ಎಲ್ ಜೆಪಿ ಜೆಡಿಯು ಮೈತ್ರಿ, ಚಿರಾಗ್ ನಿರ್ಣಯವೇ ಅಂತಿಮ!
ಪಾಟ್ನ, ಸೆ. 8: ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೆ ಭರದಿಂದ ಸಿದ್ಧತೆ ಸಾಗಿದೆ. ಈ ನಡುವೆ ಮೈತ್ರಿಕೂಟಗಳ ನಡುವಿನ ತಿಕ್ಕಾಟ, ಯಾವ ನೇತೃತ್ವದಲ್ಲಿ ಚುನಾವಣೆ ನಡೆಸಬೇಕು ಎಂಬುದು ಪ್ರತಿಷ್ಠೆ ಹಾಗೂ ಮುಂದಿನ ನಾಯಕತ್ವಕ್ಕೆ ನಿರ್ಣಾಯಕ ಪಾತ್ರವಾಗುತ್ತಿದೆ.
Recommended Video
ಮೈತ್ರಿಕೂಟಗಳ ನಡುವಿನ ಸೀಟು ಹಂಚಿಕೆ, ಚುನಾವಣೆ ಪ್ರಚಾರ ಆರಂಭದ ನಡುವೆ ನಾಯಕತ್ವ ಪ್ರಶ್ನೆ ಮೊದಲಿಗೆ ಲೋಕ ಜನಶಕ್ತಿ(LJP)ಪಕ್ಷದಲ್ಲಿ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವರ್ಚುಯಲ್ ಸಮಾವೇಶ ನಡೆಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಆದರೆ, ಮೊದಲ ಸಮಾವೇಶ ನೀರಸವೆನಿಸಿದ್ದು, ಈ ಬಾರಿಯ ಚುನಾವಣೆಯನ್ನು ನಿತೀಶ್ ನೇತೃತ್ವದಲ್ಲಿ ಎದುರಿಸಬೇಕೆ? ಬೇಡವೆ? ಎಂಬುದರ ಬಗ್ಗೆ ಎಲ್ ಜೆಪಿ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.
'' ಸಿಎಂ ನಿತೀಶ್ ವರ್ಚುಯಲ್ ಪ್ರಚಾರ, ಸೂಪರ್ ಡೂಪರ್ ಫ್ಲಾಪ್''
ಈ ನಿಟ್ಟಿನಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಎಲ್ ಜೆಪಿ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರಿಗೆ ನೀಡಿದೆ. ಚಿರಾಗ್ ಹಾಗೂ ನಿತೀಶ್ ನಡುವಿನ ಮೌನ ಯುದ್ಧದ ನಡುವೆ ಮುಂದಿನ ನಾಯಕತ್ವ ನಿರ್ಧಾರವಾಗಲಿದೆ.
ಬಿಜೆಪಿ ಪಾತ್ರವೇನು?
ಜೆಡಿಯು ವಿರುದ್ಧ ಎಲ್ ಜೆಪಿ ಅಭ್ಯರ್ಥಿ ಕಣಕ್ಕಿಳಿದರೆ ಮೈತ್ರಿ ಹಾಗೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬುದು ಬಿಜೆಪಿಗೂ ಗೊತ್ತಿದೆ. ಜೆಡಿಯು ಜೊತೆ ಎಲ್ ಜೆಪಿ ಗುದ್ದಾಡಿದರೂ ಬಿಜೆಪಿ ಜೊತೆ ಎಲ್ ಜೆಪಿ ಚೆನ್ನಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೊಗಳುತ್ತಾ ಸಾಗಿರುವ ಎಲ್ ಜೆಪಿಗೆ ರಾಮ್ ವಿಲಾಸ್ ಪಾಸ್ವಾನ್ ಅವರು ಕೇಂದ್ರ ಸಚಿವರಾಗಿ ಉಳಿದುಕೊಳ್ಳಬೇಕಿದೆ. ಚುನಾವಣೆ ಹತ್ತಿರ ಇರುವುದರಿಂದ ಮೈತ್ರಿ ಉಳಿಸಿಕೊಳ್ಳುವುದು ಮೂರು ಪಕ್ಷಗಳಿಗೂ ಬೇಕಿದೆ. ಆದರೆ, ಚರ್ಚಿಸಲು ಯಾರು ಸಿದ್ಧರಾಗಿಲ್ಲ.
ಎಲ್ ಜೆಪಿ ಸಂಸದೀಯ ಮಂಡಳಿ ಸಭೆ
ಬಿಹಾರ ಚುನಾವಣೆಗಾಗಿ 143 ಅಭ್ಯರ್ಥಿಗಳ ಪಟ್ಟಿ ಸಿದ್ಧವಿದ್ದು, ಸಂಸದೀಯ ಮಂಡಳಿ ಪರಿಶೀಲನೆ ನಂತರ ಪ್ರಕಟಿಸುವುದು ಹಾಗೂ ಚಿರಾಗ್ ಪಾಸ್ವಾನ್ ಅವರಿಗೆ ಮುಂದಿನ ನಾಯಕತ್ವದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡುವುದು ಎಂಬ ಎರಡು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಶಾಸಕ ಹಾಗೂ ಮಂಡಳಿಯ ಮುಖ್ಯಸ್ಥ ರಾಜು ತಿವಾರಿ ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ಎದೆಯಲ್ಲಿ ಢವಢವ ಹೆಚ್ಚಿಸಿದ ಜಾಹೀರಾತು!
ಚಿರಾಗ್ ಪಾಸ್ವಾನ್ ಕಾಳಿದಾಸನಾಗಿದ್ದು
ಜೆಡಿಯು ಸಂಸದ ರಾಜೀವ್ ರಂಜನ್ ಸಿಂಗ್ ಅವರು ಈ ಹಿಂದೆ ಚಿರಾಗ್ ಪಾಸ್ವಾನ್ ರನ್ನು ಸಂಸ್ಕೃತ ಕವಿ ಕಾಳಿದಾಸನ ಪೂರ್ವ ಜೀವಿತಕ್ಕೆ ಹೋಲಿಸಿದ್ದರು. ತಾನು ಕುಳಿತ ಮರ ಕೊಂಬೆಯನ್ನು ಕತ್ತರಿಸುತ್ತಿರುವ ಕಾಳಿದಾಸನಂತೆ ಚಿರಾಗ್ ಎಂದು ಹೋಲಿಕೆ ನೀಡಿದ್ದನ್ನು ಎಲ್ ಜೆಪಿ ನಾಯಕ ಸಂಜಯ್ ಸಿಂಗ್ ಅವರು ಪ್ರಸ್ತಾಪಿಸಿ, ಜೆಡಿಯು ಜೊತೆ ಸಖ್ಯ ಬೇಡ ಎಂದು ಆಗ್ರಹಿಸಿದರು.
''ಚಿರಾಗ್ ಅವರು ಬಿಹಾರದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದರೆ ರೆಬೆಲ್ ಎಂದು ಲೆಬೆಲ್ ಹಾಕಲಾಯಿತು. ಬಿಹಾರದ ಅಭಿವೃದ್ಧಿಗಾಗಿ ಎಲ್ ಜೆಪಿ ಯೋಚಿಸುವುದು ತಪ್ಪೇ, ಜೆಡಿಯು ಅಭ್ಯರ್ಥಿ ಇರುವ ಕಡೆ ಎಲ್ ಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ'' ಎಂದು ಸಂಜಯ್ ಸಿಂಗ್ ಬೇಡಿಕೆ ಮುಂದಿಟ್ಟರು.
ಏಕಾಂಗಿ ಹೋರಾಟ ಸಾಧ್ಯವೆ?
ಜೆಡಿಯು ಸಖ್ಯ ತೊರೆದು ಎಲ್ ಜೆಪಿ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಕೇಂದ್ರ ಸಂಸದೀಯ ಮಂಡಳಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಹಾಲಿ, ಮಾಜಿ ಸಂಸದರ ಜೊತೆ ಕೂಡಾ ಚಿರಾಗ್ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿಗಾಗಿ ನಾವು ಜೆಡಿಯು ಜೊತೆ ಅನಿವಾರ್ಯವಾಗಿ ಕೈ ಜೋಡಿಸಿದ್ದೇ ವಿನಾ ರಾಜ್ಯಮಟ್ಟದಲ್ಲಿ ಜೆಡಿಯು ಜೊತೆ ಮೈತ್ರಿ ಅಗತ್ಯವಿಲ್ಲ, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಕಾಲ ಬಂದಿದೆ ಎಂದು ಹಿರಿಯ ಎಲ್ ಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಎಲ್ ಜೆಪಿ, ಬಿಜೆಪಿ ಹಾಗೂ ಜೆಡಿಯು ನಡುವಿನ ಸಭೆ ಇನ್ನೂ ನಡೆದಿಲ್ಲ, ಚಿರಾಗ್ ನಿರ್ಣಯದ ಬಗ್ಗೆ ಎಲ್ಲರಿಗೂ ಕುತೂಹಲವಿದ್ದೇ ಇದೆ.
ರಾಮ್ ವಿಲಾಸ್ ಪಾಸ್ವಾನ್: ಯಾವ ಸರ್ಕಾರ ಬಂದರೂ ಇವರಿಗೆ ಸಚಿವ ಸ್ಥಾನ ಕಾಯಂ!