ಮನೋಹರ್ ಪರಿಕ್ಕರ್ ಹೇಳಿದ ಕಲ್ಲಂಗಡಿ ಹಣ್ಣಿನ ಕಥೆ
ಪಣಜಿ, ಮಾರ್ಚ್ 19: ಭಾನುವಾರ ನಿಧನರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತಮ್ಮ ಸರಳ ವ್ಯಕ್ತಿತ್ವದಿಂದ ಜನರಿಗೆ ಹೆಚ್ಚು ಆಪ್ತರಾದವರು. ಗೋವಾ ಮುಖ್ಯಮಂತ್ರಿಯಾಗಿ ಅವರು ನಿರ್ವಹಿಸಿದ ಕೆಲಸಗಳಷ್ಟೇ ಅಲ್ಲ, ಅದರಾಚೆಗೂ ಅವರ ನಡೆ ನುಡಿಗಳು ಅವರನ್ನು ಹೆಚ್ಚು ಜನಪ್ರಿಯರನ್ನಾಗಿಸಿದ್ದವು.
ಕಾಲೇಜು ಸಹಪಾಠಿಗಳಿಂದ 'ಮನು' ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಪರಿಕ್ಕರ್ ಒಬ್ಬ ಅನುಕರಣೀಯ ವ್ಯಕ್ತಿ.
ಐಐಟಿಯಲ್ಲಿ ಅವರೊಂದಿಗೆ ಹಾಸ್ಟೆಲ್ನಲ್ಲಿದ್ದ ಪುಣೆ ಮೂಲಕ ಸಿವಿಲ್ ಎಂಜಿನಿಯರ್ ಮುಕುಂದ್ ದೇಶಪಾಂಡೆ 1978ರಲ್ಲಿ ಹಾಸ್ಟೆಲ್ನ ಮೆಸ್ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ.
'ಹಾಸ್ಟೆಲ್ ಸಮಿತಿಯಲ್ಲಿ ಯಾವಾಗಲೂ ಪಾಲ್ಗೊಳ್ಳುತ್ತಿದ್ದರಿಂದ ಪರಿಕ್ಕರ್ಗೆ ಮೆಸ್ ಕೆಲಸಗಾರರೊಂದಿಗೆ ಉತ್ತಮ ಬಾಂಧವ್ಯವಿತ್ತು. ಮುಷ್ಕರ ಆರಂಭವಾದಾಗ ಅವರು ಕೆಲಸಗಾರರೊಂದಿಗೆ ಮಾತನಾಡಿದರು. ಆದರೆ, ಸಿಬ್ಬಂದಿ ನಮಗೆ ಊಟ ನೀಡಲು ನಿರಾಕರಿಸಿದರು. ಆಗ ಪರಿಕ್ಕರ್ ಸುಮಾರು 40 ವಿದ್ಯಾರ್ಥಿಗಳ ಮನವೊಲಿಸಿ ನಾವೇ ಅಡುಗೆ ತಯಾರಿಸುವಂತೆ ಮಾಡಿದರು. ನಾವು ಊಟ ಮಾಡಿದ ಅತ್ಯುತ್ತಮ ಅಡುಗೆ ಅದು' ಎಂದು ಸ್ಮರಿಸಿದ್ದಾರೆ.
ಕೊನೆಯುಸಿರುವವರೆಗೂ ಸೇವೆ ಸಲ್ಲಿಸಲು ಬಯಸಿದ್ದ ಮನೋಹರ್ ಪರಿಕರ್
ಪರಿಕ್ಕರ್ ಸಾವಿನ ಬಳಿಕ ಅವರ ವ್ಯಕ್ತಿತ್ವವನ್ನು ಶ್ಲಾಘಿಸುವ ಅನೇಕ ಆದರ್ಶಪ್ರಾಯ ವಿಚಾರಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವುಗಳಲ್ಲಿ ಅವರು ಹೇಳಿದ ಕಲ್ಲಂಗಡಿ ಹಣ್ಣಿನ ನೋವಿನ ಕಥೆಯೂ ಒಂದು.
ಕಳೆದ ಸೆಪ್ಟೆಂಬರ್ನಲ್ಲಿ ಗುಜರಾತ್ನ ವಡೋದರದಲ್ಲಿ ನಡೆದ 14ನೇ ಎಫ್ಜಿಐ ಅವಾರ್ಡ್ಸ್ ಫಾರ್ ಎಕ್ಸಲೆನ್ಸ್ ಸಮಾವೇಶದಲ್ಲಿ ತಮ್ಮ ಬಾಲ್ಯದ ಕುರಿತು ಸ್ಮರಣೀಯ ಭಾಷಣ ಮಾಡಿದ್ದರು. ಅದರಲ್ಲಿ ಅವರು ತಮ್ಮ ಗ್ರಾಮವಾದ 'ಪರ್ರ'ದಲ್ಲಿ ನಡೆಯುತ್ತಿದ್ದ 'ಕಲ್ಲಂಗಡಿ ಹಣ್ಣಿನ ಉತ್ಸವ'ದ ಬಗ್ಗೆ ನೆನಪು ಹಂಚಿಕೊಂಡಿದ್ದರು.
|
ಕಲ್ಲಂಗಡಿ ಹಣ್ಣುಗಳಿಗೆ ಖ್ಯಾತ ಹಳ್ಳಿ
'ನಾನು ಗೋವಾದ ಪರ್ರ ಗ್ರಾಮದಿಂದ ಬಂದವನು. ಹೀಗಾಗಿ ನಮ್ಮನ್ನು ಪರ್ರೀಕರ್ ಎಂದು ಕರೆಯುತ್ತಾರೆ. ನನ್ನ ಹಳ್ಳಿ ಕಲ್ಲಂಗಡಿ ಹಣ್ಣುಗಳಿಗೆ ಬಹು ಖ್ಯಾತಿ. ನಾನು ಚಿಕ್ಕವನಿದ್ದಾಗ ಅಲ್ಲಿನ ರೈತರು ಮೇ ತಿಂಗಳ ಕೊಯ್ಲಿನ ಅಂತ್ಯದಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನುವ ಸ್ಪರ್ಧೆ ಆಯೋಜಿಸುತ್ತಿದ್ದರು.
ಹಳ್ಳಿಯ ಎಲ್ಲ ಮಕ್ಕಳನ್ನೂ ಅದಕ್ಕೆ ಕರೆಯಲಾಗುತ್ತಿತ್ತು. ಅವರು ಎಷ್ಟು ಬೇಕೋ ಅಷ್ಟು ಕಲ್ಲಂಗಡಿ ಹಣ್ಣು ತಿನ್ನಬಹುದಾಗಿತ್ತು. ವರ್ಷಗಳ ಬಳಿಕ ನಾನು ಎಂಜಿನಿಯರಿಂಗ್ ಓದಲು ಐಐಟಿ ಮುಂಬೈಗೆ ತೆರಳಿದೆ. ಸುಮಾರು ಆರೂವರೆ ವರ್ಷದ ಬಳಿಕ ನನ್ನ ಗ್ರಾಮಕ್ಕೆ ಮರಳಿದೆ. ಅಲ್ಲಿ ಕಲ್ಲಂಗಡಿ ಹಣ್ಣುಗಳನ್ನು ನೋಡಲು ಮಾರುಕಟ್ಟೆಗೆ ತೆರಳಿದೆ. ಎಲ್ಲವೂ ಖಾಲಿಯಾಗಿದ್ದವು. ಅಲ್ಲಿದ್ದ ಕೆಲವೇ ಕೆಲವು ತೀರಾ ಚಿಕ್ಕ ಗಾತ್ರದವಾಗಿದ್ದವು.
ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕರ್ ಜೀವನದ ಹೆಜ್ಜೆ ಗುರುತುಗಳು
ಹಣ್ಣಿನ ಬೀಜ ಸಂಗ್ರಹಿಸುತ್ತಿದ್ದರು
ಕಲ್ಲಂಗಡಿ ಹಣ್ಣು ತಿನ್ನುವ ಸ್ಪರ್ಧೆ ಆಯೋಜಿಸುತ್ತಿದ್ದ ರೈತನನ್ನು ನೋಡಲು ಬಯಸಿದೆ. ಅಲ್ಲೀಗ ಆತನ ಮಗ ಜವಾಬ್ದಾರಿ ತೆಗೆದುಕೊಂಡಿದ್ದ. ಆತನೂ ಸ್ಪರ್ಧೆ ಆಯೋಜಿಸುತ್ತಿದ್ದ. ಆದರೆ ಅದು ವಿಭಿನ್ನವಾಗಿತ್ತು. ಹಿರಿಯಜ್ಜ ರೈತ ನಮಗೆ ಕಲ್ಲಂಗಡಿ ಹಣ್ಣುಗಳನ್ನು ತಿನ್ನಲು ನೀಡುವಾಗ ಅದರ ಬೀಜಗಳನ್ನು ಬಟ್ಟಲಿನಲ್ಲಿ ಉಗುಳುವಂತೆ ಸೂಚಿಸುತ್ತಿದ್ದರು. ಮತ್ತು ಅದರ ಬೀಜಗಳನ್ನು ಕಚ್ಚದಂತೆ ಹೇಳುತ್ತಿದ್ದರು.
ಅವರು ಆ ಬೀಜಗಳನ್ನು ತನ್ನ ಮುಂದಿನ ಬೆಳೆಗಾಗಿ ಸಂಗ್ರಹಿಸುತ್ತಿದ್ದರು. ನಾವು ವಾಸ್ತವವಾಗಿ ಕೂಲಿಯಿಲ್ಲದ ಬಾಲ ಕಾರ್ಮಿಕರಾಗಿದ್ದೆವು. ಅವರು ಸ್ಪರ್ಧೆಗೆ ಗುಣಮಟ್ಟದ ಹಣ್ಣುಗಳನ್ನು ಇರಿಸುತ್ತಿದ್ದರು. ಅವುಗಳಿಂದ ದೊರಕುವ ಅತ್ಯುತ್ತಮವಾದ ಬೀಜಗಳನ್ನು ಮುಂದಿನ ವರ್ಷ ಇನ್ನಷ್ಟು ದೊಡ್ಡದಾದ ಹಣ್ಣುಗಳನ್ನು ಬೆಳೆಯಲು ಬಳಸಿಕೊಳ್ಳುತ್ತಿದ್ದರು.
ಹುಬ್ಬಳ್ಳಿ ನನಗೆ ಎರಡನೇ ತವರು ಮನೆ ಇದ್ದಂತೆ ಎಂದಿದ್ದ ಪರಿಕ್ಕರ್
ದೊಡ್ಡ ಹಣ್ಣುಗಳಿಂದ ಹಣ
ಹೊಲದ ಜವಾಬ್ದಾರಿಯನ್ನು ಆತನ ಮಗ ವಹಿಸಿಕೊಂಡ ಬಳಿಕ ಮಾರುಕಟ್ಟೆಯಲ್ಲಿ ದೊಡ್ಡ ಹಣ್ಣುಗಳು ಹೆಚ್ಚು ಹಣ ತಂದುಕೊಡುತ್ತವೆ ಎಂಬುದನ್ನು ಅರ್ಥಮಾಡಿಕೊಂಡ. ಹೀಗಾಗಿ ದೊಡ್ಡ ಹಣ್ಣುಗಳನ್ನು ಮಾರಿ, ಸಣ್ಣ ಹಣ್ಣುಗಳನ್ನು ಸ್ಪರ್ಧೆಗೆ ಉಳಿಸಿಕೊಳ್ಳತೊಡಗಿದ. ಮುಂದಿನ ವರ್ಷ ಕಲ್ಲಂಗಡಿ ಗಾತ್ರ ಚಿಕ್ಕದಾಯಿತು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಚಿಕ್ಕದಾಗತೊಡಗಿತು.
ಕಲ್ಲಂಗಡಿ ಹಣ್ಣುಗಳಲ್ಲಿ ಅವುಗಳ ಪೀಳಿಗೆ ಇರುವುದು ಒಂದು ವರ್ಷವಷ್ಟೇ.
ಮುಂದಿನ ಪೀಳಿಗೆಗೆ ಏನನ್ನು ಉಳಿಸುತ್ತೇವೆ?
ಏಳೇ ವರ್ಷಗಳಲ್ಲಿ ಪರ್ರಾದ ಅತ್ಯುತ್ತಮ ಎನಿಸುವ ಕಲ್ಲಂಗಡಿ ಹಣ್ಣುಗಳು ಮರೆಯಾಗಿದ್ದವು. ಮನುಷ್ಯರಲ್ಲಿ ಪೀಳಿಗೆಯು ಸಾಮಾನ್ಯವಾಗಿ 25 ವರ್ಷಕ್ಕೆ ಬದಲಾಗುತ್ತದೆ. ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವಾಗ ನಾವು ಏನು ತಪ್ಪು ಮಾಡಿದ್ದೇವೆ ಎಂದು ತಿಳಿಯಲು ನಮಗೆ 200 ವರ್ಷ ಬೇಕಾಗುತ್ತದೆ.
ಮುಂದಿನ ಪೀಳಿಗೆಯನ್ನು ತರಬೇತುಗೊಳಿಸಲು ನಮ್ಮಲ್ಲಿನ ಅತ್ಯುತ್ತಮವಾದುದ್ದನ್ನು ವಿನಿಯೋಗಿಸದೆ ಇದ್ದರೆ, ಇದು ನಮಗೂ ಮುಂದೆ ಆಗುತ್ತದೆ. ನಾವು ಬೋಧನಾ ವೃತ್ತಿಗೆ ಉತ್ತಮರನ್ನು ಆಕರ್ಷಿಸಬೇಕು'.