ಜೆಡಿಯು ಸೇರಿದ್ದ ಮಾಜಿ ಡಿಜಿಪಿ ಪಾಂಡೆಗೆ ಟಿಕೆಟ್ ನಿರಾಕರಣೆ
ಪಾಟ್ನಾ, ಅ. 8: ಇತ್ತೀಚೆಗೆ ಜನತಾದಳ(ಸಂಯುಕ್ತ) ಪಕ್ಷಕ್ಕೆ ಸೇರ್ಪಡೆಯಾಗಿದ್ದ ಬಿಹಾರದ ಮಾಜಿ ಡಿಜಿಪಿ ಗುಪ್ತೇಶ್ವರ್ ಪಾಂಡೆ ಅವರಿಗೆ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿಯಿತ್ತು. ಆದರೆ, ಜೆಡಿಯು ಪ್ರಕಟಿಸಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪಾಂಡೆ ಅವರ ಹೆಸರು ಕಂಡು ಬಂದಿಲ್ಲ.
ಜೆಡಿಯು 11 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. ಮೂಲಗಳ ಪ್ರಕಾರ ಪಾಂಡೆ ಅವರಿಗೆ ಟಿಕೆಟ್ ನೀಡುವ ಬಗ್ಗೆ ಜೆಡಿಯು ಇನ್ನೂ ನಿರ್ಧರಿಸಿಲ್ಲ, ಟಿಕೆಟ್ ಸಿಗುವುದು ಕಷ್ಟ ಎನ್ನಲಾಗಿದೆ.
ಜೆಡಿಯುಗೆ ಸೇರ್ಪಡೆಗೊಂಡ ಬಿಹಾರ ಮಾಜಿ ಡಿಜಿಪಿ ಪಾಂಡೆ
ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆ ಬಗ್ಗೆ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಸುದ್ದಿಯಾಗಿದ್ದರು. ಮುಂಬೈ ಪೊಲೀಸ್ ಹಾಗೂ ಬಿಹಾರ ಪೊಲೀಸ್ ನಡುವೆ ಕ್ವಾರಂಟೈನ್ ಯುದ್ಧವೇ ನಡೆದು ಹೋಯಿತು. ಪಾಟ್ನಾದ ಐಪಿಎಸ್ ಅಧಿಕಾರಿ ವಿನಯ್ ತಿವಾರಿಯನ್ನು ಬಲವಂತವಾಗಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಆರೋಪಿಸಿದ್ದರು. ಇದಾದ ಬಳಿಕ ಡಿಜಿಪಿ ಹುದ್ದೆಯಿಂದ ಕೆಳಗಿಳಿದಿದ್ದ ಪಾಂಡೆ ಅವರು ರಾಜಕೀಯ ರಂಗ ಪ್ರವೇಶಿಸುವ ಸುಳಿವು ನೀಡಿದ್ದರು.
ಬಕ್ಸರ್ ಕ್ಷೇತ್ರ ಮೂಲದವರಾಗಿದ್ದಾರೆ
ಬಕ್ಸರ್ ಕ್ಷೇತ್ರ ಮೂಲದವರಾಗಿದ್ದು, ಯಾವುದಾದರೂ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧ ಎಂದಿದ್ದಾರೆ. ಲಭ್ಯ ಮಾಹಿತಿಯಂತೆ ಪಾಂಡೆ ಅವರನ್ನು ವಾಲ್ಮಿಕಿ ನಗರ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಜೆಡಿಯು ಸಿದ್ಧತೆ ನಡೆಸಿದೆ. ಜೆಡಿಯು ಸಂಸದ ಅಬಿದ್ಯನಾಥ್ ಮಹ್ತೋ ಅವರ ನಿಧನದಿಂದಾಗಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. ಆದರೆ, ಬಿಜೆಪಿ ಹಾಗೂ ಜೆಡಿಯು ಸೀಟು ಹಂಚಿಕೆ ಒಪ್ಪಂದದಂತೆ ಈ ಬಾರಿ ಬಿಜೆಪಿ ಈ ಕ್ಷೇತ್ರ ದಕ್ಕಿದೆ.
ಟಿಕೆಟ್ ನಿರಾಕರಣೆ ಬಗ್ಗೆ ಪ್ರತಿಕ್ರಿಯೆ
ನನಗೆ ಟಿಕೆಟ್ ಯಾಕೆ ಸಿಕ್ಕಿಲ್ಲ ಎಂದು ವಿಚಾರಿಸಲು ಆತ್ಮೀಯರ ಮಾಡುತ್ತಿರುವ ಫೋನ್ ಕರೆಯಿಂದ ನಿಜಕ್ಕೂ ಕಿರಿಕಿರಿಯಾಗಿದೆ. ಅವರ ಕುತೂಹಲ, ಆತಂಕ ನನಗೆ ಅರ್ಥವಾಗುತ್ತದೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸಹಜವಾಗಿ ನಿರೀಕ್ಷೆಗಳಿತ್ತು. ನಾನೇನು ಇದರಿಂದ ಬೇಸರಗೊಂಡಿಲ್ಲ. ತಾಳ್ಮೆಯಿಂದಿದ್ದೇನೆ. ಹಲವು ಸಂಕಷ್ಟಗಳನ್ನು ಎದುರಿಸಿದ್ದು, ನನ್ನ ಜೀವನ ಬಿಹಾರ ಜನರಿಗೆ ಮುಡಿಪಾಗಿರುತ್ತದೆ ಎಂದಿದ್ದಾರೆ.
ಬ್ರಾಹ್ಮಣ ಮತಗಳನ್ನು ಸೆಳೆಯಬಹುದು
ಯಾದವೇತರ ಹಿಂದುಳಿದ ವರ್ಗ, ಪಾಸ್ಮಾಂದ ಮುಸ್ಲಿಮರ ಬೆಂಬಲದ ಮೇಲೆ ಜೆಡಿಯು ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿದ್ದು, ಪಾಂಡೆ ಅವರು ಕಣಕ್ಕಿಳಿದರೆ ಬ್ರಾಹ್ಮಣ ಮತಗಳನ್ನು ಸೆಳೆಯಬಹುದು ಎಂದೆನಿಸಲಾಗಿದೆ. 2009ರಲ್ಲೂ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಲೋಕಸಭೆ ಕಣಕ್ಕಿಳಿಯಲು ಯತ್ನಿಸಿ ವಿಫಲರಾಗಿದ್ದರು. ಆದರೆ, ಈ ಬಾರಿ ಅವರ ರಾಜೀನಾಮೆ, ವಿಆರ್ ಎಸ್ ಅವಧಿ ಎಲ್ಲವನ್ನು ರಾಜ್ಯಪಾಲ ಫಗು ಚೌಹಾಣ್ ಒಪ್ಪಿಕೊಂಡಿದ್ದರಿಂದ ರಾಜಕೀಯ ಪ್ರವೇಶಕ್ಕೆ ರಹದಾರಿ ಸಿಕ್ಕಿತು ಎನ್ನಬಹುದು.
1987ನೇ ಬ್ಯಾಚಿನ ಐಪಿಎಸ್ ಅಧಿಕಾರಿ
1987ರಿಂದ ಐಪಿಎಸ್ನಲ್ಲಿದ್ದ ಅವರು ಕಳೆದ ವರ್ಷ ಬಿಹಾರ ಡಿಜಿಪಿಯಾಗಿ ನೇಮಕವಾಗಿದ್ದರು. 2014ರ ಲೋಕಸಭೆ ಚುನಾವಣೆಗೂ ಮುನ್ನ ಕೂಡ ಪಾಂಡೆ ಅವರು ವಿಆರ್ಎಸ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಕ್ಸರ್ ಲೋಕಸಭೆ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡಿರಲಿಲ್ಲ. ಹೀಗಾಗಿ ವಿಆರ್ಎಸ್ ಹಿಂಪಡೆದಿದ್ದರು. ವಿಆರ್ಎಸ್ ಪಡೆಯಲು ಮೂರು ತಿಂಗಳ ನೋಟಿಸ್ ಅವಧಿಯಲ್ಲಿ ಇರಬೇಕೆಂಬ ನಿಯಮವನ್ನು ಸರ್ಕಾರ ಸಡಿಲಿಸಿರುವುದರಿಂದ ಪಾಂಡೆ ಅವರ ಮನವಿಯನ್ನು ಬೇಗ ಅಂಗೀಕರಿಸಲಾಗಿದೆ.