ಗೋವಾ; ಉತ್ಪಲ್ ಪರಿಕ್ಕರ್ಗೆ ಬೆಂಬಲ ಘೋಷಿಸಿದ ಕಾಂಗ್ರೆಸ್ ನಾಯಕ
ಪಣಜಿ, ಜನವರಿ 24; ಗೋವಾ ವಿಧಾನಸಭೆ ಚುನಾವಣೆ ಫೆಬ್ರವರಿ 14ರಂದು ನಡೆಯಲಿದೆ. ಪಣಜಿ ಕ್ಷೇತ್ರದಿಂದ ಉತ್ಪಲ್ ಪರಿಕ್ಕರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರೊಬ್ಬರು ದಿ. ಮನೋಹರ್ ಪರಿಕ್ಕರ್ ಪುತ್ರನಿಗೆ ಬೆಂಬಲ ನೀಡಲಿದ್ದಾರೆ.
ಪಣಿಜಿ ಮಾಜಿ ಮೇಯರ್ ಮತ್ತು ಕಾಂಗ್ರೆಸ್ ನಾಯಕ ಉದಯ್ ಮಡಕೈಕರ್ ಉತ್ಪಲ್ ಪರಿಕ್ಕರ್ಗೆ ಬೆಂಬಲ ನೀಡುವುದಾಗಿ ಸೋಮವಾರ ಘೋಷಣೆ ಮಾಡಿದ್ದಾರೆ. ಉದಯ್ ಮಡಕೈಕರ್ ಪಣಜಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಎಲ್ವಿನ್ ಗೋಮ್ಸ್ ಅಭ್ಯರ್ಥಿಯಾಗಿಸಿದೆ.
ಗೋವಾ: ಟಿಎಂಸಿ ಸೇಡಿನ ರಾಜಕೀಯ, ಕಾಂಗ್ರೆಸ್, ಜಿಎಫ್ಪಿ ಟಾರ್ಗೆಟ್!
ಕಳೆದ ವಾರ ಉತ್ಪಲ್ ಪರಿಕ್ಕರ್ಗೆ ಪಣಜಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿತ್ತು. ಶುಕ್ರವಾರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದರು ಮತ್ತು ಉದಯ್ ಮಡಕೈಕರ್ ಭೇಟಿ ಮಾಡಿ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದರು.
ಉತ್ಪಲ್ ಪರಿಕ್ಕರ್ ಎದುರು ಶಿವಸೇನೆ ಅಭ್ಯರ್ಥಿ ಇಲ್ಲ!
ಪಣಜಿ ಕ್ಷೇತ್ರದ ಚುನಾವಣಾ ಚಿತ್ರಣ ಅಂತಿಮಗೊಳ್ಳುತ್ತಿದ್ದು ಬಿಜೆಪಿಯಿಂದ ಹಾಲಿ ಶಾಸಕ ಅಟನಸಿಯೋ ಮೊನ್ನೆರ್ರೇಟ್ ಅಭ್ಯರ್ಥಿ. ಉತ್ಪಲ್ ಪರಿಕ್ಕರ್ ಪಕ್ಷೇತರ ಅಭ್ಯರ್ಥಿಯಾದರೆ ಕಾಂಗ್ರೆಸ್ನಿಂದ ಎಲ್ವಿನ್ ಗೋಮ್ಸ್ ಕಣಕ್ಕಿಳಿಯಲಿದ್ದಾರೆ.
ಗೋವಾ; ಬಿಜೆಪಿ ಮುಂದೆ ಒಂದು ಆಯ್ಕೆ ಇಟ್ಟ ಉತ್ಪಲ್ ಪರಿಕ್ಕರ್!
ಉತ್ಪಲ್ ಪರಿಕ್ಕರ್ ಮಾತನಾಡಿ, "ಪಣಜಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸಿರುವ ನನಗೆ ಹಲವು ಪಕ್ಷಗಳ ಮುಖಂಡರ, ಸಮಾಜಗಳ ಬೆಂಬಲ ವ್ಯಕ್ತವಾಗಿದೆ" ಎಂದು ಹೇಳಿದ್ದರು. ಚುನಾವಣೆಗಾಗಿ ಅವರು ಪ್ರಚಾರ ಕಾರ್ಯವನ್ನು ಸಹ ನಡೆಸುತ್ತಿದ್ದಾರೆ.
ಉದಯ್ ಮಡಕೈಕರ್ ಪಣಜಿ ಶಾಸಕ ಅಟನಸಿಯೋ ಮೊನ್ನೆರ್ರೇಟ್ ಕಟ್ಟಾ ಬೆಂಬಲಿರಾಗಿದ್ದರು. ಆದರೆ 2021ರ ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ಸೇರಿದ್ದರು. ಹಿಂದೆ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದ ಉದಯ್ ಮಡಕೈಕರ್ ಮೊನ್ನೆರ್ರೇಟ್ ಜೊತೆ ಗೋವಾ ಫಾರ್ವರ್ಡ್ ಪಕ್ಷಕ್ಕೆ ಹೋಗಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪಣಜಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಪಕ್ಷ ಎಲ್ವಿನ್ ಗೋಮ್ಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿತು. ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಎಲ್ವಿನ್ ಗೋಮ್ಸ್ ಕಾಂಗ್ರೆಸ್ ಸೇರಿದ್ದು, ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ಪಲ್ಗೆ ಸಿ. ಟಿ. ರವಿ ಮನವಿ; ಬಿಜೆಪಿ ಟಿಕೆಟ್ ಕೈ ತಪ್ಪಿದ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿರುವ ಉತ್ಪಲ್ ಪರಿಕ್ಕರ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಮನವಿಯೊಂದನ್ನು ಮಾಡಿದ್ದಾರೆ.
"ತಂದೆ ಮನೋಹರ್ ಪರಿಕ್ಕರ್ ಕನಸುಗಳನ್ನು ನನಸುಗೊಳಿಸಲು ತಮ್ಮ ತೀರ್ಮಾನವನ್ನು ಪುನರ್ ಪರಿಶೀಲನೆ ಮಾಡಿ" ಎಂದು ಸಿ. ಟಿ. ರವಿ ಮನವಿ ಮಾಡಿದ್ದಾರೆ. ಉತ್ಪಲ್ ಪರಿಕ್ಕರ್ ಪಣಜಿ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಬಳಿಕ ಬಿಜೆಪಿ ತೊರೆದಿದ್ದರು ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದರು.
"ಮನೋಹರ್ ಪರಿಕ್ಕರ್ ಸದಾ ಬಿಜೆಪಿಯ ಗೆಲುವಿಗಾಗಿ ಕೆಲಸ ಮಾಡಿದರು. ಉತ್ಪಲ್ ಪರಿಕ್ಕರ್ಗೆ ನಾನು ಮನವಿ ಮಾಡುತ್ತೇನೆ. ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಿ ತಂದೆಯ ಕನಸು ನನಸು ಮಾಡಬೇಕು ಎಂದು ಮನವಿ ಮಾಡುವೆ" ಎಂದು ಸಿ. ಟಿ. ರವಿ ಹೇಳಿದರು.
"ಬಿಜೆಪಿ ಮಾತ್ರ ಗೋವಾದಲ್ಲಿ ಸ್ಥಿರ ಮತ್ತು ಸದೃಢ ಸರ್ಕಾರ ನೀಡಲು ಸಾಧ್ಯ. ರಾಜ್ಯದ ಚುನಾವಣಾ ಪ್ರಚಾರಕ್ಕಾಗಿ ಗೃಹ ಸಚಿವ ಅಮಿತ್ ಶಾ ಜನವರಿ 30ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ" ಎಂದು ಸಿ. ಟಿ. ರವಿ ತಿಳಿಸಿದರು.
ಪಣಜಿ ಕ್ಷೇತ್ರದ ಟಿಕೆಟ್ ಕೈ ತಪ್ಪಿದರೂ ಬಿಜೆಪಿ ಹೈ ಕಮಾಂಡ್ ಉತ್ಪಲ್ ಪರಿಕ್ಕರ್ಗೆ ಎರಡು ಆಯ್ಕೆಗಳನ್ನು ನೀಡಿತ್ತು. ಬೇರೆ ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾದರೆ ಟಿಕೆಟ್ ನೀಡಲು ಮುಂದಾಗಿತ್ತು. ಆದರೆ ಉತ್ಪಲ್ ಎಲ್ಲಾ ಆಯ್ಕೆಗಳನ್ನು ತಿರಸ್ಕರಿಸಿ ಪಕ್ಷ ಬಿಡುವುದಾಗಿ ಘೋಷಣೆ ಮಾಡಿದ್ದರು.