ಬಿಹಾರ ರಾಜಕೀಯ ಬಿಕ್ಕಟ್ಟು: ಬಿಜೆಪಿ ಬಿಟ್ಟರೆ ನಿತೀಶ್ ಕುಮಾರ್ ಸರ್ಕಾರ ರಚನೆ ಹೇಗೆ
ನವದೆಹಲಿ, ಆಗಸ್ಟ್ 08: ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್ಡಿಎ ಮೈತ್ರಿಕೂಟದಿಂದ ಹೊರನಡೆಯುವುದಾಗಿ ಬೆದರಿಕೆ ಒಡ್ಡಿದ ಬೆನ್ನಲ್ಲೇ ಬಿಹಾರ ಸರ್ಕಾರ ಪತನದ ಹಾದಿ ಹಿಡಿದಿದೆ. ನಿತೀಶ್ ಆರ್ಜೆಡಿ, ಎಡಪಕ್ಷಗಳು ಮತ್ತು ಕಾಂಗ್ರೆಸ್ನೊಂದಿಗೆ ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಇದೆ.
ಬಿಹಾರದಲ್ಲಿ ವಿಧಾನಸಭೆಯಲ್ಲಿ ಒಟ್ಟು 243 ಸ್ಥಾನಗಳಿವೆ. ಸರ್ಕಾರ ರಚನೆಗೆ ಮ್ಯಾಜಿಕ್ ಸಂಖ್ಯೆ 122 ಆಗಿದೆ. ಪ್ರಸ್ತುತ ಆರ್ ಜೆಡಿ 75 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿದೆ ಮತ್ತು ಬಿಜೆಪಿ 74 ಸ್ಥಾನ ಗೆಲ್ಲುವ ಮೂಲಕ ಎರಡನೇ ಸ್ಥಾನದಲ್ಲಿದೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ವಿಧಾನಸಭೆಯಲ್ಲಿ ಕೇವಲ 43 ಸ್ಥಾನಗಳನ್ನು ಹೊಂದಿದೆ.
ಬಿಜೆಪಿ ಜೊತೆ ಮುನಿಸು: ಮಂಗಳವಾರ ಪಕ್ಷದ ಸಭೆ ಕರೆದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
2021ರ ಚುನಾವಣೆಯಲ್ಲಿ, ಬಿಜೆಪಿಯು ಜೆಡಿಯು, ಎಚ್ಎಎಂ ಮತ್ತು ವಿಐಪಿಯೊಂದಿಗೆ ಚುನಾವಣೆಗಳನ್ನು ಎದುರಿಸಿತು. ಎಚ್ಎಎಂ ಮತ್ತು ವಿಐಪಿ ತಲಾ 4 ಸ್ಥಾನಗಳನ್ನು ಗೆದ್ದಿವೆ.
ಮತ್ತೊಂದೆಡೆ ಕಾಂಗ್ರೆಸ್ ಸಿಪಿಐಎಂಎಲ್, ಸಿಪಿಎಂ ಮತ್ತು ಸಿಪಿಐ ಜೊತೆಗೆ ಆರ್ಜೆಡಿ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಕಾಂಗ್ರೆಸ್ 19, ಸಿಪಿಐಎಂಎಲ್ 11, ಸಿಪಿಎಂ ಮತ್ತು ಸಿಪಿಐ ಕ್ರಮವಾಗಿ 3 ಮತ್ತು 2 ಸ್ಥಾನಗಳನ್ನು ಗೆದ್ದಿವೆ.
ಆರ್ಜೆಡಿ, ಕಾಂಗ್ರೆಸ್ ಜೊತೆ ಮೈತ್ರಿ
ಒಂದು ವೇಳೆ ನಿತೀಶ್ ಕುಮಾರ್ ಅವರು ಆರ್ಜೆಡಿ, ಎಡಪಂಥೀಯರು ಮತ್ತು ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚಿಸಲು ಬೇಕಾದ ಬಹುಮತ ಸಿಗುತ್ತದೆ. ಮ್ಯಾಜಿಕ್ ಸಂಖ್ಯೆ 122 ಆಗಿರುವ 243 ಸದಸ್ಯರ ವಿಧಾನಸಭೆಯಲ್ಲಿ ಈ ಮೈತ್ರಿಕೂಟದ ಸಂಖ್ಯಾಬಲ 153 ಆಗಲಿದೆ.
ಮತ್ತೊಂದೆಡೆ ಬಿಜೆಪಿ ಕೇವಲ 82 ಸ್ಥಾನಗಳನ್ನು ಹೊಂದಿದ್ದು, ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗುತ್ತದೆ. ಎಐಎಂಎಂ 5 ಸ್ಥಾನಗಳನ್ನು ಹೊಂದಿದ್ದು, ಬಿಎಸ್ಪಿ 1 ಮತ್ತು ಪಕ್ಷೇತರ ಒಂದು ಸ್ಥಾನಗಳನ್ನು ಹೊಂದಿದೆ.
ಒಳ್ಳೆಯ ಬೆಳವಣಿಗೆ ಎಂದ ಆರ್ಜೆಡಿ
ಬಿಹಾರದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಜೆಡಿಯು ನಡುವಿನ ಹಣಾಹಣಿ ಮತ್ತು ಸರ್ಕಾರ ಬದಲಾವಣೆಯ ಊಹಾಪೋಹಗಳ ನಡುವೆ, ಪ್ರತಿಪಕ್ಷ ಆರ್ಜೆಡಿ ಇದು ಆರ್ಜೆಡಿಗೆ ಮಾತ್ರವಲ್ಲದೆ ಇಡೀ ರಾಜ್ಯದ ಜನತೆಗೆ ಉತ್ತಮ ಸೂಚನೆಯಾಗಿದೆ ಎಂದು ಹೇಳಿದೆ. ಮಹಾಘಟಬಂಧನ್ ಬೆಂಬಲದೊಂದಿಗೆ ಸಿಎಂ ನಿತೀಶ್ ಕುಮಾರ್ ಹೊಸ ಸರ್ಕಾರ ರಚನೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಆರ್ಜೆಡಿ ಉಪಾಧ್ಯಕ್ಷ ಶಿವಾನಂದ್ ತಿವಾರಿ, "ಈಗ, ನಿತೀಶ್ ಕುಮಾರ್ ನಿರ್ಧಾರವನ್ನು ತೆಗೆದುಕೊಳ್ಳಬೇಕು. ನಾವು ನಿತೀಶ್ ಕುಮಾರ್ ಅವರ ನಡೆಯನ್ನು ಕಾಯಬೇಕಾಗಿದೆ. ಅವರ ನಡೆಗಳು ಬಿಹಾರ ಮತ್ತು ಬಿಹಾರಿ ಜನರ ಭವಿಷ್ಯವನ್ನು ನಿರ್ಧರಿಸಲಿವೆ" ಎಂದು ಹೇಳಿದ್ದಾರೆ.
ಮಂಗಳವಾರ ಪ್ರತ್ಯೇಕ ಸಭೆ
"ಜೆಡಿಯು, ಆರ್ಜೆಡಿ, ಕಾಂಗ್ರೆಸ್, ಎಚ್ಎಎಂ ಮತ್ತು ಎಡಪಕ್ಷಗಳು ಮಂಗಳವಾರ ಪ್ರತ್ಯೇಕವಾಗಿ ತಮ್ಮ ಸಭೆ ಕರೆದಿದ್ದು, ಮುಂದಿನ ಕ್ರಮವನ್ನು ನಿರ್ಧರಿಸಲಿದ್ದಾರೆ. ಬಿಜೆಪಿಯು ದುರಹಂಕಾರದಿಂದ ದೇಶವನ್ನು ಆಳುತ್ತಿರುವ ರೀತಿಯಿಂದ ನಿತೀಶ್ ಕುಮಾರ್ ಬೇಸತ್ತಿದ್ದಾರೆ, ಮಹಾಘಟಬಂಧನ್ ಜೊತೆ ಸೇರಿ ನಿತೀಶ್ ಕುಮಾರ್ ಸರ್ಕಾರ ರಚನೆ ಮಾಡಿದರೆ ಅದು ಬಿಜೆಪಿಗೆ ದೊಡ್ಡ ಆಘಾತವಾಗಲಿದೆ" ಎಂದು ತಿವಾರಿ ಹೇಳಿದ್ದಾರೆ.
ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕು
''ಪ್ರಸ್ತುತ ಪ್ರತಿ ಉತ್ಪನ್ನದ ಬೆಲೆ ಏರಿಕೆ, ನಿರುದ್ಯೋಗ, ಅತಿವೃಷ್ಟಿ, ಬರ, ರೈತರ ಸಮಸ್ಯೆ, ದೇಶದಲ್ಲಿ ಕೋಮುವಾದದ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಇದೆಲ್ಲ ನಡೆಯುತ್ತಿರುವುದು ಕೇವಲ ನರೇಂದ್ರ ಮೋದಿ ಸರ್ಕಾರದಿಂದ. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದರೆ ಬಿಹಾರಕ್ಕೆ ನೆಮ್ಮದಿ ಸಿಗುತ್ತದೆ, ನರೇಂದ್ರ ಮೋದಿ ಸರ್ಕಾರ ದೇಶದ ಜನತೆಗೆ ಏನನ್ನೂ ಮಾಡಿಲ್ಲ" ಎಂದು ತಿವಾರಿ ಆರೋಪಿಸಿದ್ದಾರೆ.
ವರದಿಗಳ ಪ್ರಕಾರ, ಆರ್ಜೆಡಿ ಸಹ ತಮ್ಮ ಹಿಂದಿನ ಮಿತ್ರ ಪಕ್ಷಕ್ಕೆ ಬೆಂಬಲವನ್ನು ನೀಡಿದೆ ಮತ್ತು ಜೆಡಿಯು ಸರ್ಕಾರವನ್ನು ಬೆಂಬಲಿಸುವುದು ಅವರ ಕರ್ತವ್ಯ ಎಂದು ಹೇಳಿದೆ.