ಚುನಾವಣಾ ಕಣದಿಂದ ಹಿಂದೆ ಸರಿದ ಗೋವಾದ ಕಾಂಗ್ರೆಸ್ ಹಿರಿಯ ನಾಯಕ!
ಪಣಜಿ, ಜನವರಿ 28; ಗೋವಾ ಕಾಂಗ್ರೆಸ್ನ ಹಿರಿಯ ನಾಯಕ, 11 ಬಾರಿ ಗೆಲುವು ಸಾಧಿಸಿದ್ದ ಪ್ರತಾಪ್ ಸಿಂಗ್ ರಾಣೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಈ ಬಾರಿಯ ಚುನಾವಣೆಗೆ ಪೊರಿಯಂ ಕ್ಷೇತ್ರದಿಂದ ಪಕ್ಷ ಅವರಿಗೆ ಟಿಕೆಟ್ ನೀಡಿತ್ತು. ಆದರೆ ಪ್ರತಿಸ್ಪರ್ಧಿಯಾಗಿ ಸೊಸೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಬಿಜೆಪಿ ನಾಯಕ, ಆರೋಗ್ಯ ಸಚಿವ ವಿಶ್ವಜಿತ್ ರಾಣೆ ವಾಲ್ಪೊಯ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿ ಅವರ ಪತ್ನಿ ದಿವ್ಯ ವಿಶ್ವಜಿತ್ ರಾಣೆಗೆ ಪೊರಿಯಂ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಪತಿ, ಪತ್ನಿ ಇಬ್ಬರಿಗೂ ಬಿಜೆಪಿ ಟಿಕೆಟ್ ನೀಡಿದ್ದರಿಂದ ವಿಶ್ವಜಿತ್ ರಾಣೆ ತಂದೆ ಪ್ರತಾಪ್ ಸಿಂಗ್ ರಾಣೆ ಕಣದಿಂದ ಹಿಂದೆ ಸರಿದರು.
ಗೋವಾ ಚುನಾವಣೆ; ಕಣದಲ್ಲಿ ಐವರು ದಂಪತಿಗಳು!
87 ವರ್ಷದ ಪ್ರತಾಪ್ ಸಿಂಗ್ ರಾಣೆ ಪೊರಿಯಂ ಕ್ಷೇತ್ರದಿಂದ 11 ಬಾರಿ ಗೆಲುವು ಸಾಧಿಸಿದ್ದಾರೆ. ಗೋವಾದ ಅತಿ ದೀರ್ಘವಾದಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಸಹ ಅವರದ್ದಾಗಿದೆ. ಈ ಬಾರಿಯೂ ಕಣಕ್ಕಿಳಿಯಲು ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿತ್ತು. ಆದರೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಅವರು ಕಣದಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದಾರೆ.
ಗೋವಾ; ಕಾಂಗ್ರೆಸ್ ತೊರೆದು ಎನ್ಸಿಪಿ ಸೇರಿದ ಮಾಜಿ ಸಚಿವ
ವಿಶ್ವಜಿತ್ ರಾಣೆ ಅವರೇ ಪೊರಿಯಂ ಕ್ಷೇತ್ರದಿಂದ ತಂದೆಯ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಬಿಜೆಪಿ ವಾಲ್ಪೊಯ್ ಕ್ಷೇತ್ರದಲ್ಲಿ ಅವರಿಗೆ ಟಿಕೆಟ್ ನೀಡಿದೆ. ವಿಶ್ವಜಿತ್ ರಾಣೆ ಸಹ ಕಾಂಗ್ರೆಸ್ನಲ್ಲಿದ್ದರು. 2017ರ ಚುನಾವಣೆ ವೇಳೆ ಬಿಜೆಪಿ ಸೇರಿ ಗೆದ್ದು ಬಿಜೆಪಿ ಸರ್ಕಾರದಲ್ಲಿ ಸಚಿವರಾದರು.
ಗೋವಾ; ಬಿಜೆಪಿ ಆಡಳಿತ ವೈಫಲ್ಯ ಬಿಚ್ಚಿಟ್ಟ ಡಿ. ಕೆ. ಶಿವಕುಮಾರ್
2017ರ ಚುನಾವಣೆಯಲ್ಲಿ ಗೆದ್ದ ಸಾಲು ಸಾಲು ಕಾಂಗ್ರೆಸ್ ಶಾಸಕರು ಪಕ್ಷಾಂತರ ಮಾಡಿದರೂ ಪ್ರತಾಪ್ ಸಿಂಗ್ ರಾಣೆ ಕಾಂಗ್ರೆಸ್ನಲ್ಲಿಯೇ ಉಳಿದಿದ್ದರು. ಆದ್ದರಿಂದಲೂ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಪೊರಿಯಂ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು.
ಬಿಜೆಪಿ ಟಿಕೆಟ್ನಿಂದ ಕಣಕ್ಕಿಳಿಯುತ್ತಿರುವ ಸೊಸೆಗೆ ಸಹಕಾರ ನೀಡಲು ಪ್ರತಾಪ್ ಸಿಂಗ್ ರಾಣೆ ಕಣದಿಂದ ಹಿಂದೆ ಸರಿದಿದ್ದಾರೆ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ. ಕುಟುಂಬದ ಒತ್ತಡದ ಕಾರಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
45 ವರ್ಷಗಳಿಂದ ಪೊರಿಯಂ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪ್ರತಾಪ್ ಸಿಂಗ್ ರಾಣೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಕಾಂಗ್ರೆಸ್ಗೆ ಹಿನ್ನಡೆ ಉಂಟು ಮಾಡಿದೆ. 2021 ಡಿಸೆಂಬರ್ನಲ್ಲಿಯೇ ಕಾಂಗ್ರೆಸ್ ಕ್ಷೇತ್ರದಲ್ಲಿ ಪ್ರತಾಪ್ ಸಿಂಗ್ ರಾಣೆ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು.
ಟಿಕೆಟ್ ನೀಡಿದರೆ ಈ ಬಾರಿಯೂ ಸ್ಪರ್ಧೆ ಮಾಡುತ್ತೇನೆ ಎಂದು ಪ್ರತಾಪ್ ಸಿಂಗ್ ರಾಣೆ ಹೇಳಿದ್ದರು. ಪಕ್ಷ ಟಿಕೆಟ್ ಸಹ ನೀಡಿತ್ತು. ಆದರೆ ಬಿಜೆಪಿ ದಿವ್ಯ ವಿಶ್ವಜಿತ್ ರಾಣೆಗೆ ಪೊರಿಯಂ ಕ್ಷೇತ್ರದಿಂದ ಟಿಕೆಟ್ ನೀಡುವ ಮೂಲಕ ಕ್ಷೇತ್ರದ ಚುನಾವಣಾ ಚಿತ್ರಣವನ್ನೇ ಬದಲು ಮಾಡಿದೆ.
ಕಣದಿಂದ ಹಿಂದೆ ಸರಿದ ಟಿಎಂಸಿ ನಾಯಕ; ಗೋವಾದ ಫಟೋರ್ಡಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿದ್ದ ಲುಯಿಝನ್ಹೊ ಫಲೈರೊ ಶುಕ್ರವಾರ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಲುಯಿಝನ್ಹೊ ಫಲೈರೊ, "ನಾನು ಫಟೋರ್ಡಾ ಕ್ಷೇತ್ರದಿಂದ ಕಣದಿಂದ ಹಿಂದೆ ಸರಿಯವುದಾಗಿ ಘೋಷಣೆ ಮಾಡುತ್ತೇನೆ. ಯುವ ವಕೀಲರಿಗೆ ಬ್ಯಾಟನ್ ಹಸ್ತಾಂತರ ಮಾಡುತ್ತೇನೆ" ಎಂದು ಘೋಷಣೆ ಮಾಡಿದರು.
ಗೋವಾದ ಟಿಎಂಸಿ ಘಟಕದ ಉಪಾಧ್ಯಕ್ಷರು ಆಗಿರುವ ಲುಯಿಝನ್ಹೊ ಫಲೈರೊ ಮಹಿಳೆಯರ ಸಬಲೀಕರಣ ಪಕ್ಷದ ನೀತಿಯಾಗಿದೆ ಎಂದು ಘೋಷಣೆ ಮಾಡಿದರು. ಟಿಎಂಸಿ ಕ್ಷೇತ್ರಕ್ಕೆ ಸಿಯೋಲಾ ಅವಿಲಿಯಾ ವಾಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.