'ಗೋವಾ ಚುನಾವಣೆಯಲ್ಲಿ ಟಿಎಂಸಿ ಉತ್ತಮವಾಗಿ ಸ್ಪರ್ಧಿಸಲಿದೆ': ಬಾಬುಲ್
ಪಣಜಿ, ಅಕ್ಟೋಬರ್ 25: ಮುಂದಿನ ವರ್ಷ ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಉತ್ತರಾಖಂಡ, ಗೋವಾದಲ್ಲಿ ಚುನಾವಣೆ ನಡೆಯಲಿದೆ. ಈ ನಡುವೆ ಗೋವಾದಲ್ಲಿ ಎಲ್ಲ ಪಕ್ಷಗಳು ಮುಂದಿನ ಆಡಳಿತದ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಹಲವು ದಿನಗಳಿಂದ ಗೋವಾ ರಾಜಕೀಯ ವಿಚಾರವಾಗಿ ಚರ್ಚೆಗಳು ನಡೆಯುತ್ತಿದೆ.
ಈ ಮಧ್ಯೆ ಗೋವಾದಲ್ಲಿ ಈ ವರ್ಷವಷ್ಟೇ ತನ್ನ ಕಬಂಧ ಬಾಹುವನ್ನು ಚಾಚಲು ಆರಂಭ ಮಾಡಿರುವ ತೃಣಮೂಲ ಕಾಂಗ್ರೆಸ್ ಗೋವಾದಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಬಾಬುಲ್ ಸುಪ್ರಿಯೋ, "ನಮ್ಮ ಪಕ್ಷ ತೃಣಮೂಲ ಕಾಂಗ್ರೆಸ್ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ," ಎಂದು ತಿಳಿಸಿದ್ದಾರೆ.
ಬಿಜೆಪಿ ಮಾಜಿ ನಾಯಕ ಬಾಬುಲ್ ಸುಪ್ರೀಯೋ ಟಿಎಂಸಿ ಸೇರ್ಪಡೆ
ಅಕ್ಟೋಬರ್ 28 ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಗೋವಾಕ್ಕೆ ತೆರಳಲಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯ ಪಕ್ಷದ ಕಾರ್ಯಕರ್ತರು ಇಲ್ಲಿ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಹಲವಾರು ಟಿಎಂಸಿ ನಾಯಕರುಗಳು, ಬಾಬುಲ್ ಸುಪ್ರಿಯೋ ಹಾಗೂ ಪಕ್ಷದ ಸಂಸದರುಗಳಾದ ಮಹುವಾ ಮೊಯಿತ್ರಾ ಹಾಗೂ ಸುಗತ ರಾಯ್ ಈಗಾಗಲೇ ಗೋವಾಕ್ಕೆ ತಲುಪಿದ್ದಾರೆ.
ಗೋವಾ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಕೂಡಾ ಸ್ಪರ್ಧಿಸಲಿದೆ ಎಂದು ಈಗಾಗಲೇ ಟಿಎಂಸಿ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ನಾಯಕ ಬಾಬುಲ್ ಸುಪ್ರಿಯೋ, "ಮುಂಬರುವ ಗೋವಾ ವಿಧಾನಸಭೆ ಚುನಾವಣೆ ಬಹಳ ಮುಖ್ಯವಾದುದ್ದು, ಈ ಚುನಾವಣೆಯಲ್ಲಿ ಟಿಎಂಸಿಯು ಉತ್ತಮವಾಗಿ ಸ್ಪರ್ಧಿಸಲಿದೆ," ಎಂದು ಹೇಳಿದ್ದಾರೆ.
"ಗೋವಾವನ್ನು ಪ್ರವಾಸಿಗರಿಗೆ ಇನ್ನಷ್ಟು ಗಮನ ಸೆಳೆಯುವಂತೆ ಮಾಡಲು ಹಲವಾರು ಬೆಳವಣಿಗೆಗಳು ನಡೆಯಬೇಕಿದೆ," ಎಂದು ಬಾಬುಲ್ ಸುಪ್ರಿಯೋ ಹೇಳಿದ್ದಾರೆ. ಹಾಗೆಯೇ "ಗೋವಾವು ಇಲ್ಲಿನ ಸಂಸ್ಕೃತಿ, ಆಚರಣೆ, ಸಂಗೀತ ಹಾಗೂ ಸುಂದರವಾಗಿ ಕಡಲತೀರಗಳಿಂದಾಗಿ ಹೆಸರುವಾಸಿಯಾಗಿದೆ. ಇಲ್ಲಿ ಇನ್ನು ಹಲವಾರು ಬೆಳವಣಿಗೆಗಳನ್ನು ನಾವು ಮಾಡಲು ಸಾಧ್ಯ," ಎಂದು ಅಭಿಪ್ರಾಯಿಸಿದ್ದಾರೆ.
ಎಎಪಿ, ಟಿಎಂಸಿ ಗೋವಾ ಚುನಾವಣೆಯಲ್ಲಿ ಬರೀ 'ಕನಿಷ್ಠ ಆಟಗಾರರು'
ಬಿಜೆಪಿ ತೊರೆದು ಟಿಎಂಸಿ ಸೇರಿದ್ದ ಬಾಬುಲ್
ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ, ಸಂಸದ ಬಾಬುಲ್ ಸುಪ್ರಿಯೋ ಈ ಹಿಂದೆ ತಾನು ರಾಜಕೀಯ ತ್ಯಜಿಸುವುದಾಗಿ ಹೇಳಿದ್ದರು. ಈ ಸಂದರ್ಭದಲ್ಲಿ ಬಾಬುಲ್ ಸುಪ್ರಿಯೋ ಟಿಎಂಸಿ ಸೇರ್ಪಡೆಯಾಗಲಿದ್ದಾರೆ ಎಂದು ಊಹಾಪೋಹಗಳು ಹರಡಿದ್ದವು, ಈ ಊಹಾಪೋಹಗಳನ್ನು ಸುಪ್ರಿಯೋ ತಳ್ಳಿಹಾಕಿದ್ದದರು. ಆದರೆ ಬಳಿಕ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾದರು. 2014 ರಿಂದ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿ ಹಲವಾರು ಖಾತೆಗಳನ್ನು ನಿರ್ವಹಿಸಿದ್ದ ಸುಪ್ರಿಯೋರನ್ನು ಕಳೆದ ತಿಂಗಳ ಆರಂಭದಲ್ಲಿ ಪ್ರಮುಖ ಸಂಪುಟ ಪುನರ್ ರಚನೆಯ ಸಂದರ್ಭದಲ್ಲಿ ಹೊರ ಹಾಕಲಾಗಿದೆ. ಈ ವಿಚಾರದಲ್ಲಿಯೇ ಅಸಮಾಧಾನ ಉಂಟಾಗಿದೆ ಎಂದು ಮಾಧ್ಯಮಗಳ ವರದಿ ಹೇಳಿದೆ. ಇನ್ನು ಇತ್ತೀಚೆಗೆ ತನ್ನ ಸಂಸದ ಸ್ಥಾನಕ್ಕೂ ಬಾಬುಲ್ ಸುಪ್ರಿಯೋ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಹೊಗಳಿದ್ದ ಅನುಭವಿ ಗೋವಾ ಕಾಂಗ್ರೆಸ್ ನಾಯಕ, ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫಲೆರೊ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಬಳಿಕ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ.
ಭಾನುವಾರವಷ್ಟೇ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ, "ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ತೃಣ ಮೂಲ ಕಾಂಗ್ರೆಸ್ (ಟಿಎಂಸಿ) 2022 ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ 'ಕನಿಷ್ಠ ಆಟಗಾರರು' ಆಗಲಿದ್ದಾರೆ. ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಏರಲು ಬೇಕಾದ ಸಾಮರ್ಥ್ಯವನ್ನು ಹೊಂದಿದೆ," ಎಂದು ಹೇಳಿದ್ದಾರೆ.
"2017 ಎಎಪಿ ಇಲ್ಲಿ ಒಂದು ಪ್ರಯೋಗವನ್ನು ಮಾಡಿ ನೋಡಿದೆ. ಆದರೆ ಯಾವುದೇ ಪರಿಣಾಮ ಉಂಟಾಗಿಲ್ಲ. ತೃಣಮೂಲ ಕಾಂಗ್ರೆಸ್ 2021 ರಲ್ಲಿ ಗೋವಾಕ್ಕೆ ಪ್ರವೇಶಿಸಿದೆ. ಇಲ್ಲಿ ಸ್ಥಳೀಯವಾಗಿ ತೃಣಮೂಲ ಕಾಂಗ್ರೆಸ್ನ ಯಾವುದೇ ಕಾರ್ಯಕರ್ತರು ಇಲ್ಲ. ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಬೀಜವನ್ನಷ್ಟೇ ಬಿತ್ತಿದೆ," ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಎಂದಿದ್ದಾರೆ.
(ಒನ್ಇಂಡಿಯಾ ಸುದ್ದಿ)