ದೀದಿಯನ್ನು ಹೊಗಳಿದ್ದ ಗೋವಾ ಮಾಜಿ ಸಿಎಂ ಲುಯಿಜಿನೊ ಕಾಂಗ್ರೆಸ್ಗೆ ರಾಜೀನಾಮೆ
ಪಣಜಿ, ಸೆಪ್ಟೆಂಬರ್, 27: ಇತ್ತೀಚೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಹೊಗಳಿದ್ದ ಅನುಭವಿ ಗೋವಾ ಕಾಂಗ್ರೆಸ್ ನಾಯಕ, ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫಲೆರೊ ಈಗ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ 40 ವರ್ಷಗಳ ರಾಜಕೀಯ ಜೀವನವನ್ನು ಹೊಂದಿರುವ ಗೋವಾ ಕಾಂಗ್ರೆಸ್ ನಾಯಕ ಲುಯಿಜಿನೊ ಫಲೆರೊ ಈ ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿರನ್ನು ಹೊಗಳಿದ್ದರು. ಈಗ ತಮ್ಮ 40 ವರ್ಷಗಳ ಕಾಂಗ್ರೆಸ್ನೊಂದಿಗೆ ನಂಟಿಗೆ ಕೊನೆ ಹೇಳಿದ್ದಾರೆ. ಈ ನಡುವೆ ಲುಯಿಜಿನೊ ಫಲೆರೊ ತೃಣಮೂಲ ಕಾಂಗ್ರೆಸ್ಗೆ (ಟಿಎಂಸಿ) ಸೇರ್ಪಡೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಗೋವಾದಲ್ಲಿ ಪ್ರಚಾರ ಶುರು ಮಾಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚನೆ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿರನ್ನು ಹಾಡಿ ಹೊಗಳಿದ್ದ ಲುಯಿಜಿನೊ ಫಲೆರೊ, ದೀದಿಯನ್ನು "ಬೀದಿ ಹೋರಾಟಗಾರ್ತಿ" ಎಂದು ಹೇಳಿದ್ದರು. "ಪ್ರಧಾನಿ ನರೇಂದ್ರ ಮೋದಿಗೆ ಮಮತಾ ಬ್ಯಾನರ್ಜಿ ಕಠಿಣ ಸ್ಫರ್ಧೆಯನ್ನು ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾರ ಕಾರ್ಯತಂತ್ರವೇ ಜಯಗಳಿಸಿದೆ," ಎಂದು ಶ್ಲಾಘಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ಮಾಧ್ಯಮಗಳು ಕಾಂಗ್ರೆಸ್ ತೊರೆದು ತೃಣಮೂಲ ಕಾಂಗ್ರೆಸ್ಗೆ ಸೇರುತ್ತಾರೆಯೇ ಎಂದು ಪ್ರಶ್ನೆ ಮಾಡಿದಾಗ, "ದೊಡ್ಡ ಕಾಂಗ್ರೆಸ್ ಪರಿವಾರದ ಕಾಂಗ್ರೆಸಿಗನಾಗಿಯೇ ಇರುತ್ತೇನೆ," ಎಂದು ತಿಳಿಸಿದ್ದಾರೆ. ಆದರೆ ಇದೇ ವೇಳೆ "ತೃಣಮೂಲ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ನ ಕೊಂಬೆ, ಬಿಜೆಪಿಯ ವಿರುದ್ದದ ಹೋರಾಟಕ್ಕೆ ಉತ್ತಮ ಅಸ್ತ್ರ," ಎಂದು ಕೂಡಾ ಹೇಳಿದರು.
"ನಾನು ಕೆಲವು ಜನರು ಭೇಟಿಯಾದೆ. ಅವರು ನಾನು ಸುಮಾರು 40 ವರ್ಷಗಳಿಂದ ಕಾಂಗ್ರೆಸ್ನಲ್ಲೇ ಇರುವ ಕಾಂಗ್ರೆಸಿಗ ಎಂದು ಹೇಳಿದ್ದಾರೆ. ಕಾಂಗ್ರೆಸ್ ಕುಟುಂಬದಲ್ಲಿ ನಾನು ಕಾಂಗ್ರೆಸಿಗನಾಗಿಯೇ ಇರುತ್ತೇನೆ. ಎಲ್ಲಾ ನಾಲ್ಕು ಕಾಂಗ್ರೆಸ್ಗಳಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಉತ್ತಮ ಸ್ಪರ್ಧೆ ನೀಡಿದ್ದು ಮಮತಾ ಬ್ಯಾನರ್ಜಿ ಹಾಗೂ ಪ್ರಬಲವಾದ ಅವರ ರಾಜಕೀಯ ಬಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ಸುಮಾರು 200 ಸಭೆಗಳನ್ನು ನಡೆಸಿದ್ದಾರೆ. ಹಾಗೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ಸುಮಾರು 250 ಸಭೆಗಳನ್ನು ನಡೆಸಿದ್ದಾರೆ. ಬಳಿಕ ಅಲ್ಲಿ ಇಡಿ, ಸಿಬಿಐ ಕೂಡಾ ಬಳಸಿಕೊಂಡಿದ್ದಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿದ್ದು ಮಮತಾರ ಸೂತ್ರ," ಎಂದು ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫಲೆರೊ ಅಭಿಪ್ರಾಯಿಸಿದ್ದಾರೆ.
ಗೋವಾ ಜನತೆಗೆ ಅರವಿಂದ್ ಕೇಜ್ರಿವಾಲ್ರಿಂದ ಭರವಸೆಯ ಮಹಾಪೂರ
ಹಾಗೆಯೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿರನ್ನು "ಬೀದಿ ಹೋರಾಟಗಾರ್ತಿ" ಎಂದು ಹೊಗಳಿದ ಲುಯಿಝಿನ್ಹೊ ಫಲೆರೊ, "ನಮ್ಮದೇ ಪಕ್ಷದ ಸಿದ್ದಾಂತವನ್ನು ಹೊಂದಿರುವ, ನಮ್ಮ ಪಕ್ಷದ ಯೋಜನೆಗಳನ್ನೇ ಹೊಂದಿರುವ, ಸಿದ್ದಾಂತ, ಕಾರ್ಯಕ್ರಮ ಎಲ್ಲವೂ ಒಂದೇ ರೀತಿ ಆಗಿರುವ ಇಂತಹ ಹೋರಾಟಗಾರರು ನಮಗೆ ಬೇಕು. ಬಿಜೆಪಿಯ ವಿರುದ್ದ ಹೋರಾಟ ಮಾಡಲು ಎಲ್ಲಾ ಕಾಂಗ್ರೆಸ್ನಿಂದ ಬೇರ್ಪಟ್ಟು ಆದ ಪಕ್ಷಗಳು ಜೊತೆಯಾಗಬೇಕು ಎಂದು ನಾನು ಬಯಸುತ್ತೇನೆ," ಎಂದಿದ್ದಾರೆ.
ಸುಶ್ಮಿತಾ ದೇವ್ ಬಳಿಕ ಈಗ ಲುಯಿಝಿನ್ಹೊ ಫಲೆರೊ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ಮುಂದಿನ ಚುನಾವಣೆಯ ಹಿನ್ನೆಲೆ ತ್ರಿಪುರಾದಲ್ಲಿ ಸುಶ್ಮಿತಾ ದೇವ್ ತೃಣಮೂಲ ಕಾಂಗ್ರೆಸ್ನ ಬಲವರ್ಧನೆಗೆ ಶ್ರಮಿಸುತ್ತಿರುವಾಗ, ಈಗ ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ನ ನಾಯಕತ್ವವನ್ನು ಹಿರಿಯ ಕಾಂಗ್ರೆಸ್ ನಾಯಕ ಲುಯಿಝಿನ್ಹೊ ಫಲೆರೊ ವಹಿಸುತ್ತಾರೆಯೇ ಎಂಬ ಅನುಮಾನಗಳು ಮೂಡಿದೆ. ಇನ್ನು ಗೋವಾದಲ್ಲಿ ಈಗ ಆಮ್ ಆದ್ಮಿ ಪಕ್ಷವು ಬಹಳ ತೀಕ್ಷ್ಣವಾಗಿ ತನ್ನ ಪ್ರಚಾರ ಕಾರ್ಯವನ್ನು ನಡೆಸುತ್ತಿದೆ.
2019 ರಲ್ಲಿ ರಾಷ್ಟ್ರೀಯ ಚುನಾವಣೆಯಲ್ಲಿ ತ್ರಿಪುರಾ ಕಾಂಗ್ರೆಸ್ನ ಉಸ್ತುವಾರಿಯನ್ನು ಲುಯಿಝಿನ್ಹೊ ಫಲೆರೊ ವಹಿಸಿಕೊಂಡಿದ್ದರು. ಈಗ ತೃಣಮೂಲ ಕಾಂಗ್ರೆಸ್ ಪಕ್ಷವು ಈಶಾನ್ಯ ಭಾಗದಲ್ಲೂ ತನ್ನ ಪಕ್ಷದ ಬಲ ಹೆಚ್ಚಿಸಲು ಲುಯಿಝಿನ್ಹೊ ಫಲೆರೊ ಕಾರ್ಯನಿರ್ವಹಣೆ ಮಾಡುವ ಸಾಧ್ಯತೆ ಇದೆ. ಇನ್ನು ಲುಯಿಝಿನ್ಹೊ ಫಲೆರೊರ ಜೊತೆ ಮಾತನಾಡಲು ಹಿರಿಯ ಟಿಎಂಸಿ ನಾಯಕರಾದ ಡೆರೆಕ್ ಓ ಬ್ರಯನ್ ಹಾಗೂ ಪ್ರಶುನ್ ಬಾನರ್ಜಿ ಗೋವಾಕ್ಕೆ ತೆರಳಿಸಿದ್ದಾರೆ ಎಂದು ಹೇಳಲಾಗಿದೆ.
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಸೇರಿದಂತೆ ಗೋವಾದಲ್ಲಿಯೂ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಗೋವಾದಲ್ಲೂ ತಮ್ಮ ಚುನಾವಣಾ ಕಾರ್ಯತಂತ್ರವನ್ನು ನಡೆಸುತ್ತಿದೆ.
(ಒನ್ಇಂಡಿಯಾ ಸುದ್ದಿ)