ಬಿಜೆಪಿ ಜೊತೆ ಮುನಿಸು: ಮಂಗಳವಾರ ಪಕ್ಷದ ಸಭೆ ಕರೆದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಪಾಟ್ನಾ, ಆಗಸ್ಟ್ 8: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ಎಲ್ಲಾ ಜನತಾ ದಳ (ಸಂಯುಕ್ತ) ಶಾಸಕರು ಮತ್ತು ಸಂಸದರ ಸಭೆಯನ್ನು ಕರೆದಿದ್ದು, ಬಿಜೆಪಿಯೊಂದಿಗೆ ನಡೆಯುತ್ತಿರುವ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಕಾಣಿಸಬಹುದು ಎಂದು ಹೇಳಲಾಗುತ್ತಿದೆ. ರಾಜಕೀಯ ಡ್ರಾಮಾ ಈಗ ಬಿಹಾರದಲ್ಲಿ ಶುರುವಾಗಬಹುದೇ ಎನ್ನುವ ಪ್ರಶ್ನೆ ಎದುರಾಗಿದೆ.
ಬಿಹಾರದಲ್ಲಿ ಜನತಾ ದಳ (ಸಂಯುಕ್ತ) ಅಥವಾ ಜೆಡಿ(ಯು) ಮೈತ್ರಿಕೂಟದ ಪಾಲುದಾರರಾಗಿರುವ ಬಿಜೆಪಿ ಮೇಲೆ ಜೆಡಿಯು ಮುಖಂಡ ನಿತೀಶ್ ಕುಮಾರ್ ಅಸಮಾಧಾನಗೊಳ್ಳಲು ಹಲವು ಕಾರಣಗಳಿವೆ. ಅದರಲ್ಲಿ, ಬಿಜೆಪಿ ಸರ್ಕಾರ ಮಿತ್ರ ಪಕ್ಷಗಳಿಗೆ ಸಚಿವ ಸ್ಥಾನದಲ್ಲಿ ಪ್ರಾತಿನಿಧ್ಯ ನೀಡುತ್ತಿಲ್ಲ ಎನ್ನುವುದೇ ಮುಖ್ಯ ಕಾರಣ ಎಂದು ಹೇಳಲಾಗಿದೆ.
Breaking: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ಗೆ ಕೊರೊನಾ
ನಿತೀಶ್ ಕುಮಾರ್ ಅವರ ಪಕ್ಷವು ಕಳೆದ ತಿಂಗಳು ಅವರ ಮಾಜಿ ಜೆಡಿಯು ಸಹೋದ್ಯೋಗಿ ಆರ್ಸಿಪಿ ಸಿಂಗ್ಗೆ ಮತ್ತೊಂದು ಅವಧಿಗಾಗಿ ರಾಜ್ಯಸಭಾ ಸ್ಥಾನವನ್ನು ನಿರಾಕರಿಸಿತ್ತು, ಅವರು ಕಳೆದ ವರ್ಷ ಜೆಡಿಯು ಮುಖ್ಯಸ್ಥ ನಿತಿನ್ ಕುಮಾರ್ ಅವರನ್ನು ಸಂಪರ್ಕಿಸದೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸ್ಥಾನ ಪಡೆದಿದ್ದರು. ತಮಗೆ ರಾಜ್ಯಸಭಾ ಸ್ಥಾನ ನಿರಾಕರಿಸಿದ ನಂತರ ಆರ್ಸಿಪಿ ಸಿಂಗ್ ಜೆಡಿಯುಗೆ ವಿದಾಯ ಹೇಳಿದರು.
ಜೆಡಿಯು ಮುಳುಗುವ ಹಡಗು
"ನಾನು ಕೇಂದ್ರ ಸಚಿವನಾಗುವುದನ್ನು ತಡೆಯಲು ಪಿತೂರಿ ನಡೆಯುತ್ತಿದೆ" ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಮಾಜಿ ಭಾರತೀಯ ಆಡಳಿತ ಸೇವಾ ಅಧಿಕಾರಿ ಆರ್ಸಿಪಿ ಸಿಂಗ್ ಆರೋಪಿಸಿದ್ದರು. ಜೆಡಿಯು ತೊರೆಯುವಾಗ ಅವರು "ಅಸೂಯೆಗೆ ಯಾವುದೇ ಚಿಕಿತ್ಸೆ ಇಲ್ಲ ಎಂದು ನಾನು ಹೇಳುತ್ತೇನೆ" ಎಂದು ಹೇಳಿದರು. ನಿತೀಶ್ ಕುಮಾರ್ ಇನ್ನೂ ಏಳು ಜನ್ಮ ಕಳೆದರೂ ಪ್ರಧಾನಿಯಾಗುವುದಿಲ್ಲ, ಜೆಡಿಯು ಮುಳುಗುವ ಹಡಗು ಎಂದು ಬಣ್ಣಿಸಿದರು.
ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಲು ನಿತೀಶ್ ಕುಮಾರ್ ತಮ್ಮ ಆಪ್ತರ ಮೂಲಕ ತಿರುಗೇಟು ನೀಡಿದ್ದಾರೆ. ಆರ್ಸಿಪಿ ಸಿಂಗ್ ಅಕ್ರಮ ಆಸ್ತಿ ವ್ಯವಹಾರಗಳ ಬಗ್ಗೆ ಉಲ್ಲೇಖಿಸಿದ್ದು, ತಮ್ಮ ಆದಾಯದ ಬಗ್ಗೆ ಲೆಕ್ಕ ಕೊಡುವಂತೆ ಕೇಳಿದ್ದಾರೆ.
ಬಿಜೆಪಿ, ಜೆಡಿಯು ಮೈತ್ರಿಯಲ್ಲಿ ಬಿರುಕು; ಮೋದಿಗೆ ಸ್ವಾಗತವಿಲ್ಲ!
ಕೇಂದ್ರ ಸಚಿವ ಸಂಪುಟಕ್ಕೆ ಸೇರುವುದಿಲ್ಲ
ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಆರ್ಸಿಪಿ ಸಿಂಗ್ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ, "ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಅಗತ್ಯವೇನು? ನಾವು ಕೇಂದ್ರ ಸಚಿವ ಸಂಪುಟದ ಭಾಗವಾಗುವುದಿಲ್ಲ ಎಂದು ಮುಖ್ಯಮಂತ್ರಿ 2019 ರಲ್ಲಿ ನಿರ್ಧರಿಸಿದ್ದರು" ಎಂದು ರಾಜೀವ್ ರಂಜನ್ ಸುದ್ದಿಗಾರರಿಗೆ ತಿಳಿಸಿದರು.
ಜೆಡಿಯು ಮುಂದಿನ ದಿನಗಳಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಸೇರುವುದಿಲ್ಲ ಎಂದು ಅವರು ಹೇಳಿದರು, ಬಿಜೆಪಿ ಜೊತೆ ಜೆಡಿಯು ಮುನಿಸಿನ ಬಗ್ಗೆ ಊಹಾಪೋಹ ಹೆಚ್ಚಾಗಲು ರಂಜನ್ ಸಿಂಗ್ ಹೇಳಿಕೆ ಕೂಡ ಕಾರಣವಾಗಿದೆ.
ಬಿಜೆಪಿ ಮೇಲೆ ಒತ್ತಡ ಹೇರಲು ಮುಂದಾದ ಜೆಡಿಯು
ನಿತೀಶ್ ಕುಮಾರ್ ಆಪ್ತ ರಾಜೀವ್ ರಂಜನ್ ಸೇರಿದಂತೆ ಹಲವರು ಬಿಜೆಪಿ ವಿರುದ್ಧ ಏಕಾಏಕಿ ತಿರುಗಿ ಬೀಳುವುದರ ಹಿಂದೆ ಬಿಜೆಪಿ ಮೇಲೆ ಒತ್ತಡ ಹಾಕುವ ತಂತ್ರ ಎಂದು ಹೇಳಲಾಗುತ್ತಿದೆ. ಬಿಹಾರ ವಿಧಾನಸಭಾ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರನ್ನು ಪದಚ್ಯುತಗೊಳಿಸಲು ಜೆಡಿಯು ಪ್ರಯತ್ನಿಸುತ್ತಿದೆ. ವಿಜಯ್ ಕುಮಾರ್ ಸಿನ್ಹಾ ಸ್ಪೀಕರ್ ಆಗಿ ಮುಂದುವರೆಯುವುದು ನಿತೀಶ್ ಕುಮಾರ್ ಅವರಿಗೆ ಇಷ್ಟವಿಲ್ಲ.
ಕಳೆದ ವಾರಾಂತ್ಯದಲ್ಲಿ ದೆಹಲಿಯಲ್ಲಿ ನಡೆದ ಸರ್ಕಾರಿ ಚಿಂತಕರ ಚಾವಡಿ ನೀತಿ ಆಯೋಗದ ಸಭೆಯಿಂದ, ಅನಾರೋಗ್ಯದ ಕಾರಣ ನೀಡಿ ಮುಖ್ಯಮಂತ್ರಿ ನಿತೀಶ್ ಕುಮಾರ್ ದೂರವೇ ಉಳಿದಿದ್ದರು. ಸಭೆಯಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸೇರಿದಂತೆ 23 ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಸಭೆಗೆ ಗೈರುಹಾಜರಾಗುವ ಮೂಲಕ ನಿತೀಶ್ ಕುಮಾರ್ ತಮ್ಮ ಅಸಹನೆಯನ್ನು ಪ್ರದರ್ಶಿಸಿದ್ದಾರೆ.
ಅಕ್ರಮದ ಆರೋಪ ನಿರಾಕರಿಸಿದ ಆರ್ಸಿಪಿ ಸಿಂಗ್
ಕೇಂದ್ರದಲ್ಲಿ ಸಚಿವ ಸ್ಥಾನಕ್ಕಾಗಿ ಮೋದಿ ಸರ್ಕಾರದೊಂದಿಗೆ ನೇರವಾಗಿ ಮಾತುಕತೆ ನಡೆಸಿದ ಆರೋಪವನ್ನು ಆರ್ಸಿಪಿ ಸಿಂಗ್ ನಿರಾಕರಿಸಿದ್ದರು. ಗೃಹ ಸಚಿವ ಅಮಿತ್ ಶಾ ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿತೀಶ್ ಕುಮಾರ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಆರ್ಸಿಪಿ ಸಿಂಗ್ ಸ್ವತಃ ಕೇಂದ್ರ ಸಚಿವರಾಗಬೇಕೆಂಬ ಷರತ್ತಿನ ಮೇಲೆ ಪಕ್ಷಕ್ಕೆ ಒಂದು ಸ್ಥಾನವನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ಅವರ ಆಸ್ತಿ ವ್ಯವಹಾರಗಳಲ್ಲಿ ಅಕ್ರಮಗಳಿವೆ ಎಂಬ ಜೆಡಿಯು ಆರೋಪಗಳನ್ನು ಆರ್ಸಿಪಿ ಸಿಂಗ್ ನಿರಾಕರಿಸಿದರು. "ಈ ಆಸ್ತಿಗಳು ನನ್ನ ಪತ್ನಿ ಮತ್ತು ಇತರ ಅವಲಂಬಿತರಿಗೆ ಸೇರಿದ್ದು, ಅವರು 2010 ರಿಂದ ತೆರಿಗೆ ಪಾವತಿಸುತ್ತಿದ್ದಾರೆ" ಎಂದು ಹೇಳಿದರು. ಪಕ್ಷವು ಏನನ್ನು ತನಿಖೆ ಮಾಡಬೇಕೆಂದು ನನಗೆ ತಿಳಿದಿಲ್ಲ, ನಾನು ಮುಚ್ಚಿಡುವಂತದ್ದು ಏನೂ ಇಲ್ಲ ಎಂದು ಅವರು ಹೇಳಿದರು.