ಗೋವಾ ಚುನಾವಣೆ; ಪ್ರತಿ ಬೂತ್ನಲ್ಲಿ 500 ಮತ ಬಿಜೆಪಿ ಗುರಿ!
ಪಣಜಿ, ಡಿಸೆಂಬರ್ 02; ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ಬೂತ್ನಲ್ಲಿ 500 ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಪಡೆಯುವ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ. 2022ರ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
2022ರಲ್ಲಿ ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಪಂಜಾಬ್ ಜೊತೆಗೆ ಗೋವಾ ಸಹ ಸೇರಿದೆ. ರಾಜ್ಯದಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದೆ.
ಗೋವಾ ಚುನಾವಣೆ; ಪರಿಕ್ಕರ್ ಪುತ್ರನಿಗೆ ಬಿಜೆಪಿ ಟಿಕೆಟ್ ಸಿಗಲಿದೆಯೇ?
ಮುಂಬರುವ ಚುನಾವಣೆಗೆ ಬೂತ್ ಮಟ್ಟದಲ್ಲಿ ಪಕ್ಷದ ಅಲ್ಪಸಂಖ್ಯಾತ ಮೋರ್ಚಾವನ್ನು ಬಲಪಡಿಸಲು ಎರಡು ದಿನಗಳ ಕಾಲ ಸಭೆ ನಡೆಸಲಾಗಿದೆ. ಗೋವಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಸ್ತುವಾರಿ ಸೈಯದ್ ಯಾಸಿರ್ ಜಿಲಾನಿ ನೇತೃತ್ವದಲ್ಲಿ ಕಾರ್ಯತಂತ್ರವನ್ನು ರೂಪಿಸಲಾಗಿದೆ.
ಗೋವಾ ಚುನಾವಣೆ: 'ಇತ್ತೀಚೆಗೆ ಕೆಲವು ಪಕ್ಷ ಇಲ್ಲಿಗೆ ಬರುತ್ತಿದೆ', ಎಎಪಿ, ಟಿಎಂಸಿಗೆ ನಡ್ಡಾ ಟಾಂಗ್
ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ಬೂತ್ನಲ್ಲಿ 500 ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಪಡೆಯುವ ಗುರಿ ಬಿಜೆಪಿಯದ್ದು. ಇದನ್ನು ಮುಂದಿಟ್ಟುಕೊಂಡು ಬೂತ್ ಮಟ್ಟದಲ್ಲಿ ಅಲ್ಪಸಂಖ್ಯಾತ ಮೋರ್ಚಾವನ್ನು ಬಲಪಡಿಸಲು ಕಾರ್ಯತಂತ್ರವನ್ನು ಸಿದ್ಧಪಡಿಸಲಾಗಿದೆ.
ಗೋವಾ ಬಿಜೆಪಿ ನಾಯಕ ವಿಶ್ವಜಿತ್ ರಾಣೆ ಎಎಪಿ ಸೇರ್ಪಡೆ
ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬೂತ್ ಮಟ್ಟದಲ್ಲಿ ಮೋರ್ಚಾವನ್ನು ಬಲಪಡಿಸಲಾಗುತ್ತಿದೆ. ಪ್ರತಿ ಬೂತ್ನಲ್ಲಿ ಶೀಘ್ರದಲ್ಲೇ ಅಲ್ಪಸಂಖ್ಯಾತ ಮೋರ್ಚಾ ತಂಡಗಳನ್ನು ರಚನೆ ಮಾಡಲಾಗುತ್ತದೆ. ಈ ಕುರಿತು ಎಲ್ಲಾ ಜಿಲ್ಲಾಧ್ಯಕ್ಷರಿಗೆ ನಿರ್ದೇಶನಗಳನ್ನು ಸಹ ನೀಡಲಾಗಿದೆ.
ಪ್ರತಿ ಬೂತ್ನಲ್ಲಿ 500 ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಪಡೆಯುವ ಗುರಿಯೊಂದಿಗೆ ತಂಡ ಸಂಪೂರ್ಣ ಸಮರ್ಪಣೆಯೊಂದಿಗೆ ಕೆಲಸ ಮಾಡಲಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಸದಾನಂದ್ ಶೇಟ್ ತನವಾಡೆ ನಾಯಕತ್ವದಲ್ಲಿ ಮತ್ತೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ವಿಶ್ವಾದಲ್ಲಿ ಪಕ್ಷವಿದೆ.
ಗೋವಾ ರಾಜ್ಯದ ಮತದಾರರ ಪೈಕಿ ಶೇ 26ರಷ್ಟು ಅಲ್ಪಸಂಖ್ಯಾತರಿದ್ದಾರೆ. ವಿಶೇಷವಾಗಿ ಕ್ರಿಶ್ಚಿಯನ್ ಸಮುದಾಯದ ಮತಗಳನ್ನು ಸೆಳೆಯಲು ಪಕ್ಷಗಳು ತಂತ್ರ ರೂಪಿಸುತ್ತವೆ. 13 ವಿಧಾನಸಭಾ ಕ್ಷೇತ್ರಗಳಲ್ಲಿ ಕ್ರಿಶ್ಚಿಯನ್ನರು ಪ್ರಾಬಲ್ಯ ಹೊಂದಿದ್ದಾರೆ.
ಸಂಘಟನೆಗಾಗಿ ಬಿಜೆಪಿ ಗೋವಾವನ್ನು ಎರಡು ಜಿಲ್ಲೆ ಮತ್ತು 40 ಮಂಡಲಗಳಾಗಿ ವಿಭಜನೆ ಮಾಡಿದೆ. ಗೋವಾದ 40 ವಿಧಾನಸಭಾ ಸ್ಥಾನಗಳಲ್ಲಿ ಒಟ್ಟು 1,663 ಮತಗಟ್ಟೆಗಳಿವೆ. ಬಿಜೆಪಿ ಈ ಮತಗಟ್ಟೆಗಳನ್ನು 496 'ಶಕ್ತಿ ಕೇಂದ್ರ'ಗಳಾಗಿ ವಿಂಗಡಿಸಿದೆ.
ಕಾಂಗ್ರೆಸ್ ಜೊತೆ ಕೈ ಜೋಡಿಸಿದ ಜಿಎಫ್ಪಿ; ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್ಪಿ) ಮತ್ತು ಇತರ ಸಮಾನ ಮನಸ್ಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲಿದೆ.
ವಿಜಯ್ ಸರ್ದೇಸಾಯಿ ನೇತೃತ್ವದ ಜಿಎಫ್ಪಿ 2017ರಲ್ಲಿ ದಿ. ಮನೋಹರ್ ಪರಿಕಕ್ಕರ್ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿಗೆ ಸಹಕಾರ ನೀಡಿತ್ತು. ಆದರೆ ಈಗ ಕಾಂಗ್ರೆಸ್ ಜೊತೆ ಕೈ ಜೋಡಿಸಿದೆ.
ಎಐಸಿಸಿಯ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ವಿಜಯ್ ಸರ್ದೇಸಾಯಿ ಭೇಟಿ ಬಳಿಕ ಮುಂದಿನ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಘೋಷಣೆ ಮಾಡಿದರು. ರಾಜ್ಯದ ಪಕ್ಷೇತರ ಶಾಸಕ ಪ್ರಸಾದ್ ಗಾಂವ್ಕರ್ ಸಹ ರಾಹುಲ್ ಗಾಂಧಿ ಭೇಟಿ ಮಾಡಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.
"ಜಿಎಫ್ಪಿ ಮತ್ತು ಇತರ ಸಮಾನ ಮನಸ್ಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಪಕ್ಷ ಚುನಾವಣೆ ಎದುರಿಸಲಿದೆ. ಈ ಕುರಿತ ಅಂತಿಮ ತೀರ್ಮಾನವನ್ನು ಸ್ಥಳೀಯ ಮಟ್ಟದಲ್ಲಿ ಚರ್ಚೆ ನಡೆಸಿದ ಬಳಿಕ ನಿರ್ಧರಿಸಲಾಗುತ್ತದೆ" ಎಂದು ದಿನೇಶ್ ಗುಂಡೂರಾವ್ ಹೇಳಿದರು.
2017ರ ಚುನಾವಣೆಯಲ್ಲಿ ಕಾಂಗ್ರೆಸ್ 40 ವಿಧಾನಸಭಾ ಕ್ಷೇತ್ರಗಳ ಪೈಕಿ 17ರಲ್ಲಿ ಜಯಗಳಿಸಿತ್ತು. ಬಿಜೆಪಿ 13 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಆದರೆ ಜಿಎಫ್ಪಿ ಮತ್ತು ಎಂಜಿಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು.