ನಿತೀಶ್, ಚಿರಾಗ್, ತೇಜಸ್ವಿ ಅಲ್ಲದೆ ಮತ್ತೊಬ್ಬ ಸಿಎಂ ಅಭ್ಯರ್ಥಿ ಸಜ್ಜು
ಪಾಟ್ನಾ, ಅ. 9: ಕೌನ್ ಬನೇಗಾ ಸಿಎಂ? ಎಂಬ ಪ್ರಶ್ನೆ ಬಿಹಾರದಲ್ಲಿ ಸದ್ಯಕ್ಕೆ ಟ್ರೆಂಡ್ ನಲ್ಲಿದೆ. ಎಲ್ಲಾ ಪ್ರಮುಖ ಪಕ್ಷದವರು ತಮ್ಮ ಪಕ್ಷದ ಸಿಎಂ ಅಭ್ಯರ್ಥಿಯನ್ನು ಹೆಸರಿಸಿದ್ದಾರೆ. ನಿತೀಶ್ ಕುಮಾರ್, ತೇಜಸ್ವಿ ಯಾದವ್, ಚಿರಾಗ್ ಪಾಸ್ವಾನ್ ಸಾಲಿಗೆ ಈಗ ಹೊಸ ಹೆಸರು ಸೇರ್ಪಡೆಗೊಂಡಿದೆ. ಹೊಸದಾಗಿ ಸೃಷ್ಟಿಯಾಗಿರುವ ರಾಜಕೀಯ ಒಕ್ಕೂಟದ ಸಿಎಂ ಆಗಿ ಉಪೇಂದ್ರ ಕುಶ್ವಾಹ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಲೋಕ ಸಮರ್ಥ ಪಾರ್ಟಿ, ಹೈದರಾಬಾದಿನ ಸಂಸದ ಎಐಎಂಐಎಂ ಪಕ್ಷದ ಅಸಾಸುದ್ದೀನ್ ಒವೈಸಿ ಅವರು 6 ಪಕ್ಷಗಳ ಹೊಸ ಒಕ್ಕೂಟವನ್ನು ಘೋಷಿಸಿದ್ದಾರೆ. Grand Democratic Secular Front ಎಂದು ಹೆಸರಿಡಲಾಗಿದ್ದು, ಈ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಉಪೇಂದ್ರ ಕುಶ್ವಾಹ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವರಾಗಿದ್ದ ಕುಶ್ವಾಹ
ಆರ್ ಎಲ್ ಎಸ್ ಪಿ, ಎಐಎಂಐಎಂ, ಮಯಾವತಿ ಅವರ ಬಿ ಎಸ್ ಪಿ, ಸುಹಲ್ ದೇವ್ ಭಾರತೀಯ ಸಮಾಜ್ ಪಾರ್ಟಿ, ಸಾಮಾಜಿಕ್ ಜನತಾ ದಳ(ಪ್ರಜಾಪ್ರಭುತ್ವ) ಹಾಗೂ ಜನತಾಂತ್ರಿಕ್ ಪಾರ್ಟಿ(ಸಮಾಜವಾದಿ) ಪಕ್ಷಗಳು ಸೇರಿ ಹೊಸ ರಾಜಕೀಯ ಕೂಟವನ್ನು ರಚಿಸಿವೆ. ವಿಶೇಷವೆಂದರೆ ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲೀಮೀನ್(ಎಐಎಂಐಎಂ) ಮಾತ್ರ ಹಾಲಿ ಶಾಸಕರೊಬ್ಬರನ್ನು ಹೊಂದಿದೆ. ಮಿಕ್ಕ ಪಕ್ಷಗಳು ಕಳೆದ ಬಾರಿ ಖಾತೆ ತೆರೆದಿರಲಿಲ್ಲ.
ಎನ್ಡಿಎ ಹಾಗೂ ಮಹಾಘಟಬಂಧನ್ ಮೈತ್ರಿಕೂಟದಿಂದ ಜನತೆ ಬಳಲಿದ್ದು ಸಾಕು, ಬಿಹಾರದ ಅಭಿವೃದ್ಧಿಗಾಗಿ ಹೊಸ ಒಕ್ಕೂಟವನ್ನು ಬೆಂಬಲಿಸಿ ಎಂದು ಅಸಾದುದ್ದೀನ್ ಒವೈಸಿ ಕರೆ ನೀಡಿದ್ದಾರೆ. ಈಗಾಗಲೇ ಈ ಒಕ್ಕೂಟದಲ್ಲಿರುವ ಪಕ್ಷಗಳ ಅಭ್ಯರ್ಥಿಗಳು ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ಬಿಹಾರದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಎನ್ ಡಿಎ ಯಿಂದ ಹೊರಬರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಭಾರೀ ಆಘಾತ ನೀಡಿದವರು ಉಪೇಂದ್ರ ಕುಶ್ವಾಹ.