ಕೈಕೊಟ್ಟ ಇವಿಎಂ: ಮತದಾನ ರದ್ದುಗೊಳಿಸಲು ಆರ್ಜೆಡಿ ಆಗ್ರಹ
ಪಟ್ನಾ, ಅಕ್ಟೋಬರ್ 28: ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿರುವ ಜಮುಯಿ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆಯನ್ನು ಸ್ಥಗಿತಗೊಳಿಸುವಂತೆ ಆರ್ಜೆಡಿ ಅಭ್ಯರ್ಥಿ ವಿಜಯ್ ಪ್ರಕಾಶ್ ಒತ್ತಾಯಿಸಿದ್ದಾರೆ. 55 ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡದ ಕಾರಣಕ್ಕೆ ಮತದಾನ ರದ್ದುಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.
ಈ ಕ್ಷೇತ್ರಗಳಲ್ಲಿನ ಇವಿಎಂಗಳನ್ನು ಬದಲಿಸಿದರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಕ್ಷೇತ್ರದ ಜನತೆ ಆರ್ಜೆಡಿಗೆ ಮತ ಚಲಾಯಿಸುತ್ತಾರೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಇವಿಎಂ ಕೆಲಸ ಮಾಡದಂತೆ ಮಾಡಿವೆ ಎಂದು ಆರೋಪಿಸಿದ್ದಾರೆ.
ಬಿಜೆಪಿಗೆ ಕೈಕೊಟ್ಟು ಆರ್ ಜೆಡಿ ಜೊತೆಗೆ ಹೋಗುತ್ತಾರಾ ನಿತೀಶ್?
ಜಮುಯಿ ವಿಧಾನಸಭೆ ಕ್ಷೇತ್ರದಲ್ಲಿ ಆರ್ಜೆಡಿಯ ವಿಜಯ್ ಪ್ರಕಾಶ್ ಅವರು, ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್ ಮಗಳು ಹಾಗೂ ಚಾಂಪಿಯನ್ ಶೂಟರ್ ಆಗಿರುವ ಬಿಜೆಪಿ ಅಭ್ಯರ್ಥಿ ಶ್ರೇಯಸಿ ಸಿಂಗ್ ಅವರನ್ನು ಎದುರಿಸುತ್ತಿದ್ದಾರೆ. ಇಲ್ಲಿ 14 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಎಲ್ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯೊಳಗೆ ಈ ವಿಧಾನಸಭೆ ಕ್ಷೇತ್ರವಿದೆ.
ವಿಜಯ್ ಪ್ರಕಾಶ್ ಅವರು ಹಾಲಿ ಶಾಸಕರಾಗಿದ್ದು, ಕೇಂದ್ರದ ಮಾಜಿ ಸಚಿವ ಜೈ ಪ್ರಕಾಶ್ ನಾರಾಯಣ್ ಯಾದವ್ ಅವರ ಸಹೋದರ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ನಿಕಟ ಸಹವರ್ತಿಯಾಗಿದ್ದಾರೆ. 2015ರಲ್ಲಿ ಮಹಾಮೈತ್ರಿಕೂಟ ಬಿಹಾರದಲ್ಲಿ ಆಡಳಿತ ನಡೆಸಿದಾಗ ಸಚಿವರಾಗಿದ್ದರು.