ಭಾರಿ ಮಳೆ: ಕರ್ನಾಟಕ-ಗೋವಾ ರೈಲು ಸಂಚಾರ ಸ್ಥಗಿತ
ಪಣಜಿ, ಜುಲೈ 24: ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ-ಗೋವಾ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕರ್ನಾಟಕ-ಗೋವಾ ಗಡಿ ಪ್ರದೇಶಗಳಲ್ಲಿ ಹಲವೆಡೆ ಭೂ ಕುಸಿತ ಉಂಟಾಗಿದೆ. ಹೀಗಾಗಿ ಎರಡೂ ರಾಜ್ಯಗಳ ನಡುವೆ ರೈಲು ಸಂಚಾರ ಸ್ಥಗಿತಗೊಂಡಿದೆ.
ಮಹಾರಾಷ್ಟ್ರದ ರತ್ನಗಿರಿ ಬಳಿಯ ವಶಿಷ್ಟ ನದಿ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಮಂಗಳೂರು ಜಂಕ್ಷನ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ರೈಲಿನ ಮಾರ್ಗವನ್ನು ಬದಲಾಯಿಸಲಾಗಿತ್ತು. ಈ ರೈಲು ದೂಧ್ಸಾಗರ್-ಸೊನಾಲಿಮ್ ನಡುವೆ ಶುಕ್ರವಾರ ಮುಂಜಾನೆ ಹಳಿ ತಪ್ಪಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯಾದ್ಯಂತ ಅಬ್ಬರದ ಮಳೆ, ಒಟ್ಟು 7 ಜಿಲ್ಲೆಗಳಿಗೆ ರೆಡ್ ಅಲರ್ಟ್
ಹುಬ್ಬಳ್ಳಿ ವಿಭಾಗದ ದೂಧ್ಸಾಗರ್ ಮತ್ತು ಸೊನಾಲಿಮ್ , ಕಾರಂಜೋಲ್ ಮತ್ತು ದೂಧ್ಸಾಗರ್ ಮಾರ್ಗದ ಗುಡ್ಡಗಾಡು ಪ್ರದೇಶದಲ್ಲಿ ಶುಕ್ರವಾರ ಭೂಕುಸಿತ ಸಂಭವಿಸಿತ್ತು. ನಿರಂತರ, ಧಾರಾಕಾರ ಮಳೆಯ ಪರಿಣಾಮ ಬೆಳಗಾವಿ ಹಾಗೂ ಕರ್ನಾಟಕ-ಮಹಾರಾಷ್ಟ್ರ ಗಡಿಗಳಲ್ಲಿ ಬೃಹತ್ ಪ್ರಮಾಣದ ಹಾನಿ ಸಂಭವಿಸಿದ್ದು, ಎನ್ ಹೆಚ್-4 ಹಾಗೂ ಎನ್ ಹೆಚ್-4ಎ ರಸ್ತೆಗಳೂ ಸೇರಿ ಹಲವು ರಸ್ತೆಗಳು ಜಲಾವೃತಗೊಂಡಿದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಪುಣೆ ಹಾಗೂ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ಎನ್ ಹೆಚ್-4 ನಲ್ಲಿ ಕರ್ನಾಟಕ-ಮಹಾರಾಷ್ಟ್ರದ ಗಡಿ ಪ್ರದೇಶದ ನಿಪ್ಪಾಣಿ ಹಾಗೂ ಬೆಳಗಾವಿ ಬಳಿಯ ಸಂಕೇಶ್ವರ, ವಂತ್ಮುರಿಗಳಲ್ಲಿ ರಸ್ತೆ ಕಲಾವೃತಗೊಂಡಿದ್ದ ಕಾರಣ ಶುಕ್ರವಾರ ಬೆಳಿಗ್ಗೆಯಿಂದಲೂ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಸಂಕೇಶ್ವರದ ಬಳಿ ಇರುವ ಎನ್ ಹೆಚ್-4 ರಸ್ತೆ ಕೆರೆಯಂತಾಗಿದ್ದು ಎರಡೂ ಪಾರ್ಶ್ವಗಳಲ್ಲಿ ವಾಹನಗಳು ಸಿಲುಕಿಕೊಂಡಿದ್ದವು. ಈ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರೆದಿರುವ ಪರಿಣಾಮ ಈ ಭಾಗದಲ್ಲಿ ಸಂಚರಿಸುವ ಮಂದಿ ಪರ್ಯಾಯ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.
ಕೃಷ್ಣ ನದಿ ಹಾಗೂ ಅದರ ಉಪನದಿಗಳಿರುವ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜನತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಗಡಿ ಭಾಗದಲ್ಲಿ ಕೃಷ್ಣಾ ನದಿಯ ಮಿತಿಮೀರಿದ ಹರಿವಿನ ಪರಿಣಾಮವಾಗಿ 8 ಸೇತುವೆಗಳು ಮುಳುಗಿದ್ದು, ಅಧಿಕಾರಿಗಳು ಸಂಚಾರ ಮಾರ್ಗವನ್ನು ಬದಲಾವಣೆ ಮಾಡಿದ್ದಾರೆ.
ಗೋವಾ ಮೂಲಕ ಬೆಳಗಾವಿಗೆ ಹಾಗೂ ಕ್ಯಾಸಲ್ರಾಕ್ ಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗಗಳೂ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದು, ಚೋರ್ಲಾ ಹಾಗೂ ಎನ್ ಹೆಚ್-4ಎ ಮೂಲಕ ಬೆಳಗಾವಿಯಿಂದ ಗೋವಾಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗಗಳೂ ಸಹ ಹಾನಿಗೊಳಗಾಗಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.
Recommended Video
ಬೆಳಗಾವಿ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ನೀರನ್ನು ಹೊರಹಾಕುವುದಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಇದೇ ವೇಳೆ ಬೆಳಗಾವಿ ಬಳಿಯ ವಾಘ್ವಾಡೆಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯೋರ್ವ ಈಜಿ ಗ್ರಾಮಸ್ಥರ ನೆರವಿನಿಂದ ಹೊರ ಬಂದಿದ್ದಾರೆ.