ಕೊರೊನಾಘಾತ ನಡುವೆ ಸಿಡಿಲಬ್ಬರಕ್ಕೆ ಬೆಚ್ಚಿದ ಬಿಹಾರ!
ಪಾಟ್ನಾ, ಜುಲೈ 3: ಕೊರೊನಾವೈರಸ್ ಸೋಂಕಿನ ಆಘಾತದ ನಡುವೆ ಸಿಡಿಲಿನ ಅಬ್ಬರಕ್ಕೆ ಬಿಹಾರ ಬೆಚ್ಚಿದೆ. ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಗುರುವಾರದಂದು ಮೃತಪಟ್ಟವರ ಸಂಖ್ಯೆ 26, ಕಳೆದ ಒಂದು ವಾರದಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೂ ಅಧಿಕ. ಈ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಬಿಹಾರದಲ್ಲಿ ಭಾರಿ ಮಳೆ, ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ.
ಬಿಹಾರದ ಕನಿಷ್ಠ 8 ಜಿಲ್ಲೆಗಳಲ್ಲಿ ಭಾರಿ ಮಳೆ, ಗಾಳಿ, ಸಿಡಿಲು ಹೊಡೆತ ಕಂಡು ಬಂದಿದೆ. ಪಾಟ್ನಾ, ಸಮಷ್ಟಿಪುರ್, ಪೂರ್ವ ಹಾಗೂ ಪಶ್ಚಿಮ ಚಾಂಪರಣ್, ಕತಿಹಾರ್, ಮಾಧೇಪುರ್, ಪೂರ್ನಿಯಾಗಳಲ್ಲಿ ಮೃತರ ಸಂಖ್ಯೆ ಹೆಚ್ಚಿದೆ. ಜೂನ್ 30 ರಂದು 11 ಮಂದಿ ಮೃತಪಟ್ಟಿದ್ದು ಸೇರಿ 23 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೂ ಅಧಿಕವಾಗಿದೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ 4 ಲಕ್ಷ ರು ಪರಿಹಾರ ಧನವನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ.
ಗಾಯದ ಮೇಲೆ ಬರೆ, ಸಿಡಿಲಿನ ಆಘಾತದ ನಂತರ ಮಳೆ ಭೀತಿ
ಕಳೆದ ತಿಂಗಳು ಸಿಡಿಲ ಹೊಡೆತಕ್ಕೆ ಸಿಲುಕಿ ದರ್ಭಾಂಗ, ಅರಾರಿಯಾ, ಕಿಶಾನ್ ಗಂಜ್, ಸೀತಾಮರ್ಹಿ, ಗೋಪಾಲ್ ಗಂಜ್, ಸುಪಾಲ್ ಪ್ರದೇಶ ತತ್ತರಿಸಿತ್ತು. ನಂತರ ಗುಡುಗು, ಸಿಡಿಲು, ಭಾರಿ ಗಾಳಿ ಮಳೆ ಆವರಿಸಿಕೊಂಡಿತ್ತು.
ಹವಾಮಾನ ಇಲಾಖೆಯ ದಾಮಿನಿ, ಇಂದರ್ ವಜ್ರ್ ಮುಂತಾದ ಮೊಬೈಲ್ ಆಪ್ ಬಳಸಿ ಸಿಡಿಲು, ಮಳೆ ಬಗ್ಗೆ ಮಾಹಿತಿ ಪಡೆಯಲು ಇಲಾಖೆ ಸೂಚಿಸಿದೆ. ಕಳೆದ ವರ್ಷ ಬಿಹಾರದಲಿ ಸಿಡಿಲಿನ ಆಘಾತಕ್ಕೆ 39 ಮಂದಿ ಬಲಿಯಾಗಿದ್ದರು.