ರ ಮುಖಭಂಗ ಅನುಭವಿಸಿತ್ತು. ರಾಜ್ಯದಲ್ಲಿ ಸ್ಪರ್ಧಿಸಿದ 55 ಕ್ಷೇತ್ರಗಳ ಪೈಕಿ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಈ ಹಿನ್ನೆಲೆ ಮುಂಬರುವ ಚುನಾವಣೆಯಲ್ಲಿ ಕನಿಷ್ಠ 25 ರಿಂದ 30 ಕ್ಷೇತ್ರಗಳಿಗೆ ಬೇಡಿಕೆಯಿಡುವ ಸಾಧ್ಯತೆಗಳಿವೆ. ಇದರ ನಡುವೆ ಎನ್ ಡಿಟಿವಿಗೆ ಪ್ರತಿಕ್ರಿಯೆ ನೀಡಿರುವ ಎಲ್ ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್, "ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ನಾಯಕರಾಗಿ ನಿತೀಶ್ ಕುಮಾರ್ ರನ್ನು ಆಯ್ಕೆ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲ" ಎಂದು ಹೇಳಿದ್ದಾರೆ.