ಪ್ರಧಾನಿ ಮೋದಿ ಮೇಲೆ ವಿಶ್ವಾಸ ಕಳೆದುಕೊಂಡರಾ ನಿತೀಶ್ ಕುಮಾರ್?
ಪಾಟ್ನಾ, ಅಕ್ಟೋಬರ್.30: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶ್ವಾಸನೆ ಬಗ್ಗೆ ತೃಪ್ತಿಯಿಲ್ಲ ಎಂದು ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯವರ ಮೇಲೆ ಸಿಎಂ ನಿತೀಶ್ ಕುಮಾರ್ ಅವರಿಗೆ ಯಾವುದೇ ವಿಶ್ವಾಸವಿದ್ದಂತೆ ತೋರುತ್ತಿಲ್ಲ. ಬಿಜೆಪಿ ಮತ್ತು ಪ್ರಧಾನಿ ಮೋದಿ ನೀಡಿರುವ ಆಶ್ವಾಸನೆ ಬಗ್ಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಂದ ಕೇಳಿಕೊಳ್ಳಬೇಕೇ ಎಂದು ಲೇವಡಿ ಮಾಡಿದ್ದಾರೆ.
"ಬಿಹಾರದಲ್ಲಿ ಬಿಜೆಪಿ-ಎಲ್ ಜೆಪಿ ಮೈತ್ರಿಕೂಟದಲ್ಲಿ ಹೊಸ ಸರ್ಕಾರ"
ಬಿಹಾರ ವಿಧಾನಸಭಾ ಚುನಾವಣೆಗೂ ಮೊದಲೇ ಎನ್ ಡಿಎ ಮೈತ್ರಿಕೂಟದಿಂದಿಗೆ ಲೋಕಜನಶಕ್ತಿ ಪಕ್ಷವು ಹೊರ ನಡೆದಿದೆ. ಇದರ ನಡುವೆಯೂ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿ ಜೊತೆಗೆ ಉತ್ತಮ ಬಾಂಧವ್ಯವಿದೆ ಎಂಬ ವರದಿಗಳು ಪ್ರಕಟವಾದ ಬೆನ್ನಲ್ಲೇ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಚಿರಾಗ್ ಮತ್ತು ಬಿಜೆಪಿ ನಡುವೆ ಯಾವ ಸಂಪರ್ಕವಿಲ್ಲ
"ಬಿಹಾರ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಎನ್ ಡಿಎ ಮೈತ್ರಿಕೂಟದ ಪರವಾಗಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಪ್ರಚಾರ ಮಾಡಿದ್ದಾರೆ. ಬಿಜೆಪಿ ನಾಯಕರು ಪದೇ ಪದೆ ಚಿರಾಗ್ ಪಾಸ್ವಾನ್ ಅವರ ಜೊತೆಗೆ ಸಂಪರ್ಕವನ್ನು ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸುತ್ತಲೇ ಇದ್ದಾರೆ. ಹೀಗಿದ್ದರೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಅದ್ಯಾಕೋ ಬಿಜೆಪಿಯವರ ಮೇಲೆ ವಿಶ್ವಾಸವೇ ಇದ್ದಂತೆ ಕಾಣುತ್ತಿಲ್ಲ" ಎಂದು ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ದೂರಿದ್ದಾರೆ.
"ಪ್ರಧಾನಿ ಮೋದಿಯವರೇ ಹೇಳಿದರೂ ಸಾಲದೇ?"
ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಜೊತಗೆ ಬಿಜೆಪಿ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಎಂದು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಸ್ಪಷ್ಟವಾಗಿ ಹೇಳಿದ್ದರೂ, ಸಿಎಂ ನಿತೀಶ್ ಕುಮಾರ್ ಅವರಿಗೆ ತೃಪ್ತಿಯಾಗಿಲ್ಲ. ಇವರಿಗೆ ಮೊದಲು ರಾಷ್ಟ್ರಪತಿಗಳಿಂದ ನಂತರ ಬೇರೆ ರಾಷ್ಟ್ರಗಳ ಪ್ರಧಾನಿಗಳಿಂದ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಆ ಮಾತನ್ನು ಹೇಳಿಸಬೇಕೋ ಏನೋ ಎಂದು ಚಿರಾಗ್ ಪಾಸ್ವಾನ್ ವ್ಯಂಗ್ಯವಾಡಿದ್ದಾರೆ.
ಚಿರಾಗ್ ಪಾಸ್ವಾನ್ ವಿರುದ್ಧ ಜೆ.ಪಿ. ನಡ್ಡಾ ಆರೋಪ
ಕಳೆದ ಮಂಗಳವಾರ ಬಿಹಾರ ಚುನಾವಣಾ ಅಖಾಡದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ಚಿರಾಗ್ ಪಾಸ್ವಾನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳುವುದರ ಹಿಂದೆ ಮತವನ್ನು ಒಡೆಯುವ ಪಿತೂರಿ ಅಡಗಿದೆ. ಇದರಿಂದ ಆರ್ ಜೆಡಿ ಪಕ್ಷಕ್ಕೆ ಲಾಭವಾಗುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದರು.
ಎಲ್ ಜೆಪಿ-ಬಿಜೆಪಿ ಮೈತ್ರಿ ಸರ್ಕಾರದ ಬಗ್ಗೆ ಮಾತು
ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡು ನವೆಂಬರ್.10ರಂದು ಫಲಿತಾಂಶ ಹೊರ ಬೀಳಲಿದೆ. ಅಂದು ಸಿಎಂ ನಿತೀಶ್ ಕುಮಾರ್ ತಮ್ಮ ಅಧಿಕಾರವನ್ನು ಕಳೆದುಕೊಳ್ಳಲಿದ್ದು, ಬಿಜೆಪಿ ಮತ್ತು ಎಲ್ ಜೆಪಿ ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸುತ್ತವೆ ಎಂದು ಚಿರಾಗ್ ಪಾಸ್ವಾನ್ ಭವಿಷ್ಯ ಹೇಳಿದ್ದರು. ನಿತೀಶ್ ಕುಮಾರ್ ಅವರಿಗೆ ನೀಡುವ ಒಂದೊಂದು ಮತವೂ, ಬಿಹಾರದ ಆಡಳಿತವನ್ನು ಕುಗ್ಗಿಸುವುದಷ್ಟೇ ಅಲ್ಲ. ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟವನ್ನು ಶಕ್ತಿಯುತಗೊಳಿಸಿದಂತೆ" ಎಂದು ಚಿರಾಗ್ ಪಾಸ್ವಾನ್ ಕೂಡಾ ಟ್ವೀಟ್ ಮಾಡಿದ್ದರು.