ಸಿಎಂ ನಿತೀಶ್ ಕುಮಾರ್ ದಣಿದಿದ್ದಾರೆ ಎಂದಿದ್ದೇಕೆ ತೇಜಸ್ವಿ ಯಾದವ್?
ಪಾಟ್ನಾ, ಅಕ್ಟೋಬರ್.25: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ನಾಯಕರ ನಡುವೆ ಏಟು-ಎದುರೇಟಿನ ಕುಸ್ತಿ ನಡೆಯುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಮಹಾಘಟಬಂಧನ್ ಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ವಾಗ್ದಾಳಿ ಮುಂದುವರಿಸಿದ್ದಾರೆ.
ಬಿಹಾರದ ಮುಖ್ಯಮಂತ್ರಿ ಆಗಿರುವ "ಗೌರವಾನ್ವಿತ ನಿತೀಶ್ ಕುಮಾರ್ ಜಿ ದಣಿದಿದ್ದಾರೆ. ಅವರ ಹಳೆಯ, ನೀರಸ ಮತ್ತು ವಯಸ್ಸಾದ ಅವರ ಭಾಷಣಗಳಿಂದ ಜನರು ಬೇಸರಗೊಂಡಿದ್ದಾರೆ" ಎಂದು ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.
ಬಿಹಾರದಲ್ಲಿ ಸಿಎಂ ಪಟ್ಟದ ರೇಸ್: ನಿತೀಶ್ ಮುಂದೆ, ತೇಜಸ್ವಿ ಹಿಂದೆ
ಜನರು ಇದೀಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ದ್ವೇಷಿಸುವುದಕ್ಕೆ ಆರಂಭಿಸಿದ್ದಾರೆ. ನಮ್ಮ ಪ್ರಚಾರದ ಸಂದರ್ಭಗಳಲ್ಲಿ ಸಿಎಂ ನಿತೀಶ್ ಕುಮಾರ್ ಆಡಳಿತ ವೈಖರಿ ಬಗ್ಗೆ ಸಾರ್ವಜನಿಕರು ಬೇಸರಗೊಂಡಿರುವುದು ಗೊತ್ತಾಗುತ್ತಿದೆ. "ಜಾತಿ, ಮತ, ವರ್ಗ ಮತ್ತು ಧರ್ಮವನ್ನು ಬದಿಗಿಟ್ಟು ಜನರು ಇದೀಗ ನಿರುದ್ಯೋಗವನ್ನೇ ಮುಖ್ಯ ವಿಷಯವಾಗಿಟ್ಟುಕೊಂಡು ಚುನಾವಣೆ ಸ್ಪರ್ಧಿಸುವುದಕ್ಕೆ ಮುಂದಾಗಿದ್ದಾರೆ ಎಂದು" ತೇಜಸ್ವಿ ಯಾದವ್ ಎಎನ್ಐಗೆ ಹೇಳಿದ್ದಾರೆ.
"ಜಂಗಲ್ ರಾಜ್ ನಿರ್ಮಿಸಿದವರ ಬಾಯಲ್ಲಿ ಅಭಿವೃದ್ಧಿಮಂತ್ರ"
ಈ ಹಿಂದೆ ಬಿಹಾರದಲ್ಲಿ "ಶಿಕ್ಷಣ, ಆರೋಗ್ಯ ಮತ್ತು ರಸ್ತೆಗಳ ಕಾಮಗಾರಿಗಳನ್ನು ನಿರ್ಲಕ್ಷಿಸಿದ್ದು ಅಲ್ಲದೇ " ಜಂಗಲ್ ರಾಜ್" ಅನ್ನು ಪ್ರೋತ್ಸಾಹಿಸುವಲ್ಲಿ ಸಮಯ ಕಳೆದವರು ಇಂದು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ. ಇದು ತಮಾಷೆಯಲ್ಲದೆ ಮತ್ತೇನಲ್ಲ" ಎಂದು ತೇಜಸ್ವಿ ಯಾದವ್ ಅವರ ಬಗ್ಗೆ ನಿತೀಶ್ ಕುಮಾರ್ ಲೇವಡಿ ಮಾಡಿದ್ದರು.
"ಶಿಕ್ಷಣವಿಲ್ಲದೇ ಎಲ್ಲವನ್ನೂ ಪಡೆಯಲು ಹೊರಟವರು"
"ನಾವು ಶಿಕ್ಷಣದಿಂದ ಎಲ್ಲವನ್ನೂ ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸುತ್ತೇವೆ. ಆದರೆ ಕೆಲವರ 9ನೇ ತರಗತಿಗೆ ಶಾಲೆಯನ್ನು ಬಿಟ್ಟವರು ಇಂದು ದೊಡ್ಡ ದೊಡ್ಡ ಕನಸು ಕಾಣುತ್ತಿದ್ದಾರೆ. ಸಿಎಂ ಆಗುವುದಕ್ಕಾಗಿ ಹವಣಿಸುತ್ತಿದ್ದಾರೆ. ಶಿಕ್ಷಣವಿಲ್ಲದೇ ಎಲ್ಲವನ್ನೂ ಪಡೆದುಕೊಳ್ಳುವ ಹವಣಿಕೆಯಲ್ಲಿದ್ದಾರೆ ಎಂದು ತೇಜಸ್ವಿ ಯಾದವ್ ವಿರುದ್ಧ ಸಿಎಂ ನಿತೀಶ್ ಕುಮಾರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.
ಭ್ರಷ್ಟಾಚಾರದ ಭೀಷ್ಮ ಎಂದು ಕರೆದ ತೇಜಸ್ವಿ ಯಾದವ್
ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಾವಿರಾರು ಕೋಟಿ ರೂಪಾಯಿ ಹಗರಣಗಳನ್ನೇ ಮಾಡಿದ್ದು, ರಾಜ್ಯವು ಭ್ರಷ್ಟಾಚಾರದಲ್ಲಿ ಉತ್ತುಂಗದ ಸ್ಥಾನದಲ್ಲಿದೆ ಎಂದು ತೇಜಸ್ವಿ ಯಾದವ್ ದೂಷಿಸಿದ್ದಾರೆ. ಸಿಎಂ ನಿತೀಶ್ ಕುಮಾರ್ ಅವರು "ಭ್ರಷ್ಟಾಚಾರದ ಭೀಷ್ಮ ಪಿತಾಮಹ" ಎಂದು ಲೇವಡಿ ಮಾಡಿದ್ದರು. ವಿಧಾನಸಭಾ ಚುನಾವಣೆ ಬಳಿಕ ರಾಷ್ಟ್ರೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಈಗಿನ ಸರ್ಕಾರವು ನಡೆಸಿರುವ ಅಕ್ರಮ ಮತ್ತು ಹಗರಣಗಳನ್ನೆಲ್ಲ ಬಯಲಿಗೆ ಎಳೆಯುತ್ತೇವೆ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಲಾಗುತ್ತದೆ ಎಂದು ತೇಜಸ್ವಿ ಯಾದವ್ ಭರವಸೆ ನೀಡಿದ್ದರು.
30 ಸಾವಿರ ಕೋಟಿ ವಂಚನೆಗೆ 60 ಹಗರಣ
ಬಿಹಾರದಲ್ಲಿ ಸರ್ಕಾರದ ಬೊಕ್ಕಸದಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಬರೋಬ್ಬರಿ 30000 ಕೋಟಿ ರೂಪಾಯಿ ಹಣವನ್ನು ವಂಚಿಸಿದೆ. 30 ಸಾವಿರ ಕೋಟಿ ಹಣವನ್ನು ದೋಚುವುದಕ್ಕೆ 60 ಹಗರಣಗಳನ್ನು ಮಾಡಲಾಗಿದೆ. ಇಷ್ಟಾದರೂ ಯಾವುದೇ ಹಗರಣದಲ್ಲಿ ಸಿಎಂ ನಿತೀಶ್ ಕುಮಾರ್ ನೇರವಾಗಿ ಭಾಗಿಯಾಗಿರುವ ಬಗ್ಗೆ ಉಲ್ಲೇಖವಾಗಿಲ್ಲ. ಹಾಗಾಗಿಯೇ ಅವರನ್ನು "ಭ್ರಷ್ಟಾಚಾರದ ಭೀಷ್ಮ ಪಿತಾಮಹ" ಅಂತಾ ಕರೆಯಲಾಗುತ್ತದೆ ಎಂದು ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಕಿಡಿ ಕಾರಿದ್ದಾರೆ.