ನೆರೆ ಪರಿಶಿಲನೆಗೆ ತೆರಳಿದ್ದಾಗ ಮುಳುಗಿದ ಬಿಜೆಪಿ ಸಂಸದರಿದ್ದ ದೋಣಿ
ಪಾಟ್ನಾ, ಅಕ್ಟೋಬರ್ 03: ಬಿಹಾರದಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹದ ಸ್ಥಿತಿಗತಿಯನ್ನು ಪರಿಶೀಲಿಸಲು ತೆರಳಿದ್ದ ಬಜೆಪಿ ಸಂಸದರೊಬ್ಬರ ದೋಣಿಯೇ ಮುಳುಗಿದ ಘಟನೆ ಬುಧವಾರ ನಡೆದಿದೆ.
ಪಾಟಲಿಪುತ್ರದ ಬಿಜೆಪಿ ಸಂಸದ ರಾಮ್ ಕೃಪಾಳ್ ಯಾದವ್ ಅವರು ಬಿಹಾರ ರಾಜಧಾನಿ ಪಾಟ್ನಾ ಬಳಿಯ ಮಸೌರ್ಹಿ ಎಂಬಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರಿದ್ದ ದೋಣಿ ಮುಳುಗಿತ್ತು. ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿದ ಪರಿಣಾಮ ಅವರು ಪ್ರಾಣಾಪಾಯದಿಂದ ಪಾರಾದರು.
ಪಾಟ್ನಾ ಪ್ರವಾಹದಲ್ಲಿ ರೂಪದರ್ಶಿಯ ಫೋಟೋಶೂಟ್ ವೈರಲ್
ಬಿಹಾರದಲ್ಲಿ ಭಾರೀ ಮಳೆ, ಪ್ರವಾಹ: 27 ಮಂದಿ ದುರ್ಮರಣ
ನಂತರ ಮಾತನಾಡಿದ ಯಾದವ್, 'ನೆರೆ ಪರಿಹಾರಕ್ಕೆ ರಾಜ್ಯ ಸರ್ಕಾರ ಯಾವುದೇ ರೀತಿಯ ಪ್ರಯತ್ನ ನಡೆಸುತ್ತಿಲ್ಲ. ಪಾಟ್ನಾವನ್ನು ಬಿಟ್ಟರೆ ಬೇರೆ ಯಾವ ಪ್ರದೇಶದ ಬಗ್ಗೆಯೂ ಯೋಚಿಸುತ್ತಿಲ್ಲ. ಪಾಟ್ನಾ ಮಾತ್ರವಲ್ಲದೆ ಸುತ್ತಲ ಹಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ನಾನು ನೆರೆ ಪರಿಶೀಲನೆಗೆ ಹೊರಟರೆ ಸರ್ಕಾರ ನನಗೆ ದೋಣಿಯನ್ನೂ ನೀಡಿರಲಿಲ್ಲ' ಎಂದು ನಿತೀಶ್ ಕುಮಾರ್ ನೇತೃತ್ವದ ಬಿಹಾರದ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರವನ್ನು ದೂರಿದರು.
ಬಿಹಾರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪ್ರವಾಹ ಸ್ಥಿತಿ ತಲೆದೋರಿದ್ದು, ಇದುವರೆಗೆ 30 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.