ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕರ್ ಜೀವನದ ಹೆಜ್ಜೆ ಗುರುತುಗಳು
ಗೋವಾ ಎಂಬ ಪುಟ್ಟ ರಾಜ್ಯದ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಮನೋಹರ್ ಪರಿಕರ್ (63) ಭಾನುವಾರ ನಿಧನರಾಗಿದ್ದಾರೆ. ಅವರ ಜೀವನದ ಪ್ರಮುಖ ಘಟ್ಟಗಳನ್ನು ಕಾಲಾನುಕ್ರಣಿಕೆಯಲ್ಲಿ ಇಲ್ಲಿ ನೀಡಲಾಗಿದೆ.
ಡಿಸೆಂಬರ್ 13, 1955: ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಮಧ್ಯಮ ವರ್ಗದ ಕುಟುಂಬದಲ್ಲಿ ಗೋಪಾಲಕೃಷ್ಣ ಮತ್ತು ರಾಧಾ ಬಾಯಿ ದಂಪತಿ ಮಗನಾಗಿ ಉತ್ತರ ಗೋವಾದ ಮಾಪುಸದಲ್ಲಿ ಜನನ.
ಮನೋಹರ್ ಪರಿಕರ್ ನಿಧನ ಸುದ್ದಿಗೆ ಯಾರು, ಏನು ಹೇಳಿದರು?
ಆರೆಸ್ಸೆಸ್ ನ ಪ್ರಾಂತ ಪ್ರಚಾರಕ್ ಡಿ.ನಾಡಕರ್ಣಿ ಅವರು ಪ್ರಭಾವ ಮನೋಹರ್ ಮೇಲೆ ಇತ್ತು. ಐಐಟಿಗೆ ಸಿದ್ಧತೆ ನಡೆಸುವಾಗಲೇ ಪರಿಕರ್ ರನ್ನು 'ಮುಖ್ಯ ಶಿಕ್ಷಕ್' ಮಾಡಲಾಗಿತ್ತು.
1973: ಐಐಟಿ ಬಾಂಬೆ ಸೇರ್ಪಡೆಯಾದರು. ಸಂಘದ ಪೊವೈ ಹಾಸ್ಟೆಲ್ ನ ಜವಾಬ್ದಾರಿ ಪರಿಕರ್ ಗೆ ನೀಡಲಾಗಿತ್ತು.
1978: ಮೆಟಲರ್ಜಿಕಲ್ ಎಂಜಿನಿಯರಿಂಗ್ ನಲ್ಲಿ ಬಿ.ಟೆಕ್., ಪದವಿ. ಮಾಪುಸದಲ್ಲಿ ವ್ಯಾಪಾರ ಮಾಡುತ್ತಲೇ ಆರೆಸ್ಸೆಸ್ ನ ಕೆಲಸವನ್ನೂ ಆರಂಭಿಸಿದರು.
ಜೂನ್ 2, 1979: ಮೇಧಾ ಕೊಟ್ನಿಸ್ ಜತೆಗೆ ವಿವಾಹ. ಈ ದಂಪತಿಗೆ ಉತ್ಪಲ್ -ಅಭಿಜಾತ್ ಎಂಬಿಬ್ಬರು ಮಕ್ಕಳು.
1981: ಆರೆಸ್ಸೆಸ್ ಮಾಪುಸ ಘಟಕದ ಸಂಘ್ ಚಾಲಕ್ ಆದರು.
ಶಿಸ್ತು, ಪ್ರಗತಿಪರತೆ, ಲಿಂಗ ಸಮಾನತೆ, ಕಾನೂನಿನ ಮುಂದೆ ಎಲ್ಲರೂ ಸಮಾನ, ರಾಷ್ಟ್ರೀಯತೆ ಮತ್ತು ಸಾಮಾಜಿಕ ಜವಾಬ್ದಾರಿ ಕಲಿತದ್ದೇ ಆರೆಸ್ಸೆಸ್ ನಿಂದ ಎಂದು ತಮ್ಮ ಹಿನ್ನೆಲೆ ಬಗ್ಗೆ ಮನೋಹರ್ ಪರಿಕರ್ ಹೇಳುತ್ತಿದ್ದರು.
ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ನಿಧನ
1988: ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷವನ್ನು ಅಸ್ತಿತ್ವದಲ್ಲಿ ಇಲ್ಲದಂತೆ ಮಾಡಲು ಸಂಘದಿಂದ ಬಿಜೆಪಿಗೆ ಮನೋಹರ್ ಪರಿಕರ್ ರನ್ನು ನಿಯೋಜನೆ ಮಾಡಲಾಯಿತು.
ಜೂನ್ 1991: ಉತ್ತರ ಗೋವಾ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧೆ ಮಾಡಿದರು. ಆ ಬಾರಿ ಕಾಂಗ್ರೆಸ್ ನ ಹರೀಶ್ ವಿರುದ್ಧ ಸೋತರು.
1994ರ ನವೆಂಬರ್ ನಲ್ಲಿ ಬಿಜೆಪಿಯಿಂದ ಪಣಜಿ ಕ್ಷೇತ್ರಕ್ಕೆ ಸ್ಪರ್ಧಿಸಿ ಮೊದಲ ಬಾರಿಗೆ ಗೋವಾ ವಿಧಾನಸಭೆಗೆ ಅಯ್ಕೆಯಾದರು.
ಅವರು ಹುಟ್ಟಿದ್ದು 13ನೇ ತಾರಿಕು. ಆ ಸಂಖ್ಯೆಯನ್ನು ಅದೃಷ್ಟ ಎಂದು ಭಾವಿಸಿದ್ದ ಅವರು ತಮ್ಮ ಕಚೇರಿ ವಾಹನದ ಸಂಖ್ಯೆ 1313 ಎಂದು ತೆಗೆದುಕೊಂಡಿದ್ದರು.
2000: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಕೆಲವೇ ತಿಂಗಳ ಮುಂಚೆ ಅವರ ಪತ್ನಿ ಕ್ಯಾನ್ಸರ್ ನಿಂದ ಸಾವನ್ನಪ್ಪಿದರು.
ಅಕ್ಟೋಬರ್ 24,2000: ಐಐಟಿಯಲ್ಲಿ ಓದಿಕೊಂಡು ಬಂದು ಮುಖ್ಯಮಂತ್ರಿಯಾದ ಮೊದಲ ವ್ಯಕ್ತಿ ಮನೋಹರ್ ಪರಿಕರ್ ಎಂಬ ಸಾಧನೆ ಮಾಡಿದರು
2001: ಐಐಟಿ ಬಾಂಬೆಯಿಂದ ವಿಶಿಷ್ಟ ಹಳೆ ವಿದ್ಯಾರ್ಥಿ ಎಂಬ ಪುರಸ್ಕಾರಕ್ಕೆ ಪಾತ್ರರಾದರು. ಅಷ್ಟರಲ್ಲಾಗಲೇ ಹೈಯರ್ ಸೆಕೆಂಡರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಒದಗಿಸುವ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತಂದಿದ್ದರು ಪರಿಕರ್
ಫೆಬ್ರವರಿ 27,2002: ರಾಜ್ಯ ವಿಧಾನಸಭೆ ವಿಸರ್ಜನೆ
ಜೂನ್ 5,2002: ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿ ಆಯ್ಕೆ
2004: ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ರಾಜ್ಯಕ್ಕೆ ತಂದು, ದಾಖಲೆ ಸಮಯದಲ್ಲಿ ಮೂಲ ಸೌಕರ್ಯ ಒದಗಿಸಿದ ಶ್ರೇಯ ಪಡೆದರು.
ಮಾರ್ಚ್ 2,2005: ನಾಲ್ವರು ಬಿಜೆಪಿ ಶಾಸಕರು ರಾಜೀನಾಮೆ ನೀಡಿದ ಮೇಲೆ ಬಹುಮತ ಕಳೆದುಕೊಂಡ ಸರಕಾರ
ಮುಖ್ಯಮಂತ್ರಿ ಆದ ನಂತರವೂ ಪರಿಕರ್ ಮಾಪುಸದಲ್ಲಿನ ತಮ್ಮ ಹಿರಿಯರ ಮನೆಯಲ್ಲೇ ವಾಸವಿದ್ದರು. ಅದು ಪಣಜಿಯಿಂದ 13 ಕಿ.ಮೀ. ದೂರದಲ್ಲಿತ್ತು.
ಮನೋಹರ್ ನಿಧನದ ನಂತರವೂ ಗೋವಾ ಬಿಜೆಪಿ ಸರ್ಕಾರ ಸ್ಥಿರ
ಸೆಪ್ಟೆಂಬರ್ 2009: ಸಂದರ್ಶನವೊಂದರಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರನ್ನು ಹಳಸಲು ಉಪ್ಪಿನಕಾಯಿಗೆ ಹೋಲಿಸಿ, ಅವರ ರಾಜಕೀಯ ಬದುಕು ಹೆಚ್ಚುಕಡಿಮೆ ಮುಗಿದು ಹೋಗಿದೆ ಎಂದಿದ್ದರು ಪರಿಕರ್.
ಮಾರ್ಚ್ 2012: ಮತ್ತೆ ಗೋವಾ ಮುಖ್ಯಮಂತ್ರಿ ಆಗಿ ಆಯ್ಕೆಯಾದರು. ಗೃಹ ಆಧಾರ್, ಲಾಡ್ಲಿ ಲಕ್ಷ್ಮಿಯಂಥ ಜನಪ್ರಿಯ ಯೋಜನೆಗಳನ್ನು ಘೋಷಿಸಿದರು.
ಸೆಪ್ಟೆಂಬರ್ 2012: ಶಾ ಆಯೋಗದ ವರದಿಯಲ್ಲಿ ಬಹುಕೋಟಿ ಹಗರಣದ ಆರೋಪ ಕೇಳಿಬಂದಾಗ ಗಣಿಗಾರಿಕೆ ಚಟುವಟಿಕೆಯನ್ನೇ ಗೋವಾದಲ್ಲಿ ನಿಷೇಧಿಸಿದರು.
ಜನವರಿ 2013: ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಹುದ್ದೆಗೆ ಸಾರ್ವಜನಿಕವಾಗಿ ಪ್ರಸ್ತಾವ ಮಾಡಿದ ಮೊದಲ ಬಿಜೆಪಿ ಮುಖ್ಯಮಂತ್ರಿ. ಜತೆಗೆ ಪಣಜಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆಯೋಜಿಸಿದರು. ಅಲ್ಲಿ ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ಮೋದಿ ಅವರನ್ನು ಘೋಷಿಸಲಾಯಿತು. ಅದರ ಪರಿಣಾಮವೇ ಪ್ರಧಾನಿ ಅಭ್ಯರ್ಥಿಯೂ ಆದರು ಮೋದಿ.
ನವೆಂಬರ್ 2014: ದೇಶದ ರಕ್ಷಣಾ ಸಚಿವರನ್ನಾಗಿ ಪರಿಕರ್ ರನ್ನು ನರೇಂದ್ರ ಮೋದಿ ನೇಮಿಸಿದರು.
ನವೆಂಬರ್ 2014: ಉತ್ತರಪ್ರದೇಶದಿಂದ ಪರಿಕರ್ ರಾಜ್ಯಸಭೆಗೆ ಆಯ್ಕೆಯಾದರು.
ಸೆಪ್ಟೆಂಬರ್ 26, 2016: ಉರಿ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಗಡಿ ನಿಯಂತ್ರಣ ರೇಖೆ ಆಚೆಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿತು.
ಮಾರ್ಚ್, 2017: ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ನಾಲ್ಕನೇ ಬಾರಿಗೆ ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಫೆಬ್ರವರಿ 2018: ಮನೋಹರ್ ಪರಿಕರ್ ಅವರಿಗೆ ಮೇದೋಜ್ಜೀರಕ ಗ್ರಂಥಿ ಸಮಸ್ಯೆ ಇರುವುದು ಪತ್ತೆಯಾಯಿತು.
ಮಾರ್ಚ್ 17, 2019: ಮನೋಹರ್ ಪರಿಕರ್ ನಿಧನ