ಬಿಜೆಪಿ ವಿರೋಧಿಸಿದರೆ, ಹಿಂದೂಗಳನ್ನು ವಿರೋಧಿಸಿದಂತೆ ಅಲ್ಲ: ಆರೆಸ್ಸೆಸ್
ಪಣಜಿ, ಫೆಬ್ರವರಿ 10: ಭಾರತೀಯ ಜನತಾ ಪಾರ್ಟಿಯನ್ನು ವಿರೋಧಿಸುವುದು ಹಿಂದೂಗಳನ್ನು ವಿರೋಧಿಸಿದಂತೆ ಅಲ್ಲ ಎಂದು ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ ಭಾನುವಾರ ಹೇಳಿದರು.
ಗೋವಾದ ದೋನಾ ಪೌಲಾದಲ್ಲಿ ನಡೆದ 'ವಿಶ್ವಗುರು ಭಾರತ' ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಜೆಪಿಯ ಪೋಷಕ ಸಂಸ್ಥೆಯಾದ ಆರೆಸ್ಸೆಸ್ ಈ ರೀತಿ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.
ಆರ್ ಎಸ್ ಎಸ್ ನಿಂದ ದೇಶದ ಮೊದಲ ಸೈನಿಕ ಶಾಲೆ
ಉಪನ್ಯಾಸದ ವೇಳೆ ಸಭಿಕರೊಬ್ಬರು, 'ಹಿಂದೂಗಳು ತಮ್ಮದೇ ಸಮುದಾಯಕ್ಕೆ ಏಕೆ ಶತ್ರುಗಳಾಗುತ್ತಿದ್ದಾರೆ?' ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. 'ಹಿಂದೂಗಳೇ ಹಿಂದೂ ಸಮುದಾಯದ ವೈರಿಗಳಾಗುತ್ತಿದ್ದಾರೆ, ಅಂದರೆ ಬಿಜೆಪಿ ಎಂದು ನಿಮ್ಮ ಪ್ರಶ್ನೆ ಹೇಳುತ್ತದೆ. ಹಿಂದೂ ಸಮುದಾಯ ಎಂದರೆ ಬಿಜೆಪಿ ಅಲ್ಲ' ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿದ್ದು, ಇದು ಮುಸ್ಲಿಮರೆಡೆಗೆ ತಾರತಮ್ಯ ಎಸಗುವಂತಿದೆ ಎಂದು ಅನೇಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂಗಳೇ ಹಿಂದೂಗಳಿಗೆ ವೈರಿಯಾಗುತ್ತಿದ್ದಾರಲ್ಲ ಎಂಬ ಪ್ರಶ್ನೆ ಕೇಳಲಾಗಿತ್ತು.
ಬಿಜೆಪಿ ವಿರೋಧ, ಹಿಂದೂ ವಿರೋಧಿಯಲ್ಲ
'ಬಿಜೆಪಿಯನ್ನು ವಿರೋಧಿಸುವುದು ಹಿಂದೂಗಳನ್ನು ವಿರೋಧಿಸಿದಂತೆ ಎಂದು ನಾವು ಭಾವಿಸಬಾರದು. ಅದೊಂದು ರಾಜಕೀಯ ತಿಕ್ಕಾಟ ಮತ್ತು ಅದು ಮುಂದುವರಿಯುತ್ತದೆ. ಅದನ್ನು ಹಿಂದೂಗಳಿಗೆ ಬೆಸೆಯಬಾರದು' ಎಂದು ಹೇಳಿದರು.
'ಹಿಂದೂ ವ್ಯಕ್ತಿ, ಮತ್ತೊಬ್ಬ ಹಿಂದೂ ಜತೆಗೇ ಸಂಘರ್ಷ ಮಾಡುತ್ತಾನೆ. ಏಕೆಂದರೆ ಅವರು ಅಲ್ಲಿ ಧರ್ಮ ಮರೆತಿರುತ್ತಾರೆ. ಛತ್ರಪತಿ ಶಿವಾಜಿ ಕೂಡ ತಮ್ಮದೇ ಕುಟುಂಬದಿಂದಲೇ ವಿರೋಧವನ್ನು ಎದುರಿಸಿದ್ದರು. ಎಲ್ಲಿ ಗೊಂದಲ ಮತ್ತು ಸ್ವಯಂ ಕೇಂದ್ರಿತ ವರ್ತನೆ ಇರುತ್ತದೆಯೋ ಅಲ್ಲಿ ವಿರೋಧವೂ ಇರುತ್ತದೆ' ಎಂದರು.
'ಸ್ವಾಮಿ ವಿವೇಕಾನಂದ ಅವರ ಹಿಂದುತ್ವ ಉತ್ತಮವಾಗಿತ್ತು, ವಿನಾಯಕ್ ಸಾವರ್ಕರ್ ಅವರ ಹಿಂದುತ್ವ ಸರಿಯಾಗಿರಲಿಲ್ಲ ಎಂದು ಅನೇಕರು ಹೇಳುತ್ತಾರೆ. ಅಂತಹ ಹೇಳಿಕೆಗಳಿಗೆ ಆಧಾರವೇನಿದೆ?' ಎಂದು ಪ್ರಶ್ನಿಸಿದರು.
ಉತ್ಸವ, ದೇವಸ್ಥಾನಗಳಲ್ಲಿ ಅವರೇ ಇರುತ್ತಾರೆ
'ಪಶ್ಚಿಮ ಬಂಗಾಳದ ಜಿಹಾದಿ ಆಡಳಿತಗಾರರು ತಾವು ಹಿಂದೂಗಳ ವಿರುದ್ಧ ಎಂದು ಹೇಳಿಕೊಳ್ಳುತ್ತಾರೆ. ಆದರೆ ದುರ್ಗಾ ಪೂಜೆಯ ಉತ್ಸವಗಳು ಬಂದಾಗ ಅವರೇ ಯಾವಾಗಲೂ ಮುಂಚೂಣಿಯಲ್ಲಿ ಇರುತ್ತಾರೆ. ಇದೇ ರೀತಿಯ ಪರಿಸ್ಥಿತಿ ಕೇರಳದಲ್ಲಿದೆ. ಅಲ್ಲಿ ಕಮ್ಯುನಿಸ್ಟರು ದೇವಸ್ಥಾನ ಸಮಿತಿಗಳ ಅಧ್ಯಕ್ಷರಾಗಲು ಬಯಸುತ್ತಾರೆ' ಎಂದು ಹೇಳಿದರು.
RSS ಭಾರತದ ಭಯೋತ್ಪಾದನಾ ಸಂಘಟನೆ ಎಂದಿದ್ದೇಕೆ ಅಂಬೇಡ್ಕರ್ ಮೊಮ್ಮಗ?
ಎಲ್ಲ ಧರ್ಮದವರೂ ಸಂಘ ಸೇರಬಹುದು
ಹಿಂದೂಗಳು ರಾಜಕೀಯದಾಚೆ ಬೆಳೆಯಬೇಕು ಎಂದು ಭಯ್ಯಾಜಿ, ಸಂಘಕ್ಕೆ ಎಲ್ಲಾ ಸಮುದಾಯಗಳ ಜನರನ್ನೂ ಆಹ್ವಾನಿಸುವುದಾಗಿ ಹೇಳಿದರು. ಸಂಘದ ಸಿದ್ಧಾಂತವನ್ನು ನಂಬುವ ಯಾರು ಬೇಕಾದರೂ ಸಂಘವನ್ನು ಸೇರಬಹುದು. ಅವರಿಗೆ ಅಲ್ಲಿ ಗೌರವಾನ್ವಿತ ಸ್ಥಾನ ನೀಡಲಾಗುತ್ತದೆಯೇ ವಿನಾ ಪ್ರತ್ಯೇಕ ಸ್ಥಾನವನ್ನಲ್ಲ ಎಂದರು.
'ಪ್ರತಿಯೊಬ್ಬರಿಗೂ ಸಂಘ ಹುದ್ದೆಯನ್ನು ನೀಡುತ್ತದೆ. ಸಂಘಕ್ಕೆ ಯಾರು ಸೇರ್ಪಡೆಯಾಗಲು ಬಯಸುತ್ತಾರೋ ಎಲ್ಲರನ್ನೂ ಸ್ವಾಗತಿಸುತ್ತೇವೆ. ನಾವು ಸಂಘ ಸೇರ್ಪಡೆಯಿಂದ ಹಿಂದೂಯೇತರರನ್ನು ಎಂದಿಗೂ ತಡೆದಿಲ್ಲ. ನಾವು ಹಿಂದೂಗಳ ಮೇಲೆ ಗಮನ ಹರಿಸಿದ್ದೇವೆ ಎನ್ನುವುದು ಸತ್ಯ. ಆದರೆ ಕ್ರೈಸ್ತ ಸಮುದಾಯ ಅಥವಾ ಮುಸ್ಲಿಂ ಸಮುದಾದವರು ಸಂಘದ ಸಿದ್ಧಾಂತವನ್ನು ಮೆಚ್ಚಿ ಬಂದರೆ ಅವರೂ ಕೂಡ ಅದನ್ನು ಸೇರಿಕೊಳ್ಳಬಹುದು' ಎಂದು ತಿಳಿಸಿದರು.
ಪ್ರತ್ಯೇಕ ಸ್ಥಾನ ಕೊಡುವುದಿಲ್ಲ
ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಅನೇಕ ಮುಸ್ಲಿಮರು ಆರೆಸ್ಸೆಸ್ ಸೇರಿದ್ದಾರೆ ಎಂದ ಅವರು, ಹಿಂದೂಯೇತರರು ಆರೆಸ್ಸೆಸ್ ಸೇರಿದಾಗ ಅವರು ಯಾವುದೇ ಹಿಂದೂ ಪಡೆಯುವಂತಹ ಹುದ್ದೆಗಳನ್ನು ಪಡೆದುಕೊಳ್ಳುತ್ತಾರೆ. ಅವರಿಗೆ ಪ್ರತ್ಯೇಕ ಹುದ್ದೆಯನ್ನೇನೂ ನೀಡುವುದಿಲ್ಲ. ಯಾರು ಸೇರುತ್ತಾರೋ ಅವರು ಗೌರವಾನ್ವಿತ ಸ್ಥಾನ ಪಡೆಯುತ್ತಾರೆ, ಆದರೆ ಪ್ರತ್ಯೇಕ ಸ್ಥಾನವನ್ನಲ್ಲ ಎಂದರು.
ನಾನು ಮುಸ್ಲಿಂ, ಪತ್ನಿ ಹಿಂದೂ ಮತ್ತು ನಮ್ಮ ಮಕ್ಕಳು ಭಾರತೀಯರು: ಶಾರುಖ್ ಖಾನ್
'ಸಂಘ ಸೇರಿದ ಬಳಿಕ 'ಭಾರತ್ ಮಾತಾ ಕಿ ಜೈ' ಎಂದು ಹೇಳಲು ನಿಮಗೆ ಮನಸ್ಸಿಲ್ಲ ಎಂದರೆ 'ಭಾರತ'ವನ್ನು ನೀವು ನಿಮ್ಮ ತಾಯಿಯೆಂದು ಪರಿಗಣಿಸುತ್ತಿಲ್ಲ, ಹೀಗಾಗಿ ನೀವು ಇಲ್ಲಿ ಇರಲು ಅರ್ಹರಲ್ಲ ಎಂದು ನಾವು ಹೇಳುತ್ತೇವೆ' ಎಂದು ತೀಕ್ಷ್ಣವಾಗಿ ನುಡಿದರು.