ಬಿಹಾರದಲ್ಲಿ ಕೊವಿಡ್ ಲಸಿಕೆ ಉಚಿತ: ಪ್ರತಿಪಕ್ಷಗಳ ಪ್ರಶ್ನೆಗೆ ಬಿಜೆಪಿ ಉತ್ತರ
ಪಾಟ್ನಾ, ಅಕ್ಟೋಬರ್.22: ಬಿಹಾರ ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಬಿಡುಗಡೆಗೊಳಿಸಿದ ಪ್ರಣಾಳಿಕೆಯು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೊರೊನಾವೈರಸ್ ಸೋಂಕಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಎಂಬ ಅಂಶವನ್ನು ಸೇರಿಸಿದ್ದಕ್ಕೆ ಪ್ರತಿಪಕ್ಷಗಳು ಕೆಂಡಾಮಂಡಲವಾಗಿವೆ.
ಪಾಟ್ನಾದಲ್ಲಿ ಗುರುವಾರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಎನ್ ಡಿಎ ಮೈತ್ರಿಕೂಟದ ಮುಂದಿನ ಐದು ವರ್ಷಗಳಿಗೆ ಸಂಬಂಧಿಸಿದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. "ಐದು ಸೂಕ್ರ, ಒಂದು ಗುರಿ ಮತ್ತು 19 ಸಂಕಲ್ಪ" ಎಂಬ ಧ್ಯೇಯವಾಕ್ಯವನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.
ರೋಗ, ಸಾವಿನ ಭೀತಿಯನ್ನು ಮಾರುತ್ತಿರುವ ಬಿಜೆಪಿ: ಉಚಿತ ಲಸಿಕೆ ಭರವಸೆಗೆ ತೇಜಸ್ವಿ ಕಿಡಿ
ಬಿಹಾರದಲ್ಲಿ ಎನ್ ಡಿಎ ಮೈತ್ರಿಕೂಟವನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದಲ್ಲಿ ರಾಜ್ಯವನ್ನು ಐಟಿ ಹಬ್ ಮಾಡುವುದು. 19 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವುದು ಸೇರಿದಂತೆ ಹಲವು ಅಂಶಗಳನ್ನು ಸೇರಿಸಲಾಗಿತ್ತು. ಈ ಪೈಕಿ ರಾಜ್ಯದ 7.20 ಲಕ್ಷ ಮತದಾರರನ್ನು ಒಲಿಸಿಕೊಳ್ಳವುದಕ್ಕೆ ಉಚಿತವಾಗಿ ಕೊರೊನಾವೈರಸ್ ಲಸಿಕೆ ವಿತರಿಸಲಾಗುತ್ತದೆ ಎಂಬ ಅಂಶ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಪ್ರಾಣ ಉಳಿಸುವ ಲಸಿಕೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ವಿರೋಧ ಪಕ್ಷದ ನಾಯಕರು ಟೀಕಾಪ್ರಹಾರ ನಡೆಸಿದ್ದಾರೆ. ಪ್ರಣಾಳಿಕೆಯಲ್ಲಿ ಈ ಅಂಶ ಸೇರಿಸಿರುವುದರ ಹಿಂದಿನ ಉದ್ದೇಶವನ್ನು ಬಿಜೆಪಿ ಇದೀಗ ಸ್ಪಷ್ಟಪಡಿಸಿದೆ.
ಕೊವಿಡ್ ಲಸಿಕೆ ಬಗ್ಗೆ ಎನ್ ಡಿಎ ಮೈತ್ರಿಕೂಟ ಹೇಳಿದ್ದೇನು?
ಬಿಹಾರ ಚುನಾವಣೆಗೆ ಎನ್ ಡಿಎ ಮೈತ್ರಿಕೂಟದ ಪ್ರಣಾಳಿಕೆ ಬಿಡುಗಡೆ ಬಳಿಕ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕೊವಿಡ್-19 ಲಸಿಕೆ ವಿತರಣೆ ಬಗ್ಗೆ ಮಾತನಾಡಿದರು. ದೇಶದಲ್ಲಿ ಒಂದು ಬಾರಿ ಕೊವಿಡ್-19 ಲಸಿಕೆ ಉತ್ಪಾದನೆ ಆರಂಭವಾದರೆ ಸಾಕು. ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಉಚಿತವಾಗಿ ಕೊರೊನಾವೈರಸ್ ಲಸಿಕೆಯನ್ನು ವಿತರಿಸಲಾಗುತ್ತದೆ. ಇದು ನಮ್ಮ ಮೈತ್ರಿಕೂಟದ ಮೊದಲ ಆಶ್ವಾಸನೆ ಮತ್ತು ಆದ್ಯತೆ ಆಗಿರಲಿದೆ ಎಂದು ಹೇಳಿದ್ದರು.
|
"ಸಾವಿನ ಭಯವನ್ನು ಮಾರಾಟಕ್ಕೆ ಇಟ್ಟಿದ್ದೀರಾ"
ಕೊರೊನಾವೈರಸ್ ಲಸಿಕೆಯನ್ನು ಉಚಿತವಾಗಿ ನೀಡುತ್ತೇವೆ ಎನ್ನುವ ಮೂಲಕ ಬಿಜೆಪಿ "ಸಾವಿನ ಭಯವನ್ನು ಮಾರಾಟಕ್ಕೆ ಇಡಲು ಹೊರಟಿದೆಯೇ" ಎಂದು ರಾಷ್ಟ್ರೀಯ ಜನತಾ ದಳ(ಆರ್ ಜೆಡಿ) ಪ್ರಶ್ನಿಸಿದೆ. ಕೊವಿಡ್-19 ಸಾಂಕ್ರಾಮಿಕ ಪಿಡುಗನ್ನು ಬಿಜೆಪಿಯು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಮುಂದಾಗಿದೆ. ಕೊರೊನಾವೈರಸ್ ಎಂಬುದು ಇಡೀ ದೇಶಕ್ಕೆ ಅಂಟಿರುವ ಸಮಸ್ಯೆಯೇ ಹೊರತೂ, ಬಿಜೆಪಿಗೆ ಸಂಬಂಧಿಸಿದ್ದಲ್ಲ. ಅವರು ಉಚಿತವಾಗಿ ಲಸಿಕೆ ನೀಡುತ್ತೇವೆ ಎನ್ನುವುದರ ಹಿಂದೆ ಬಿಜೆಪಿಗೆ ಬೇರೆ ಆಯ್ಕೆಗಳೇ ಉಳಿದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಒಂದು ಸಣ್ಣ ಮೊತ್ತಕ್ಕಾಗಿ ಬಿಹಾರದ ಜನರು ತಮ್ಮ ಮಕ್ಕಳ ಭವಿಷ್ಯವನ್ನು ಮಾರಾಟ ಮಾಡುವುದಕ್ಕೆ ಬಯಸುವುದಿಲ್ಲ" ಎಂದು ಆರ್ ಜೆಡಿ ಟೀಕಿಸಿದೆ.
|
"ವಿಶೇಷ ಅನುದಾನ ಘೋಷಿಸದಿರಲು ಕಾರಣವೇನು?"
ಬಿಹಾರದಲ್ಲಿ ಚುನಾವಣಾ ಪ್ರಚಾರ ನಡೆಸುವುದಕ್ಕೆ ಬಿಜೆಪಿಗರಿಗೆ ಮೇರೆ ದಾರಿಯೇ ಇಲ್ಲ. ಯಾವ ಮುಖವನ್ನು ಹೊತ್ತುಕೊಂಡು ಪ್ರಚಾರ ಮಾಡುವುದಕ್ಕೆ ಸಾಧ್ಯ ಎಂದು ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ. ಅಲ್ಲದೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ವಿಶೇಷ ಅನುದಾನ ಘೋಷಿಸದಿರಲು ಕಾರಣವೇನು. ಬಿಹಾರಕ್ಕೆ ವಿಶೇಷ ಸ್ಥಾನಮಾನದ ಅಡಿಯಲ್ಲಿ ಅನುದಾನ ಘೋಷಿಸಲು ಏಕೆ ಸಾಧ್ಯವಾಗಲಿಲ್ಲ ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.
|
ಬಿಜೆಪಿ ಖಜಾನೆಯಿಂದ ಹಣ ಕೊಟ್ಟು ಲಸಿಕೆ ನೀಡುತ್ತೀರಾ?
ಬಿಹಾರ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಜನರಿಗೆ ಉಚಿತವಾಗಿ ಕೊರೊನಾವೈರಸ್ ಲಸಿಕೆಯನ್ನು ವಿತರಿಸುವುದಾಗಿ ಉಲ್ಲೇಖಿಸಿದ್ದಕ್ಕೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಕಿಡಿ ಕಾರಿದ್ದಾರೆ. ಬಿಹಾರ ಜನತೆಗೆ ಕೊವಿಡ್-19 ಲಸಿಕೆ ನೀಡುವುದಕ್ಕೆ ಬಿಜೆಪಿಯೇನು ತನ್ನ ಪಕ್ಷದ ಖಜಾನೆಯಿಂದ ಹಣ ನೀಡುತ್ತದೆಯೇ. ದೇಶದಲ್ಲಿ ಜನರ ಸಾವಿನ ಭೀತಿಯನ್ನು ಮಾರಾಟ ಮಾಡಲು ಹೊರಟಿರುವುದು ಅವಮಾನಕರ ಸಂಗತಿ ಎಂದು ಕಿಡಿ ಕಾರಿದ್ದಾರೆ.
|
ಪ್ರತಿಪಕ್ಷಗಳ ಟೀಕೆಗೆ ಬಿಜೆಪಿ ನೀಡಿದ ಸ್ಪಷ್ಟನೆ ಹೇಗಿತ್ತು?
ಬಿಹಾರ ವಿಧಾನಸಭಾ ಚುನಾವಣಾ ಪ್ರಣಾಳಿಕೆ ಅಂಶಗಳ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ಬಿಜೆಪಿಯ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ಕೋಶದ ಉಸ್ತುವಾರಿ ಅಮಿತ್ ಮಾಳ್ವಿಯಾ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದ ಜನತೆಗೆ ಉಚಿತವಾಗಿ ಕೊವಿಡ್-19 ಲಸಿಕೆ ವಿತರಿಸಬೇಕು ಎಂಬ ತೀರ್ಮಾನ ಬಿಹಾರ ಬಿಜೆಪಿಗೆ ಸೇರಿದ್ದಾಗಿದೆ. ಬಿಹಾರ ಸರ್ಕಾರವು ಪ್ರಜೆಗಳಿಗೆ ಉಚಿತವಾಗಿ ಲಸಿಕೆ ನೀಡಲು ನಿರ್ಧರಿಸಿದೆ. ಕೇಂದ್ರ ಸರ್ಕಾರ ಎಲ್ಲ ಯೋಜನೆಗಳ ರೀತಿ ನಿಗದಿತ ಬೆಲೆಯಲ್ಲಿ ರಾಜ್ಯಗಳಿಗೆ ಲಸಿಕೆಯನ್ನು ನೀಡುತ್ತದೆ. ತದನಂತರದಲ್ಲಿ ಆ ಲಸಿಕೆಯನ್ನು ಪ್ರಜೆಗಳಿಗೆ ಉಚಿತವಾಗಿ ನೀಡಬೇಕೇ ಅಥವಾ ಕಡಿಮೆ ಬೆಲೆಯಲ್ಲಿ ನೀಡಬೇಕೇ ಎನ್ನುವುದನ್ನು ಆಯಾ ರಾಜ್ಯ ಸರ್ಕಾರಗಳು ತೀರ್ಮಾನಿಸಲಿವೆ ಎಂದು ತಿಳಿಸಿದ್ದಾರೆ.