ಮನೋಹರ್ ಪರಿಕ್ಕರ್ ನಂತರ ಗೋವಾದ ಮುಂದಿನ ಮುಖ್ಯಮಂತ್ರಿ ಯಾರು?
ಪಣಜಿ, ಮಾರ್ಚ್ 18: ಗೋವಾದ ಜನಪ್ರಿಯ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ನಂತರ ಗೋವಾದ ಮುಖ್ಯಮಂತ್ರಿ ಯಾರು ಎಂಬುದು ಈಗ ಜನಸಾಮಾನ್ಯರ ವಲಯದಲ್ಲೂ ಕೇಳಿಬರುತ್ತಿರುವ ಪ್ರಶ್ನೆ.
ಮುಖ್ಯಮಂತ್ರಿ ಗಾದಿಗೆ ಸದ್ಯಕ್ಕೆ ಕೇಳಿಬರುತ್ತಿರುವ ಪ್ರಮುಖ ಹೆಸರುಗಳಲ್ಲಿ ಗೋವಾ ವಿಧಾನಸಭೆಯ ಹಾಲಿ ಸ್ಪೀಕರ್ ಪ್ರಮೋದ್ ಸಾವಂತ್ ಅಗ್ರಸ್ಥಾನದಲ್ಲಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮನೋಹರ್ ಪರಿಕ್ಕರ್ ಅವರ ನಿಧನದ ನಂತರ ಗೋವಾ ಮುಖ್ಯಮಂತ್ರಿ ಸ್ಥಾನ ತೆರವಾಗಿದ್ದು, ಅದಕ್ಕಾಗಿ ಪೈಪೋಟಿ ನಡೆಯುತ್ತಿದೆ.
ಮನೋಹರ್ ನಿಧನದ ನಂತರವೂ ಗೋವಾ ಬಿಜೆಪಿ ಸರ್ಕಾರ ಸ್ಥಿರ
ಗೋವಾ ರಾಜಕೀಯದಲ್ಲಿ ಮನೋಹರ್ ಪರಿಕ್ಕರ್ ಅವರು ಪ್ರಶ್ನಾತೀತ ನಾಯಕರಾಗಿ ಬೆಳೆದು, ಸಾಕಷ್ಟು ಜನಪ್ರಿಯತೆ ಪಡೆದಿದ್ದ ಕಾರಣ ಅವರನ್ನು ಎಲ್ಲ ಮೈತ್ರಿ ಪಕ್ಷಗಳೂ ಮುಖ್ಯಮಂತ್ರಿ ಎಂದು ಒಪ್ಪಿಕೊಂಡಿದ್ದವು, ಎಲ್ಲೂ ಅತೃಪ್ತಿಯಾಗಲೀ, ಬಂಡಾಯದ ಸದ್ದಾಗಲೀ ಎದ್ದಿರಲಿಲ್ಲ. ಆದರೆ ಅವರ ನಿಧನದ ನಂತರವೂ ಅಂಥದೇ ಪರಿಸ್ಥಿತಿ ಮುಂದುವರಿಯುತ್ತದೆ ಎನ್ನುವುದಕ್ಕೆ ಬರುವುದಿಲ್ಲ. ಪ್ರಮೋದ್ ಅವರೊಟ್ಟಿಗೆ ಈಗಾಗಲೇ ಹಲವರ ಹೆಸರು ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ.
ನಿತಿನ್ ಗಡ್ಕರಿ ಸಭೆ
ಮನೋಹರ್ ಪರಿಕ್ಕರ್ ಅವರ ನಿಧನದ ಸುದ್ದಿ ತಿಳಿದ ನಂತರ ಭಾನುವಾರ ರಾತ್ರಿಯೇ ಗೋವಾಕ್ಕೆ ತೆರಳಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಜೆಪಿ ಮತ್ತು ಮೈತ್ರಿ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಪ್ರಮೋದ್ ಸಾವಂತ್ ಅವರನ್ನೇ ಮುಖ್ಯಮಂತ್ರಿ ಹುದ್ದೆಗೆ ಸೂಚಿಸಿದೆ ಎನ್ನಲಾಗಿದೆ.
ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕರ್ ಜೀವನದ ಹೆಜ್ಜೆ ಗುರುತುಗಳು
ಇನ್ನ್ಯಾರಿದ್ದಾರೆ ರೇಸ್ ನಲ್ಲಿ?
ಪ್ರಮೋದ್ ಸಾವಂತ್ ಜೊತೆಗೆ ಎಂಜಿಪಿಯ (ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ) ಸುಧಿನ್ ಧವಾಲಿಕರ್ ಮತ್ತು ಜಿಎಫ್ ಪಿ(ಗೋವಾ ಫಾರ್ವರ್ಡ್ ಪಾರ್ಟಿ)ಯ ವಿಜಯ್ ಸರ್ದೇಸಾಯಿ ಅವರ ಹೆಸರೂ ಕೇಳಿಬರುತ್ತಿದೆ. ಮುಖ್ಯಮಂತ್ರಿ ಹುದ್ದೆಗೆ ತಾವೂ ಆಕಾಂಕ್ಷಿಗಳು ಎಂದು ಸ್ವತಃ ಸರ್ದೇಸಾಯಿ ಮತ್ತು ಸುಧಿನ್ ಧವಾಲಿಕರ್ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
ಪರಿಕ್ಕರ್ ಪತ್ನಿ ಮೇಧಾ ನಿಧನರಾಗಿದ್ದೂ ಕ್ಯಾನ್ಸರ್ ನಿಂದಲೇ...
ರಾಣೆ ಹೆಸರೂ ಪಟ್ಟಿಯಲ್ಲಿ
ಗೋವಾ ಸಂಪುಟ ಸಚಿವ ವಿಶ್ವಜಿತ್ ರಾಣೆ ಅವರಿಗೂ ಒಳ್ಳೆಯ ಹೆಸರಿದ್ದು, ಅವರೂ ಮುಖ್ಯಮಂತ್ರಿ ರೇಸ್ ನಲ್ಲಿರುವುದು ಹೌದಾದರೂ, ಅವರು ಕಾಂಗ್ರೆಸ್ ನಿಂದ ಬಂದು, ನಂತರ ಬಿಜೆಪಿಗೆ ಸೇರಿದ್ದರಿಂದ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆಗಳು ಕಡಿಮೆ. ಆದರೆ ತಾವೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಹಲವು ಬಾರಿ ಅವರು ಇಂಗಿತ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ರಾಣೆ ಅವರು ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾವ್ ಜಿ ರಾಣೆ ಅವರ ಪುತ್ರ.
ಬಿಜೆಪಿ ಸರ್ಕಾರ ಬಿದ್ದೀತಾ?
40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗೋವಾದಲ್ಲಿ ಬಿಜೆಪಿ 13 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ 14 ಸ್ಥಾನ ಹೊಂದಿ ಅತೀ ದೊಡ್ಡ ಪಕ್ಷವಾಗಿಯಲ್ಲಿ ಪ್ರಸ್ತುತ 37 ಸದಸ್ಯ ಬಲ ಇರುವುದರಿಂದ ಮ್ಯಾಜಿಕ್ ನಂಬರ್ 19.
ಬಿಜೆಪಿಯು, ಗೋವಾ ಫಾರ್ವಡ್ ಎಂಜಿಪಿ ಮುಂತಾದ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಆ ಮೂಲಕ 21 ಸ್ಥಾನಗಳನ್ನು ಪಡೆದು ಬಹುಮತ ಸಾಧಿಸಿದ್ದು, ಬಿಜೆಪಿ ಸರ್ಕಾರ ಬೀಳುವ ಪ್ರಶ್ನೆ ಇಲ್ಲ.
ಬಂಡಾಯ ಎದ್ದರೆ ಕಷ್ಟ!
ಮುಖ್ಯಮಂತ್ರಿ ಹುದ್ದೆಗಾಗಿ ಮೈತ್ರಿ ಪಕ್ಷಗಳಲ್ಲಿ ಜಟಾಪಟಿ ನಡೆದರೆ ಅದರ ಲಾಭವನ್ನು ಕಾಂಗ್ರೆಸ್ ಪಡೆವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ಪರಿಕ್ಕರ್ ಬದುಕಿದ್ದಾಗ ಗೋವಾ ರಾಜಕೀಯದಲ್ಲಿ ಅವರೊಂದು ಗಟ್ಟಿ ಸ್ಥಾನ ಹೊಂದಿದ್ದರು. ಅವರ ನಾಯಕತ್ವವನ್ನು ಎಲ್ಲಾ ಮೈತ್ರಿ ಪಕ್ಷಗಳು ಸಮಾನ ಮನಸ್ಸಿನಿಂದ ಒಪ್ಪಿಕೊಂಡಿದ್ದವು. ಆದರೆ ಅದೇ ಸ್ಥಿತಿ ಈಗ ಬೇರೆಯವರು ಮುಖ್ಯಮಂತ್ರಿಯಾದಾಗಲೂ ಮುಂದುವರಿಯುತ್ತದೆ ಎನ್ನುವುದಕ್ಕೆ ಸಾಧ್ಯವಿಲ್ಲ. ಮುಖ್ಯಮಂತ್ರಿ ಹುದ್ದೆಗಾಗಿಯೇ ಮೈತ್ರಿ ಪಕ್ಶಃದ ನಾಯಕರು ಬಂಡಾಯ ಎದ್ದರೆ ಬಿಜೆಪಿ ಹಾದಿ ಸುಲಭವಲ್ಲ.