ಕಾಶ್ಮೀರ ವಿವಾದ: ಮೋದಿ ಖಡಕ್ ಮಾತಿಗೆ ಡೊನಾಲ್ಡ್ ಟ್ರಂಪ್ ಥಂಡಾ!
Recommended Video
ಪ್ಯಾರಿಸ್, ಆಗಸ್ಟ್ 27: ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರದೇಶ ಮಾಡುವ ಮೂಲಕ ಭಾರತ ಮತ್ತು ಪಾಕಿಸ್ತಾನಗಳ ಮೇಲೆ ಹಿಡಿತ ಪಡೆದುಕೊಳ್ಳುವ ಅಮೆರಿಕದ ಹುನ್ನಾರಕ್ಕೆ ಹಿನ್ನಡೆಯಾಗಿದೆ. ಕಾಶ್ಮೀರದ ವಿವಾದದಲ್ಲಿ ಉಭಯ ದೇಶಗಳು ಬಯಸಿದರೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿದ್ದ ಡೊನಾಲ್ಡ್ ಟ್ರಂಪ್, ಈಗ ಹಿಂದೆ ಸರಿದಿದ್ದಾರೆ. ಅದಕ್ಕೆ ಕಾರಣವಾಗಿದ್ದು, 'ಕಾಶ್ಮೀರದ ತಂಟೆ ನಿಮಗೆ ಬೇಡ, ಅದನ್ನು ನಾವೇ ನೋಡಿಕೊಳ್ಳುತ್ತೇವೆ' ಎಂಬ ಪ್ರಧಾನಿ ಮೋದಿ ಅವರ ಖಡಕ್ ಹೇಳಿಕೆ.
ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿವಾದ. ಇದು ಅಂತಾರಾಷ್ಟ್ರೀಯ ಸಮಸ್ಯೆಯಲ್ಲ. ಇದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಮೋದಿ ಅವರ ಮಾತಿಗೆ ಡೊನಾಲ್ಡ್ ಟ್ರಂಪ್ ತಲೆಬಾಗಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಮೂಗುತೂರಿಸುವ ಮೂಲಕ ಏಷ್ಯಾದಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಹವಣಿಸಿದ್ದ ಅಮೆರಿಕಕ್ಕೆ ತೀವ್ರ ಹಿನ್ನಡೆಯಾಗಿದೆ. ಇದು ದ್ವಿಪಕ್ಷೀಯ ಸಮಸ್ಯೆ. ಇದರಲ್ಲಿ ನಮಗೆ ಕೆಲಸವಿಲ್ಲ ಎಂದು ಸ್ವತಃ ಒಪ್ಪಿಕೊಂಡಿರುವ ಡೊನಾಲ್ಡ್ ಟ್ರಂಪ್, ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.
ಭಾರತ-ಪಾಕ್ ವಿಷಯ ನಾವೇ ಬಗೆಹರಿಸಿಕೊಳ್ಳುತ್ತೇವೆ: ಮೋದಿ
ಜಿ7 ಶೃಂಗಸಭೆಯ ಸಲುವಾಗಿ ಪ್ಯಾರಿಸ್ಗೆ ತೆರಳಿರುವ ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಅವರು ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು, ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ತೀಕ್ಷ್ಣವಾಗಿ ಹೇಳಿದ್ದರು. 'ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರವು ತಮ್ಮ ನಿಯಂತ್ರಣದಲ್ಲಿ ಇದೆ ಎಂದು ಬಲವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನಗಳು ಈ ವಿವಾದವನ್ನು ತಾವೇ ಪರಿಹರಿಸಿಕೊಳ್ಳಲು ಸಮರ್ಥವಾಗಿವೆ' ಎಂದು ಟ್ರಂಪ್ ತಮ್ಮ ಹಸ್ತಕ್ಷೇಪದಿಂದ ಹಿಂದಕ್ಕೆ ಸರಿದಿದ್ದಾರೆ.
ತಮ್ಮ ನಿಯಂತ್ರಣದಲ್ಲಿದೆ ಎಂದು ಮೋದಿ ಹೇಳಿಕೆ
'ನಾವು ಕಾಶ್ಮೀರದ ಕುರಿತು ಕಳೆದ ರಾತ್ರಿ ಮಾತನಾಡಿದ್ದೇವೆ. ಪರಿಸ್ಥಿತಿಯನ್ನು ತಮ್ಮ ನಿಯಂತ್ರಣದಲ್ಲಿ ಇರಿಸಿಕೊಂಡಿರುವುದಾಗಿ ಪ್ರಧಾನಿ ಮೋದಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅವರು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಾರೆ. ತುಂಬಾ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಲು ಅವರಿಗೆ ಸಾಧ್ಯವಿದೆ ಎಂದು ನನಗೆ ಖಚಿತತೆ ಇದೆ' ಎಂಬುದಾಗಿ ಟ್ರಂಪ್ ಹೇಳಿದರು.
ಅವರೇ ಸರಿಪಡಿಸಿಕೊಳ್ಳುತ್ತಾರೆ
ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ತಮ್ಮ ಪ್ರಸ್ತಾವದಿಂದ ಹಿಂದೆ ಸರಿದಿದ್ದೀರಾ ಎಂಬ ಪ್ರಶ್ನೆಗೆ ಅವರು, 'ಅವರು ತಾವೇ ಅದನ್ನು ನಿರ್ವಹಿಸುತ್ತಾರೆ ಎಂದು ನನಗೆ ಅನಿಸಿದೆ. ಅದನ್ನು ಅವರು ಸುದೀರ್ಘ ಸಮಯದಿಂದ ನಡೆಸಿಕೊಂಡು ಬಂದಿದ್ದಾರೆ' ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.
ಫ್ರಾನ್ಸ್ ನಲ್ಲಿ ಕಾಶ್ಮೀರದ ಬಗ್ಗೆ ಕೇಳಿದ ಟ್ರಂಪ್ ಗೆ ಮೋದಿ ಕೊಟ್ಟ ಉತ್ತರ...
ಮೂರನೇ ದೇಶಕ್ಕೆ ತೊಂದರೆ ಕೊಡೊಲ್ಲ
'ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಎಲ್ಲ ವಿವಾದಗಳೂ ದ್ವಿಪಕ್ಷೀಯವಾಗಿವೆ. ಅದರೊಂದಿಗೆ ಯಾವುದೇ ಮೂರನೇ ದೇಶಕ್ಕೆ ತೊಂದರೆ ಕೊಡಲು ಭಾರತ ಬಯಸುವುದಿಲ್ಲ. 1947ಕ್ಕೂ ಮೊದಲು ಭಾರತ ಮತ್ತು ಪಾಕಿಸ್ತಾನ ಒಂದೇ ದೇಶವಾಗಿತ್ತು. ಈಗಲೂ ನಾವು ಒಟ್ಟಿಗೆ ಕೆಲಸ ಮಾಡಿಬಲ್ಲೆವು ಮತ್ತು ಚರ್ಚೆಯ ಮೂಲಕ ವಿಚಾರಗಳನ್ನು ಪರಿಹರಿಸಿಕೊಳ್ಳಬಲ್ಲೆವು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ಗೆ ಮನವರಿಕೆ ಮಾಡಿದ್ದರು.
ಯುದ್ಧ ನಡೆದರೆ ಅಷ್ಟೇ- ಇಮ್ರಾನ್ ಖಾನ್ ಎಚ್ಚರಿಕೆ
ಕಾಶ್ಮೀರದ ವಿಚಾರದಲ್ಲಿ ಭಾರತ ತೆಗೆದುಕೊಂಡ ನಿರ್ಧಾರ ಐತಿಹಾಸಿಕ ಪ್ರಮಾದ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 'ಒಂದು ವೇಳೆ ಯುದ್ಧ ನಡೆದರೆ, ಭಾರತ ಮತ್ತು ಪಾಕಿಸ್ತಾನ ಎರಡೂ ಅಣ್ವಸ್ತ್ರ ಶಕ್ತಿಗಳನ್ನು ಹೊಂದಿವೆ ಎಂಬುದನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು. ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ. ಆದರೆ ಯುದ್ಧದ ಪರಿಣಾಮವನ್ನು ಎಲ್ಲರೂ ಅನುಭವಿಸಬೇಕಾಗುವುದರಿಂದ ಜಗತ್ತು ಅದಕ್ಕೆ ಹೊಣೆಗಾರನಾಗುತ್ತದೆ' ಎಂದು ಎಚ್ಚರಿಕೆಯ ದಾಟಿಯಲ್ಲಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದಾರೆ.