ಮೊಬೈಲ್ ಬಳಸುವ ಮಕ್ಕಳ ಬಗ್ಗೆ ಎಚ್ಚರ: 5 ಲಕ್ಷ ರೂ. ಹಣಕ್ಕಾಗಿ ಅಪಹರಣದ ನಾಟಕವಾಡಿದ ಬಾಲಕ
ಪಟ್ನಾ, ಆಗಸ್ಟ್ 18: ಮೊಬೈಲ್ ಫೋನ್ಗೆ ಅಡಿಕ್ಟ್ ಆಗಿರುವ ಮಕ್ಕಳು ಎಂತೆಂತಹ ದುಷ್ಕೃತ್ಯಗಳಿಗೂ ಮುಂದಾಗುವ ಅಪಾಯವಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಆನ್ಲೈನ್ ಗೇಮಿಂಗ್ನ ವ್ಯಸನಕ್ಕೆ ಅಂಟಿಕೊಂಡ ಬಾಲಕನೊಬ್ಬ ಹಣಕ್ಕಾಗಿ ತನ್ನನ್ನು ಅಪಹರಿಸಿದ ನಾಟಕವಾಡಿದ್ದಾನೆ. ಮೊಬೈಲ್ ಚಟ ಮಕ್ಕಳಲ್ಲಿ ತಮಗೆ ಅರಿವಿಲ್ಲದಂತೆಯೇ ಅಪರಾಧಿ ಕೃತ್ಯಗಳನ್ನು ಎಸಗಲು ಪ್ರೇರೇಪಣೆ ನೀಡುತ್ತದೆ ಎಂಬ ಆರೋಪ ಈ ಆಘಾತಕಾರಿ ಘಟನೆಯಿಂದ ಸಾಬೀತಾಗಿದೆ.
ಬಿಹಾರದ ರಾಜಧಾನಿ ಪಟ್ನಾದಲ್ಲಿ ಈ ಘಟನೆ ನಡೆದಿದೆ. ಆನ್ಲೈನ್ ಆಟಕ್ಕೆ ದಾಸನಾಗಿರುವ 14 ವರ್ಷದ ಹುಡುಗ, ತನ್ನದೇ ಅಪಹರಣದ ನಾಟಕವಾಡಿದ್ದಾನೆ. ತನ್ನನ್ನು ಬಿಡುಗಡೆ ಮಾಡಲು ಐದು ಲಕ್ಷ ರೂ ಮೊತ್ತದ ಹಣ ನೀಡುವಂತೆ ತನ್ನ ಅಮ್ಮನ ಫೋನ್ಗೆ ಮೆಸೇಜ್ ಕಳುಹಿಸಿದ್ದಾನೆ. ಆದರೆ ಆತನ ಈ ಅಪಹರಣದ ನಾಟಕ ವಿಫಲವಾಗಿದೆ. ಆತನ ಮೊಬೈಲ್ ಜಾಡು ಹಿಡಿದ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡದ 'ಆಪರೇಷನ್ ಅಲಮೇಲಮ್ಮ' ಸಿನಿಮಾದ ಕಥೆಯನ್ನು ನೆನಪಿಸುವಂತಿದೆ ಈ ಘಟನೆ. ಈ ಮುಂದೆ ಓದಿ.
1 ಕೋಟಿಗಾಗಿ 6ನೇ ತರಗತಿ ಬಾಲಕನನ್ನು ಅಪಹರಿಸಿ ಹತ್ಯೆಗೈದ ದುಷ್ಕರ್ಮಿಗಳು
ಸ್ನೇಹಿತನ ಭೇಟಿಯ ನೆಪ
ಮಗನ ಅಪಹರಣದ ಕುರಿತು ಬಂದ ಮೆಸೇಜ್ ಕಂಡ ವಿಧವೆ ತಾಯಿ ಗಾಬರಿಯಿಂದ ಪತ್ರಾ ನಗರ ಪೊಲೀಸ್ ಠಾಣೆಗೆ ತೆರಳಿ ಅಪಹರಣದ ದೂರು ನೀಡಿದ್ದಾರೆ. ಹತ್ತನೇ ತರಗತಿ ಓದುತ್ತಿರುವ ಮಗ ಆಗಸ್ಟ್ 10ರಂದು ಸ್ನೇಹಿತನೊಬ್ಬನನ್ನು ಭೇಟಿ ಮಾಡುವುದಾಗಿ ಮನೆಯಿಂದ ಹೊರಗೆ ಹೊರಟಿದ್ದ. ಹಾಗೆ ಹೋಗುವಾಗ ತನ್ನೊಂದಿಗೆ ಮೊಬೈಲ್ ಫೋನ್ ಮತ್ತು 2,000 ರೂ ಕೊಂಡೊಯ್ದಿದ್ದ ಎಂದು ತಾಯಿ ತಿಳಿಸಿದ್ದಾರೆ.
ಎರಡು ದಿನಗಳ ಬಳಿಕ ಪತ್ತೆ
ಆತ ಮನೆಯಿಂದ ಹೋದ ಕೆಲವು ಸಮಯದ ಬಳಿಕ ತಾಯಿಯ ಮೊಬೈಲ್ಗೆ ಹಣ ನೀಡುವಂತೆ ಬೇಡಿಕೆ ಇರಿಸಿ ಸಂದೇಶ ಬಂದಿದೆ. ಆಕೆ ದೂರು ನೀಡುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು, ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಎರಡು ದಿನಗಳ ಬಳಿಕ ಬುಧವಾರ ರಾತ್ರಿ ಪೂರ್ನಿಯಾದ ಬಸ್ ನಿಲ್ದಾಣವೊಂದರಲ್ಲಿ ಬಾಲಕ ಪತ್ತೆಯಾಗಿದ್ದಾನೆ.
ಬೈಕ್ ನಲ್ಲಿ ಬಂದ ಅಪಹರಣಕಾರರಿಂದ ಮಗುವನ್ನು ರಕ್ಷಿಸಿದ ತಾಯಿ
ಕ್ರಿಕೆಟ್ ತರಬೇತಿ ಪಡೆಯಲು ಯೋಜನೆ
ತಾಯಿ 3.5 ಲಕ್ಷ ರೂ ಹಣವನ್ನು ಸಾಲವಾಗಿ ಪಡೆದುಕೊಂಡಿರುವುದು ಬಾಲಕನಿಗೆ ಗೊತ್ತಾಗಿತ್ತು. ಆಕೆಯಿಂದ ಈ ಹಣವನ್ನು ಪಡೆದುಕೊಳ್ಳಲು ಆತ ತನ್ನ ಅಪಹರಣದ ಸಂಚನ್ನು ತಾನೇ ರೂಪಿಸಿದ್ದ. ಹೀಗೆ ಅಮ್ಮನಿಂದ ಪಡೆದ ಹಣವನ್ನು ಬಳಸಿ ದೆಹಲಿ ಅಥವಾ ಮುಂಬೈನ ಕ್ರಿಕೆಟ್ ಅಕಾಡೆಮಿಯಲ್ಲಿ ದಾಖಲಾತಿ ಪಡೆದುಕೊಳ್ಳಲು ಯೋಚಿಸಿದ್ದ. ಜತೆಗೆ ವಿಡಿಯೋ ಗೇಮ್ಗಳನ್ನು ಆಡಲು ಇನ್ನಷ್ಟು ದುಬಾರಿ ಸ್ಮಾರ್ಟ್ ಫೋನ್ ಖರೀದಿಸಲು ಕೂಡ ಬಯಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎಚ್ಚರಿಕೆ ನೀಡಿದ ಪೊಲೀಸರು
ತಾಯಿ ಸೇರಿದಂತೆ ಪೊಲೀಸರನ್ನೂ ಕಂಗಾಲಾಗಿಸಿದ್ದ ಬಾಲಕನಿಗೆ ಎಚ್ಚರಿಕೆ ನೀಡಿ ಆತನ ತಾಯಿಯ ವಶಕ್ಕೆ ಒಪ್ಪಿಸಲಾಗಿದೆ. ಮಗನನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವುದಾಗಿ ಆಕೆ ಲಿಖಿತ ರೂಪದಲ್ಲಿ ಭರವಸೆ ನೀಡಿದ್ದಾರೆ. ಹಿರಿಯ ಅಧಿಕಾರಿಗಳು ಸೂಚನೆ ನೀಡಿದರೆ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಎಸ್ಎಚ್ಒ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.