ಗೋವಾದಲ್ಲೀಗ ಪಕ್ಷಾಂತರ ವಿರೋಧಿ ಕಾಯಿದೆ ಅನ್ವಯವಾಗೋಲ್ಲ, ಯಾಕೆ?
ಪಣಜಿ, ಜುಲೈ 11: ಚುನಾಯಿತ ಪ್ರತಿನಿಧಿಗಳು ಒಂದು ಪಕ್ಷ ತೊರೆದು ಮತ್ತೊಂದು ಪಕ್ಷಕ್ಕೆ ಹಾರುವ ಪ್ರಕ್ರಿಯೆಗೆ ಕಡಿವಾಣ ಹಾಕಿದ್ದು ಪಕ್ಷಾಂತರ ನಿಷೇಧ ಕಾಯಿದೆ. ಪಕ್ಷ ವಿರೋಧಿ ನಡೆ ಮತ್ತು ಪಕ್ಷಕ್ಕೆ ದ್ರೋಹ ಮಾಡಿ, ಜನಾದೇಶವನ್ನೂ ಧಿಕ್ಕರಿಸಿ ಬೇರೊಂದು ಪಕ್ಷ ಸೇರುವ ಶಾಸಕ/ಸಂಸದರ ವಿರುದ್ಧ ಪ್ರಯೋಗಿಸಬಹುದಾದ ಈ ಪರಿಣಾಮಕಾರಿ ಕಾಯಿದೆ ಕೆಲವೊಂದು ಸಂದರ್ಭದಲ್ಲಿ ಉಪಯೋಗಕ್ಕೆ ಬರಲಾರದು. ಅದಕ್ಕೆ ಅತ್ಯುತ್ತ ಉದಾಹರಣೆ ಗೋವಾ.
ಗೋವಾದಲ್ಲಿ ಕಾಂಗ್ರೆಸ್ ನ 15 ಶಾಸಕರಲ್ಲಿ 10 ಶಾಸಕರು ಬಿಜೆಪಿಗೆ ಬೆಂಬಲ ಘೋಷಿಸಿ, ಬಿಜೆಪಿ ಜೊತೆ ಪಕ್ಷವನ್ನು ವಿಲೀನಗೊಳಿಸಲು ಮುಂದಾಗಿದ್ದಾರೆ. ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಪಕ್ಷದ ವರಿಷ್ಟರಿಗೆ ಸಾಧ್ಯವಿಲ್ಲ. ಏಕೆಂದರೆ 1985 ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಅವಧಿಯಲ್ಲಿ ಸಂವಿಧಾನದ 10 ನೇ ಪರಿಚ್ಛೇದ 52 ನೇ ತಿದ್ದುಪಡಿಯಲ್ಲಿ ಪಕ್ಷೇತರ ನಿಷೇಧ ಕಾಯಿದೆಯನ್ನು ಸೇರಿಸಲಾಯಿತು. ಇದರ ಪ್ರಕಾರ ಯಾವುದೇ ಪಕ್ಷಶದ ಮೂರನೇ ಎರಡರಷ್ಟು(2/3) ಚುನಾಯಿತ ಪ್ರತಿನಿಧಿಗಳು ಬೇರ ಪಕ್ಷದೊಂದಿಗೆ ವಿಲೀನಕ್ಕೆ ಮುಂದಾದರೆ ಅದನ್ನು ತಡೆಯುವುದಕ್ಕೆ ಸಂವಿಧಾನದಲ್ಲಿ ಸಾಧ್ಯವಿಲ್ಲ. ಹೆಚ್ಚಿನ ಸಂಖ್ಯೆಯ ಚುನಾಯಿತ ಪ್ರತಿನಿಧಿಗಳು ಅದೇ ಅಭಿಪ್ರಾಯಕ್ಕೆ ಬೆಂಬಲ ಸೂಚಿಸಿದ್ದಾರೆ ಎಂಬ ಕಾರಣಕ್ಕೆ ಈ ವಿಲೀನಕ್ಕೆ ವಿರೋಧ ವ್ಯಕ್ತಪಡಿಸುವುದು ಸಾಧ್ಯವಾಗುವುದಿಲ್ಲ.
ತಂದೆಯ ಹಾದಿ ಮುಗಿಯಿತು!ಗೋವಾ ರಾಜಕೀಯ ನೋಡಿ ಭಾವುಕರಾದ ಪರಿಕ್ಕರ್ ಪುತ್ರ
ಇದೀಗ ಗೋವಾದಲ್ಲಿ ಒಟ್ಟು 15 ಕಾಂಗ್ರೆಸ್ ಶಾಸಕರಲ್ಲಿ 10 ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಅಂದರೆ 15x2/3=10. ಬಿಜೆಪಿಗೆ ಬೆಂಬಲ ನೀಡಿದ ಶಾಸಕರ ಸಂಖ್ಯೆ ಮೂರನೆಯ ಎರಡರಷ್ಟಿರುವುದರಿಂದ ಅವರು ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಬರುವುದಿಲ್ಲ.
ಅಕಸ್ಮಾತ್ ಅದಕ್ಕಿಂತ ಕಡಿಮೆ ಶಾಸಕರು ಪಕ್ಷ ತೊರೆದಿದ್ದರೆ, ಆಗ ಅವರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಕ್ರಮ ತೆಗೆದುಕೊಳ್ಳಲು ಸಾಧ್ಯವಿತ್ತು. ಅವರ ಅನರ್ಹತೆಯನ್ನು ಘೋಷಿಸುವ ಅಧಿಕಾರ ಪಕ್ಷಕ್ಕಿತ್ತು. ಆದರೆ ಈಗ ಅದು ಸಾಧ್ಯವಿಲ್ಲ.
ಇತ್ತೀಚೆಗಷ್ಟೇ ಗೋವಾದಲ್ಲಿ ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷದ ಮೂವರು ಶಾಸಕರಲ್ಲಿ ಇಬ್ಬರು ಬಿಜೆಪಿಗೆ ಬೆಂಬಲಿಸಿ, ಪಕ್ಷವನ್ನು ವಿಲೀನಗೊಳಿಸಿದ್ದರು. ಆಗಲೂ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯವಾಗಿರಲಿಲ್ಲ.