ಅಗ್ನಿಪಥ್ ಯೋಜನೆ ಖಂಡಿಸಿ ಜೂನ್ 18ರಂದು ಬಿಹಾರ್ ಬಂದ್ಗೆ ಕರೆ
ಪಾಟ್ನಾ, ಜೂನ್ 17: ಸಶಸ್ತ್ರ ಪಡೆಗಳಿಗೆ ಕೇಂದ್ರವು ಹೊಸದಾಗಿ ಪರಿಚಯಿಸಿದ 'ಅಗ್ನಿಪಥ' ನೇಮಕಾತಿ ಯೋಜನೆಯನ್ನು ವಿರೋಧಿಸಿ ಬಿಹಾರದ ವಿದ್ಯಾರ್ಥಿ ಸಂಘಟನೆಗಳು ಜೂನ್ 18 ರಂದು ರಾಜ್ಯವ್ಯಾಪಿ ಬಂದ್ಗೆ ಕರೆ ನೀಡಿವೆ. ವಿದ್ಯಾರ್ಥಿ ಸಂಘಟನೆಗಳ ಬಂದ್ಗೆ ವಿರೋಧ ಪಕ್ಷವಾಗಿರುವ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್ಜೆಡಿ ಬೆಂಬಲ ನೀಡಿದೆ.
ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ನೇತೃತ್ವದ ಸಂಘಟನೆಗಳು ಅಗ್ನಿಪಥ್ ಯೋಜನೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಕೋರಿವೆ. ಕಾರಣ ಈ ಯೋಜನೆ ಅಡಿಯಲ್ಲಿ ಸಶಸ್ತ್ರ ಪಡೆಗಳಲ್ಲಿ ನಾಲ್ಕು ವರ್ಷಗಳ ಅವಧಿಗೆ ನೇಮಕಾತಿ ಪ್ರಸ್ತಾಪಿಸಲಾಗಿದೆ. ತದನಂತರ ಯಾವುದೇ ಪಿಂಚಣಿ ಪ್ರಯೋಜನಗಳಿಲ್ಲದೆ ಶೇ.75ರಷ್ಟು ಸಿಬ್ಬಂದಿಗೆ ಕಡ್ಡಾಯ ನಿವೃತ್ತಿ ನೀಡಲಾಗುತ್ತದೆ.
ಸಿಕಂದರಾಬಾದ್ನಲ್ಲಿ ಬೆಂಕಿ ಹಚ್ಚಿದ ರೈಲಿನಿಂದ ಬಚಾವ್ ಆಗಿದ್ದು ಹೇಗೆ 40 ಪ್ರಯಾಣಿಕರು!?
ಬಿಹಾರ ಬಂದ್ ಕರೆಗೆ ಆರ್ಜೆಡಿ ಬೆಂಬಲ ಘೋಷಿಸಿದ ರಾಜ್ಯ ಘಟಕದ ಅಧ್ಯಕ್ಷ ಜಗದಾನಂದ್ ಸಿಂಗ್, ಅಲ್ಪಾವಧಿಯ ನೇಮಕಾತಿ ಯೋಜನೆಯು ರಾಷ್ಟ್ರದ ಯುವಜನರ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿದೆ ಎಂದು ಹೇಳಿದ್ದಾರೆ.
ಅಲ್ಪಾವಧಿ ನೇಮಕಾತಿ ಯೋಜನೆಗೆ ವಿರೋಧ:
'ಅಗ್ನಿಪಥ' ನೇಮಕಾತಿ ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವವರನ್ನು ನಾವು ಬೆಂಬಲಿಸುತ್ತೇವೆ. ಸಶಸ್ತ್ರ ಪಡೆಗಳಲ್ಲಿ ಹೊಸ ಅಲ್ಪಾವಧಿ ನೇಮಕಾತಿ ಯೋಜನೆಯಲ್ಲಿ ದೇಶದ ಯುವಕರ ಹಿತಾಸಕ್ತಿಯಲ್ಲ," ಎಂದು ಹೇಳಿದರು.
ರಾಜನಾಥ್ ಸಿಂಗ್ ರಿಗೆ ಪಾಸ್ವಾನ್ ಪತ್ರ:
'ಅಗ್ನಿಪಥ್ ಯೋಜನೆಯು ದೇಶದಲ್ಲಿ ನಿರುದ್ಯೋಗವನ್ನು ಹೆಚ್ಚಿಸುತ್ತದೆ, ಇದು ಯುವಕರಲ್ಲಿ ಅಸಮಾಧಾನವನ್ನು ಹರಡುತ್ತದೆ," ಎಂದು ಪಾಸ್ವಾನ್ ಹೇಳಿದರು. ಈ ಸಂಬಂಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಿಗೆ ಪತ್ರ ಬರೆದು ಇದೇ ಕಳವಳವನ್ನು ವ್ಯಕ್ತಪಡಿಸಿದರು.
ಅಗ್ನಿಪಥ್ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕಾಗಿದ್ದು ಏನು?:
ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ದೇಶದ ಮೂರು ಸೇನೆಗಳಿಗೆ ಯೋಧರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ. 17.5 ರಿಂದ 23 ವಯೋಮಾನ ಯುವಕರನ್ನು ಒಪ್ಪಂದದ ಮೇರೆಗೆ ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ 6 ತಿಂಗಳು ತರಬೇತಿಯೂ ಸೇರಿರುತ್ತದೆ. ನಾಲ್ಕು ವರ್ಷದ ಸೇವಾವಧಿಯಲ್ಲಿ ಮಾಸಿಕ 30 ರಿಂದ 40 ಸಾವಿರ ರೂಪಾಯಿ ವೇತನದ ಜೊತೆಗೆ ವೈದ್ಯಕೀಯ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ ನಾಲ್ಕು ವರ್ಷಗಳ ನಂತರ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಶೇ.75ರಷ್ಟು ಯೋಧರನ್ನು ಸೇನೆಯಿಂದ ವಿಮುಕ್ತಿಗೊಳಿಸಲಾಗುವುದು. ತದನಂತರದಲ್ಲಿ ಈ ಯೋಧರಿಗೆ ಯಾವುದೇ ರೀತಿ ಪಿಂಚಣಿ ಸೌಲಭ್ಯವನ್ನು ನೀಡಲಾಗುವುದಿಲ್ಲ.
ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸುಮಾರು 10 ಲಕ್ಷ ಯುವಕರಿಗೆ ಉದ್ಯೋಗವನ್ನು ಕಲ್ಪಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.