ಸಂಸದ ತೇಜಸ್ವಿ ಸೂರ್ಯ ಹೇಳಿಕೆಯಿಂದ ಬಿಹಾರ ಸಿಎಂಗೆ ತಲೆನೋವು!
ಪಾಟ್ನಾ, ಅಕ್ಟೋಬರ್.27: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ನಡುವೆ ಬಿಜೆಪಿಯ ಸಂಸದರೊಬ್ಬರು ಚಿರಾಗ್ ಪಾಸ್ವಾನ್ ರನ್ನು ಹೊಗಳಿರುವುದು ಹೊಸ ತಲೆನೋವು ತಂದಿದೆ.
ಬಿಹಾರದ ಅರ್ಹಾದಲ್ಲಿ ಕರ್ನಾಟಕ ಮೂಲದ ಸಂಸದ ತೇಜಸ್ವಿ ಸೂರ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಪ್ರಚಾರಕ್ಕೆ ತೆರಳಿದ ತೇಜಸ್ವಿ ಸೂರ್ಯ, ಬಿಜೆಪಿಯ ಪ್ರತಿಸ್ಪರ್ಧಿ ಆಗಿರುವ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ರನ್ನು ಹಾಡಿ ಹೊಗಳಿದ್ದಾರೆ.
ರಕ್ತ ಸಂಬಂಧಿಗಳಿಗಾಗಿ ರಾಜಕಾರಣ ಮಾಡಲ್ಲ: ಸಿಎಂ ನಿತೀಶ್ ಕುಮಾರ್
"ಚಿರಾಗ್ ಪಾಸ್ವಾನ್ ಬಹಳ ಶಕ್ತಿಯುತ ನಾಯಕರಾಗಿದ್ದಾರೆ. ಸಂಸತ್ತಿನಲ್ಲಿ ಅವರು ಬಿಹಾರದ ಸಮಸ್ಯೆಗಳನ್ನು ಅಂಕಿ-ಅಂಶಗಳ ಸಹಿತ ಮಂಡಿಸುತ್ತಿದ್ದರು. ಪ್ರಸಿದ್ಧ ಯುವ ಮುಖಂಡರೂ ಆಗಿರುವ ಅವರು ನನಗೆ ವಿಶೇಷ ಸ್ನೇಹಿತರಾಗಿದ್ದಾರೆ. ನಾನು ಅವರಿಗೆ ಸದಾ ಒಳ್ಳೆಯದಾಗಲಿ ಎಂದು ಬಯಸುತ್ತೇನೆ" ಎಂದು ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ.
ಎನ್ ಡಿಎ ಗೆಲುವು ಪಕ್ಕಾ ಎಂದ ತೇಜಸ್ವಿ ಸೂರ್ಯ
"ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ನಮ್ಮ ಪ್ರಮುಖ ನಾಯಕರು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(NDA)ವೇ ಬಿಹಾರ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಗೆಲುವು ಸಾಧಿಸಲಿದೆ. ನಿತೀಶ್ ಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ" ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಭವಿಷ್ಯದ ಬಗ್ಗೆ ಯಾರು ತಾನೇ ಬಲ್ಲರು?
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ನವೆಂಬರ್.10ರಂದು ಹೊರ ಬೀಳಲಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್ ಡಿಎ ಮೈತ್ರಿಕೂಟದ ನಾಯಕರಾಗಿದ್ದಾರೆ. ಎನ್ ಡಿಎ ಮೈತ್ರಿಕೂಟ ಗೆಲುವು ಸಾಧಿಸಿದರೆ ಅವರೇ ರಾಜ್ಯದ ಮುಂದಿನ ಮುಖ್ಯಮಂತ್ರಿಯೂ ಆಗುತ್ತಾರೆ. ಆದರೆ ಫಲಿತಾಂಶದ ನಂತರದಲ್ಲಿ ಏನಾಗುತ್ತದೆಯೋ ಎಂಬುದು ಸಾಕಷ್ಟು ಕುತೂಹಲ ಮೂಡಿಸುತ್ತಿದೆ.
ಚಿರಾಗ್ ಪಾಸ್ವಾನ್ ಹೇಳಿಕೆಯಿಂದ ಕೆರಳಿದ ಕುತೂಹಲ
ಬಿಹಾರ ಚುನಾವಣಾ ಅಖಾಡದಲ್ಲಿ ಸಿಎಂ ನಿತೀಶ್ ಕುಮಾರ್ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡುತ್ತಿರುವ ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್, ಬಿಜೆಪಿಯನ್ನು ಹಾಡಿ ಹೊಗಳುತ್ತಿದ್ದಾರೆ. ರಾಜ್ಯದಲ್ಲಿ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಜೊತೆಗೆ ಕೂಡಿಕೊಂಡು ಸರ್ಕಾರ ರಚಿಸುವುದಕ್ಕೂ ಸಿದ್ಧ ಎಂದು ಹೇಳಿಕೆ ನೀಡಿದ್ದಾರೆ. ನಿತೀಶ್ ಕುಮಾರ್ ರನ್ನು ಸಿಎಂ ಸ್ಥಾನದಲ್ಲಿ ಕೂರಿಸುವುದಿಲ್ಲ ಎಂದರೆ ಬಿಜೆಪಿ ಜೊತೆಗೆ ಹೋಗುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಅಂತಲೂ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ನಿತೀಶ್ ಕುಮಾರ್ ರನ್ನು ಜೈಲಿಗೆ ಕಳುಹಿಸುವ ಮಾತು
ಬಿಹಾರದಲ್ಲಿ ಲೋಕಜನಶಕ್ತಿ ಪಕ್ಷವು ಅಧಿಕಾರಕ್ಕೆ ಬಂದರೆ ಸಿಎಂ ನಿತೀಶ್ ಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದಿದ್ದ ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಬಳಿಕ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. "ನನ್ನ ಮಾತಿನ ಅರ್ಥ, ಒಂದು ವೇಳೆ ಅವರು ತಪ್ಪಿತಸ್ಥರೇ ಆಗಿದ್ದಲ್ಲಿ ಅಪರಾಧ ದೃಢಪಟ್ಟ ಮೇಲೆ ಜೈಲಿಗೆ ಹೋಗುವುದು ಪಕ್ಕಾ ಎಂದು ಹೇಳಿದ್ದೇನೆ. ಒಬ್ಬ ಮುಖ್ಯಮಂತ್ರಿ ಆಗಿ ರಾಜ್ಯದಲ್ಲಿ ನಡೆದ ಬೃಹತ್ ಹಗರಣಗಳ ಬಗ್ಗೆ ಹೇಗೆ ತಾನೇ ಮಾಹಿತಿ ಇಲ್ಲದೇ ಇರುವುದಕ್ಕೆ ಸಾಧ್ಯವೇ. ನಿಮಗೆ ಕಾನೂನಿನ ಮರುಪರಿಶೀಲನೆ ಮಾಡಬೇಕು ಎಂದು ಅನ್ನಿಸಲಿಲ್ಲವೇಕೆ. ತನಿಖೆ ನಡೆಸಿ ಸತ್ಯಶೋಧನೆಗೆ ಮುಂದಾಗದಿರಲು ಕಾರಣವೇನು. ಅಂದರೆ ನೀವೂ ಕೂಡಾ ಅಕ್ರಮದಲ್ಲಿ ಶಾಮೀಲಾಗಿದ್ದೀರಾ ಎಂದು ಚಿರಾಗ್ ಪಾಸ್ವಾನ್ ಪ್ರಶ್ನಿಸಿದ್ದರು.