ಪಣಜಿಯಿಂದ ಬಿಜೆಪಿ ಟಿಕೆಟ್ ಇಲ್ಲ: ಉತ್ಪಲ್ ಪರಿಕ್ಕರ್ ಹೇಳಿದ್ದೇನು?
ಪಣಜಿ, ಏ.29: ಗೋವಾದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕರ್ ಪುತ್ರ ಉತ್ಪಲ್ ಪರಿಕ್ಕರ್ಗೆ ಪಣಜಿಯಿಂದ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದೆ. ಈ ಕುರಿತು ಉತ್ಪಲ್ ಪರಿಕ್ಕರ್ ಹೇಳಿಕೆ ನೀಡಿದ್ದಾರೆ.
ನಮ್ಮ ತಂದೆ ಎಂದೂ ನಾನು ರಾಜಕೀಯಕ್ಕೆ ಬರುವುದನ್ನು ಬಯಸಿರಲಿಲ್ಲ, ಅದು ಕುಟುಂಬ ಪ್ರಭುತ್ವ ಆಗಬಾರದು ಎನ್ನುವುದು ಕೂಡ ಅವರ ಅಭಿಪ್ರಾಯವಾಗಿತ್ತು.
ಪಣಜಿ ಉಪ ಚುನಾವಣೆ : ಪರಿಕ್ಕರ್ ಪುತ್ರನಿಗಿಲ್ಲ ಬಿಜೆಪಿ ಟಿಕೆಟ್
ನಾನು ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತೇನೆ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತೋ ಅದಕ್ಕೆ ನಾನು ಬದ್ಧ ಎಂದು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ. ಹಾಗಾಗಿ ಪಕ್ಷ ಯಾರಿಗೆ ಟಿಕೆಟ್ ನೀಡಿದೆ ಅವರ ಪರವಾಗಿ ನಾನು ಕೆಲಸ ಮಾಡುತ್ತೇನೆ ಎಂದರು.
ಪಣಜಿಯಿಂದ ಉತ್ಪಲ್ ಪರಿಕ್ಕರ್ಗೆ ಬಿಜೆಪಿ ಟಿಕೆಟ್ ನೀಡುತ್ತದೆಯೋ ಇಲ್ಲವೋ ಎನ್ನುವ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ. ಗೋವಾ ರಾಜ್ಯದ ಪಣಜಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಭಾನುವಾರ ಸಂಜೆ ಬಿಜೆಪಿ ಘೋಷಣೆ ಮಾಡಿದೆ. ಆದರೆ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರಿಗೆ ಟಿಕೆಟ್ ತಪ್ಪಿದೆ.
ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕರ್ನಾಟಕದ ಚಿಂಚೋಳಿ ಕ್ಷೇತ್ರದ ಅಭ್ಯರ್ಥಿ ಅವಿನಾಶ್ ಜಾಧವ್ ಹಾಗೂ ಕುಂದಗೋಳದ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಸಿದ್ಧಾರ್ಥ್ ಕುಂಕಲೇನಕರ್ ಅವರಿಗೆ ಪಣಜಿ ಉಪ ಚುನಾವಣೆಯ ಟಿಕೆಟ್ ನೀಡಲಾಗಿದೆ.
ಸಿದ್ಧಾರ್ಥ್ ಕುಂಕಲೇನಕರ್ ಅವರು ಈ ಹಿಂದೆ ಎರಡು ಬಾರಿ ಪಣಜಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ ಕೇಂದ್ರ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಗೋವಾ ರಾಜಕಾರಣಕ್ಕೆ ಮರಳಲು ನಿರ್ಧರಿಸಿದ್ದರು.
ಹೀಗಾಗಿ ಸಿದ್ಧಾರ್ಥ್ ಕುಂಕಲೇನಕರ್ ಅವರು 2017 ಮೇ 10ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ಪಣಜಿ ಉಪ ಚುನಾವಣೆಯಲ್ಲಿ ಜಯಗಳಿಸಿದ್ದ ಮನೋಹರ್ ಪರಿಕ್ಕರ್ ಅವರು ಮತ್ತೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು.
ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ನಿಧನದಿಂದ ತೆರವಾದ ಪಣಜಿ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 19ರಂದು ನಡೆಯಲಿದೆ. ಹೀಗಾಗಿ ಬಿಜೆಪಿಯು ಉತ್ಪಲ್ ಪರಿಕ್ಕರ್ ಅವರಿಗೆ ಟಿಕೆಟ್ ನೀಡುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅಂತಿಮವಾಗಿ ಸಿದ್ಧಾರ್ಥ್ ಕುಂಕಲೇನಕರ್ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿದೆ.