ತಂದೆಯ ಹಾದಿ ಮುಗಿಯಿತು! ಗೋವಾ ರಾಜಕೀಯ ನೋಡಿ ಭಾವುಕರಾದ ಪರಿಕ್ಕರ್ ಪುತ್ರ
ಪಣಜಿ, ಜುಲೈ 11: ಗೋವಾದಲ್ಲಿ ಕಳೆದ ರಾತ್ರಿಯಿಂದ ಆರಂಭವಾಗಿರುವ ರಾಜಕೀಯ ಬೃಹನ್ನಾಟಕದ ಕುರಿತು ವಿಷಾದ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ದಿ.ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್, 'ತಂದೆಯವರ ರಾಜಕೀಯ ಹಾದಿ ಮಾರ್ಚ್ 17ರಂದೇ ಅಂತ್ಯವಾಯಿತು' ಎಂದಿದ್ದಾರೆ.
"ರಾಜಕೀಯದಲ್ಲಿ ನಮ್ಮ ತಂದೆಯವರು ಉಳಿಸಿಕೊಂಡು ಬಂದಿದ್ದ ನಂಬಿಕೆಯ ಹಾದಿ ಮಾರ್ಚ್ 17 ರಂದೇ ಮುಗಿದುಹೋಯಿತು" ಎಂದು ಭಾವುಕರಾದ ಅವರು, ಗೋವಾದ 10 ಕಾಂಗ್ರೆಸ್ ಶಾಸಕರು ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಕ್ರಮವನ್ನು ಪರೋಕ್ಷವಾಗಿ ಖಂಡಿಸಿದರು.
ಕರ್ನಾಟಕದ ನಂತರ ಗೋವಾದಲ್ಲಿಯೂ ಕಾಂಗ್ರೆಸ್ಗೆ ಭಾರಿ ಆಘಾತ
"ಗೋವಾದ ರಾಜೀಯ ಬೆಳವಣಿಗೆಯನ್ನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಒಪ್ಪಿಕೊಳ್ಳುತ್ತಾರೆಯೇ?" ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಕೇವಲ ಕಾಲವೇ ಅಕ್ಕೆ ಉತ್ತರ ನೀಡುತ್ತದೆ" ಎಂದು ಒಗಟಾಗಿ ಹೇಳಿದರು.
'ನನ್ನ ತಂದೆಯವರು ನಡೆದು ಬಂದ ರಾಜಕೀಯದ ವಿಶ್ವಾಸದ ಹಾದಿಯನ್ನು ಮತ್ತೆ ಸ್ಥಾಪಿಸಲು ನಾನು ಇಷ್ಟಪಡುತ್ತೇನೆ, ಆದರೆ ಅದರ ಪರಿಣಾಮ ಎದುರಿಸಬೇಕಾಗಬಹುದು ಎಂಬುದು ನನಗೆ ಗೊತ್ತಿದೆ. ಅದಕ್ಕೂ ನಾನು ಸಿದ್ಧ' ಎಂದು ಉತ್ಪಲ್ ಹೇಳಿದರು.
ಮಂಗಳವಾರ ಸಂಜೆ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಕಾಂಗ್ರೆಸ್ ನ ಒಟ್ಟು 15(40) ಶಾಸಕರಲ್ಲಿ 10 ಶಾಸಕರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು.
ಗೋವಾದಲ್ಲಿ ಮನೋಹರ್ ಪರಿಕ್ಕರ್ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲು
ಮಾಜಿ ಮುಖ್ಯಮಂತ್ರಿ, ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಕ್ಯಾನ್ಸರ್ ಕಾಯಿಲೆಯಿಂದ ಕಳೆದ ಮಾರ್ಚ್ 17 ರಂದು ಇಹಲೋಕ ತ್ಯಜಿಸಿದ್ದರು. ಅವರ ನಿಧನದ ನಂತರ ತೆರವಾದ ಪಣಜಿ ವಿಧಾನಸಭಾ ಕ್ಷೇತ್ರಕ್ಕೆ ಉತ್ಪಲ್ ಅವರನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊನೆಯ ಕ್ಷಣದ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಯ ಸಿದ್ಧಾರ್ಥ್ ಕುಂಕೋಲಿಯೆಂಕರ್ ಅವರಿಗೆ ಟಿಕೆಟ್ ನೀಡಿತ್ತು. ಆದರೆ ಕಾಂಗ್ರೆಸ್ ನ ಅಟಾನಾಸಿಯೋ ಮೊನ್ಸೆರಟ್ಟ್ ಅವರ ವಿರುದ್ಧ 1775 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸೋಲುಂಡಿದ್ದರು.