ಪಂಚಭೂತಗಳಲ್ಲಿ ಲೀನವಾದ ಮನೋಹರ್ ಪರಿಕ್ಕರ್
ಪಣಜಿ, ಮಾರ್ಚ್ 18 : ಗೋವಾ ಮುಖ್ಯಮಂತ್ರಿ, ಬಿಜೆಪಿ ನಾಯಕ ಮನೋಹರ್ ಪರಿಕ್ಕರ್ ಪಂಚಭೂತಗಳಲ್ಲಿ ಲೀನವಾದರು. ಪಣಜಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನಡೆಯಿತು.
ಸೋಮವಾರ ಸಂಜೆ ಪಣಜಿಯ ಮೀರಾಮಾರ್ ಬೀಚ್ ಸಮೀಪ ಮನೋಹರ್ ಪರಿಕ್ಕರ್ ಅವರ ಅಂತ್ಯಕ್ರಿಯೆ ನಡೆಯಿತು. ಪುತ್ರ ಚಿತೆಗೆ ಅಗ್ನಿಸ್ಪರ್ಶವನ್ನು ಮಾಡಿದರು. ಗೌಡ ಸಾರಸ್ವತ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಯಿತು.
ಮನೋಹರ್ ಪರಿಕ್ಕರ್ ಅವರ ಅಂತಿಮ ದರ್ಶನ ಪಡೆದ ಪ್ರಧಾನಿ ಮೋದಿ
ಕ್ಯಾನ್ಸರ್ನಿಂದ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ ಮೋನೊಹರ್ ಪರಿಕ್ಕರ್ ಅವರು (63) ಭಾನುವಾರ ರಾತ್ರಿ ವಿಧಿವಶರಾಗಿದ್ದರು. ನೂರಾರು ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಸರಳತೆಯ ಪ್ರತೀಕವಾಗಿದ್ದ ಪರಿಕ್ಕರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಹುಬ್ಬಳ್ಳಿ ನನಗೆ ಎರಡನೇ ತವರು ಮನೆ ಇದ್ದಂತೆ ಎಂದಿದ್ದ ಪರಿಕ್ಕರ್
ಸೋಮವಾರ ಬೆಳಗ್ಗೆ ಮನೋಹರ್ ಪರಿಕ್ಕರ್ ಅವರ ಪಾರ್ಥಿವ ಶರೀರವನ್ನು ಪಂಜಿಮ್ನ ಬಿಜೆಪಿ ಕಚೇರಿಯಲ್ಲಿ ಒಂದೂವರೆ ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಕಲಾ ಅಕಾಡೆಮಿಗೆ ತೆಗೆದುಕೊಂಡು ಹೋಗಲಾಯಿತು.
ಸಾವಿನ ಪಕ್ಕದಲ್ಲೇ ಕೂತು ಕೊನೆಯ ಬಾರಿ ಫೈಲ್ ಗೆ ಸಹಿ ಮಾಡಿದ್ದ ಪರಿಕ್ಕರ್!
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ವಿವಿಧ ಕೇಂದ್ರ ಸಚಿವರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಅಂತಿಮ ನಮನ ಸಲ್ಲಿಸಿ, ಭಾವುಕರಾದರು.
ಅಂತಿಮ ನಮನ ಸಲ್ಲಿಸಿದ ಮೋದಿ
ಪಣಜಿಯ ಕಲಾ ಅಕಾಡೆಮಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮನೋಹರ್ ಪರಿಕ್ಕರ್ ಅವರಿಗೆ ಅಂತಿನ ನಮನ ಸಲ್ಲಿಸಿದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಕೇಂದ್ರ ಸಚಿವರಿಂದ ಅಂತಿಮ ನಮನ
ಕೇಂದ್ರ ಸಚಿವ ನಿತಿನ್ ಗಡ್ಕರಿ, ಸ್ಮೃತಿ ಇರಾನಿ ಸೇರಿದಂತೆ ಹಲವರು ಕಲಾ ಅಕಾಡೆಮಿಗೆ ಆಗಮಿಸಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಪಾರ್ಥಿವ ಶರೀರದ ಮೆರವಣಿಗೆ
ಕಲಾ ಅಕಾಡೆಮಿಯಿಂದ ಸಂಜೆ 4 ಗಂಟೆಗೆ ಪಾರ್ಥಿವ ಶರೀರದ ಮೆರವಣಿಗೆಯನ್ನು ಆರಂಭಿಸಲಾಯಿತು. ಸೇನಾ ವಾಹನದಲ್ಲಿ ಮೀರಾಮಾರ್ ಬೀಚ್ಗೆ ಪಾರ್ಥಿವ ಶರೀರ ತರಲಾಯಿತು. ಈ ಸಂದರ್ಭದಲ್ಲಿ ನೂರಾರು ಜನರು ಆಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
ಚಿತೆಗೆ ಅಗ್ನಿ ಸ್ಪರ್ಶ
ಮೀರಾಮಾರ್ ಬೀಚ್ನಲ್ಲಿ ಪಾರ್ಥಿವ ಶರೀರಕ್ಕೆ ಮೊದಲು ಗೋವಾ ಮತ್ತು ಕೇಂದ್ರ ಸರ್ಕಾರದ ಕಡೆಯಿಂದ ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ಮನೋಹರ್ ಪರಿಕ್ಕರ್ ಪುತ್ರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.