ವಾರದ ಹಿಂದೆ ಪ್ರತಿಪಕ್ಷ ನಾಯಕ, ಈಗ ಗೋವಾ ಡಿಸಿಎಂ
ಪಣಜಿ (ಗೋವಾ), ಜುಲೈ 14: ಗೋವಾ ಸಚಿವ ಸಂಪುಟಕ್ಕೆ ನಾಲ್ವರು ಹೊಸ ಸಚಿವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈ ನಾಲ್ವರಿಗೆ ಸೋಮವಾರದಂದು ಖಾತೆಗಳ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಚಂದ್ರಕಾಂತ್ ಕವ್ಲೇಕರ್ ಅವರು ಉಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸಾವಂತ್ ಅವರು ಪಣಜಿಯಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದು, ಹೆಚ್ಚಿನ ವಿವರ ನೀಡುವುದಕ್ಕೆ ನಿರಾಕರಿಸಿದ್ದಾರೆ.
ಗೋವಾ ಸರ್ಕಾರಕ್ಕೆ ನಾಲ್ವರು ಸಚಿವರ ಸೇರ್ಪಡೆ: ಚಂದ್ರಕಾಂತ್ ಉಪ ಮುಖ್ಯಮಂತ್ರಿ
ಗೋವಾದಲ್ಲಿ ಹತ್ತು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ ಒಂದು ದಿನದ ನಂತರ, ಶನಿವಾರ ಸಂಪುಟವನ್ನು ವಿಸ್ತರಿಸಿದ್ದಾರೆ. ಮೈತ್ರಿ ಪಕ್ಷವಾದ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್ ಪಿ) ಹಾಗೂ ಪಕ್ಷೇತರ ಶಾಸಕರನ್ನು ಸಚಿವರ ಹುದ್ದೆಯಿಂದ ಕೈ ಬಿಡಲಾಗಿದೆ.
ಗೋವಾ ವಿಧಾನಸಭಾ ಉಪಾಧ್ಯಕ್ಷ ಹುದ್ದೆಗೆ ಮೈಖೆಲ್ ಲೋಬೋ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ನಿಂದ ಬಿಜೆಪಿ ಸೇರಿದ ಹತ್ತು ಮಂದಿ ಪೈಕಿ ಚಂದ್ರಕಾಂತ್ ಕವ್ಲೇಕರ್, ಜೆನಿಫರ್ ಮಾನ್ಸೆರೆಟ್, ಫಿಲಿಪ್ ನೆರಿ ರೋಡ್ರಿಗಸ್ ಹೊಸ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗೋವಾ ಸರಕಾರದ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ.
ಹೊಸ ಸಚಿವರು ಹೇಗೆ ಪ್ರಶ್ನೆಗಳನ್ನು ನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಾವಂತ್, ನೆರವಿಗೆ ನಾನು ಇರುತ್ತೇನೆ ಎಂದು ಹೇಳಿದ್ದಾರೆ. ಕಳೆದ ಬುಧವಾರ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದಾರೆ. ಆ ಮೂಲಕ ನಲವತ್ತು ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯೆ ಇಪ್ಪತ್ತೇಳಕ್ಕೆ ಏರಿಕೆ ಆಗಿದೆ.
ಇಂದು ಗೋವಾ ಸಂಪುಟ ವಿಸ್ತರಣೆ: ಕಾಂಗ್ರೆಸ್ನ 4 ಅತೃಪ್ತ ಶಾಸಕರು ಇನ್?
ಕಾಂಗ್ರೆಸ್ ನ ಹತ್ತು ಶಾಸಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಗೋವಾದಲ್ಲಿ ಮನೋಹರ್ ಪರಿಕರ್ ಉಳಿಸಿಕೊಂಡು ಬಂದಿದ್ದ ರಾಜಕೀಯ ಘನತೆಯನ್ನು ಹಾಳುಗೆಡವಲಾಗಿದೆ ಎಂದು ಜಿಎಫ್ ಪಿ ನಾಯಕ ವಿಜಯ್ ಸರ್ದೇಸಾಯಿ ಹೇಳಿದ್ದಾರೆ.