'ನಾನು ಮೋದಿಯ ಹನುಮಂತ, ಬೇಕಿದ್ದರೆ ಎದೆ ಸೀಳಿ ತೋರಿಸುತ್ತೇನೆ'
ಪಟ್ನಾ, ಅಕ್ಟೋಬರ್ 16: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಅಭಿಮಾನ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿರುವ ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್, ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಪ್ರಚಾರಕ್ಕಾಗಿ ನರೇಂದ್ರ ಮೋದಿ ಅವರ ಫೋಟೊವನ್ನು ತಾವು ಬಳಸಬೇಕಾದ ಅಗತ್ಯವಿಲ್ಲ. ಏಕೆಂದರೆ ಮೋದಿ ತಮ್ಮ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಹೇಳಿದ್ದಾರೆ.
'ಪ್ರಚಾರಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊವನ್ನು ಬಳಸುವ ಅಗತ್ಯವಿಲ್ಲ. ಅವರು ನನ್ನ ಹೃದಯದಲ್ಲಿ ನೆಲೆಸಿದ್ದಾರೆ. ನಾನು ಅವರ ಹನುಮಾನ್. ಅಗತ್ಯಬಿದ್ದರೆ ನಾನು ನನ್ನ ಎದೆಯನ್ನು ಬಗಿದು ಅದನ್ನು ತೋರಿಸುತ್ತೇನೆ' ಎಂದು ಚಿರಾಗ್ ಭಾವಾವೇಶದಿಂದ ಹೇಳಿದ್ದಾರೆ.
ನನ್ನ ಅಪ್ಪನನ್ನು ನಿತೀಶ್ ಕುಮಾರ್ ಅವಮಾನಿಸಿದ್ದರು: ಚಿರಾಗ್ ಪಾಸ್ವಾನ್ ಕಿಡಿ
ಎನ್ಡಿಎ ಮೈತ್ರಿಕೂಟದಿಂದ ಹೊರಬಂದ ಬಳಿಕವೂ ಎಲ್ಜೆಪಿ, ಚುನಾವಣಾ ಪ್ರಚಾರಕ್ಕಾಗಿ ನರೇಂದ್ರ ಮೋದಿ ಅವರ ಫೋಟೊವನ್ನು ಬಳಸಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಚಿರಾಗ್ ಈ ಹೇಳಿಕೆ ನೀಡಿದ್ದಾರೆ. ಮುಂದೆ ಓದಿ.
ನಿತೀಶ್ಗೆ ಅನಿವಾರ್ಯ
ನಿತೀಶ್ ವಿರುದ್ಧದ ಚಿರಾಗ್ ಆಕ್ರೋಶ ಮುಂದುವರಿದಿದ್ದು, ಮಾಜಿ ಮಿತ್ರಪಕ್ಷಗಳ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಂಡುಬಂದಿವೆ. 'ಬಿಹಾರ ಚುನಾವಣೆಯಲ್ಲಿ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊಗಳನ್ನು ಬಳಸಿಕೊಳ್ಳುವುದು ನಿತೀಶ್ ಕುಮಾರ್ ಅವರಿಗೆ ಅಗತ್ಯವಾಗಿದೆ. ನಮ್ಮ ಆಲೋಚನೆಗಳು ಪ್ರಧಾನಿ ಜತೆ ಹೊಂದಾಣಿಕೆಯಾಗುತ್ತವೆ. ನಾವು ಹೃದಯದ ಸಂಬಂಧ ಹೊಂದಿದ್ದೇವೆ' ಎಂದು ಹೇಳಿದ್ದಾರೆ.
ನಿತೀಶ್ ಆಡಳಿತದ ಅಭಿಮಾನಿಯಲ್ಲ
ನಿತೀಶ್ ಕುಮಾರ್ ಅವರ ಶೈಲಿಯ ರಾಜಕಾರಣಕ್ಕೆ ಎಂದಿಗೂ ಎಲ್ಜೆಪಿ ಅಭಿಮಾನಿಯಾಗಿರಲಿಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ ಮಹಾದಲಿತ ಎಂಬ ಉಪ ಪಂಗಡ ಮಾಡುವ ಮೂಲಕ ದಲಿತರಿಗೆ ಹಾನಿ ಮಾಡಿದ್ದಾರೆ' ಎಂದು ಅವರು ಗುರುವಾರ ಆರೋಪಿಸಿದ್ದರು.
ಬಿಹಾರ ಚುನಾವಣೆಯಲ್ಲಿ ಎನ್ಡಿಎ ದಿಗ್ವಿಜಯ: ಸಿ ವೋಟರ್ ಸಮೀಕ್ಷೆ
ಅಮಿತ್ ಶಾ ಅವರಿಂದ ರಾಜ್ಯಸಭೆಗೆ ಆಯ್ಕೆ
ನಾವು ಕೇವಲ ಎರಡು ಶಾಸಕ ಸ್ಥಾನಗಳನ್ನು ಪಡೆದಿರುವುದರಿಂದ ಜೆಡಿಯು ಬೆಂಬಲ ಇಲ್ಲದೆ ರಾಜ್ಯಸಭೆಗೆ ಆಯ್ಕೆಯಾಗುವುದಿಲ್ಲ ಎಂದು ನಿತೀಶ್ ಕುಮಾರ್ ಇತ್ತೀಚೆಗೆ ನನ್ನ ತಂದೆಯನ್ನು ಅಣಕಿಸಿದ್ದರು. ಬಿಜೆಪಿಯ ಹಿಂದಿನ ಅಧ್ಯಕ್ಷ ಅಮಿತ್ ಶಾ ಅವರೇ ನನ್ನ ತಂದೆಗೆ ರಾಜ್ಯಸಭೆಯ ಸೀಟು ನೀಡುವುದಾಗಿ ಭರವಸೆ ನೀಡಿದ್ದರು ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು' ಎಂದು ಚಿರಾಗ್ ಕಿಡಿಕಾರಿದ್ದರು.
ಭ್ರಷ್ಟಾಚಾರ, ಅಪರಾಧಕ್ಕೆ ಕುಮ್ಮಕ್ಕು
'ಭ್ರಷ್ಟಾಚಾರ, ಅಪರಾಧ ಮತ್ತು ಕೋಮು ದ್ವೇಷದ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಪ್ರದರ್ಶಿಸುವ ಪ್ರಯತ್ನವನ್ನೇ ನಿತೀಶ್ ಕುಮಾರ್ ನಡೆಸಿಲ್ಲ. ರಾಜ್ಯದಲ್ಲಿ ಪ್ರತಿ ಸರ್ಕಾರಿ ಯೋಜನೆ ಜಾರಿಗೆ ಬರುವಾಗಲೂ ಅವ್ಯವಹಾರ ನಡೆದಿದೆ ಎನ್ನುವ ಸತ್ಯ ಕಣ್ಣಿಗೆ ರಾಚುತ್ತಿದೆ. ಬಕ್ಸರ್ ಜಿಲ್ಲೆಯಲ್ಲಿ ಮಹಿಳೆಯನ್ನು ಅತ್ಯಾಚಾರ ಮಾಡಿ ಸಜೀವ ಸುಟ್ಟಂತಹ ಭಯಾನಕ ಘಟನೆಗಳು ಇತ್ತೀಚೆಗೆ ನಡೆದಿವೆ' ಎಂದು ನಿತೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.