ಶೂನ್ಯದಲ್ಲಿದ್ದ ಕಾಂಗ್ರೆಸ್ 11 ಸ್ಥಾನ ಗಳಿಸಿದೆ; ದಿನೇಶ್ ಗುಂಡೂರಾವ್
ಪಣಜಿ, ಮಾರ್ಚ್ 11; "ಗೋವಾದಲ್ಲಿ ನಮ್ಮ ಪಕ್ಷ ಅಧಿಕಾರ ಹಿಡಿಯದ ನಿರಾಸೆಯಿದ್ದರೂ ಪಕ್ಷದ ಸಾಧನೆ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ" ಎಂದು ಗೋವಾ ಚುನಾವಣೆಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಗೋವಾದ 40 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಗುರುವಾರ ಮತ ಎಣಿಕೆ ನಡೆದಿದ್ದು, ಬಿಜೆಪಿ 20 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ಸಂಖ್ಯೆ 21 ಸಿಕ್ಕಿಲ್ಲ.
ಗೋವಾ ಅಂತಿಮ ಫಲಿತಾಂಶ; ಬಿಜೆಪಿಗೆ ಪಕ್ಷೇತರರ ಬೆಂಬಲ
ಗೋವಾ ಚುನಾವಣೆ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಪಂಚರಾಜ್ಯದ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಕ್ಷದ ಮಟ್ಟಿಗೆ ಹಿನ್ನಡೆಯಾದರೂ ಅಂತಿಮವಾಗಿ ಜನಾದೇಶಕ್ಕೆ ಗೌರವ ಕೊಡಲೇಬೇಕು" ಎಂದು ಹೇಳಿದ್ದಾರೆ.
ಗೋವಾ ಚುನಾವಣೆ; ಉತ್ಪಲ್ ಪರಿಕ್ಕರ್ ಪಡೆದ ಮತಗಳು ಎಷ್ಟು?
ಗೋವಾ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಯಾವುದೇ ಪಕ್ಷಕ್ಕೆ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ಸಂಖ್ಯೆ ಸಿಕ್ಕಿಲ್ಲ. ಮೂವರು ಪಕ್ಷೇತರರು ಮತ್ತು ಎಂಜಿಪಿ ನೆರವಿನಿಂದ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್ 11, ಎಎಪಿ ಮತ್ತು ಎಂಜಿಪಿ ಎಲಾ 2, ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಆರ್ಜಿಪಿ ತಲಾ ಒಂದು ಸ್ಥಾನ ಗೆದ್ದಿವೆ. ಮೂವರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಗೋವಾ ಫಲಿತಾಂಶ; ಪಕ್ಷವಾರು ಸೀಟು, ಮತಗಳಿಕೆ ಅಂಕಿ-ಅಂಶ
ನಮ್ಮ ಪಕ್ಷ ವಿಫಲವಾಗಿದೆ
"ಚುನಾವಣೆ ನಡೆದ ಐದೂ ರಾಜ್ಯಗಳಲ್ಲಿ ಪಕ್ಷದ ಪರ ಜನರ ಒಲವಿತ್ತು. ಆದರೆ ಆ ಒಲವು ಪಕ್ಷದ ಪರ ಮತಗಳಾಗಿ ಪರಿವರ್ತನೆಯಾಗಿಲ್ಲ. ಚುನಾವಣೆ ನಡೆದ ರಾಜ್ಯಗಳಲ್ಲಿ ಜನರ ನಾಡಿ ಮಿಡಿತ ನಾವು ಅರಿಯುವಲ್ಲಿ ನಮ್ಮ ಪಕ್ಷ ವಿಫಲವಾಗಿದೆ" ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಉತ್ತರ ಪ್ರದೇಶ, ಮಣಿಪುರ, ಗೋವಾ, ಉತ್ತರಾಂಖಡ್ ಮತ್ತು ಪಂಜಾಬ್ ರಾಜ್ಯಗಳ ಪೈಕಿ ಪಂಬಾನ್ನಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿತ್ತು. 2017ರ ಚುನಾವಣೆಯಲ್ಲಿ ಪಂಜಾಬ್ ರಾಜ್ಯದಲ್ಲಿ ಗೆದ್ದು ಅಧಿಕಾರ ಹಿಡಿದ್ದ ಕಾಂಗ್ರೆಸ್ ಈ ಬಾರಿ 117 ಬಲದ ವಿಧಾನಸಭೆಯಲ್ಲಿ 18 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದೆ.
ಅಪಾಯಕಾರಿ ಬೆಳವಣಿಗೆ
"ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮತದಾರನ ಆದ್ಯತೆ ಏನು?, ಯಾವುದಕ್ಕೆ ಪ್ರಾಶಸ್ತ್ಯ? ಎಂದು ತೋರಿಸಿಕೊಟ್ಟಿದೆ. ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ, ದುಬಾರಿ ಜೀವನ, ರೈತರ ಶೋಷಣೆ ಚುನಾವಣೆಯ ವಸ್ತು ವಿಷಯ ಎಂದು ಭಾವಿಸಲಾಗಿತ್ತು. ಆದರೆ ಜನರಿಗೆ ಈ ವಿಷಯಗಳಿಗಿಂತ ಕೋಮು ಸಂಗತಿಗಳೇ ಆದ್ಯತೆಯಾದಂತಿದೆ. ಈ ಫಲಿತಾಂಶ ಅಪಾಯಕಾರಿ ಬೆಳವಣಿಗೆಯ ಅಪಶಕುನವಿದ್ದಂತೆ" ಎಂದು ಚುನಾವಣಾ ಫಲಿತಾಂಶವನ್ನು ದಿನೇಶ್ ಗುಂಡೂರಾವ್ ವಿಶ್ಲೇಷಣೆ ಮಾಡಿದ್ದಾರೆ.
11 ಸ್ಥಾನಗಳಿಸಿ 2ನೇ ಸ್ಥಾನ
"ನನ್ನ ಉಸ್ತುವಾರಿಯಲ್ಲಿದ್ದ ಗೋವಾದಲ್ಲಿ ನಮ್ಮ ಪಕ್ಷ ಅಧಿಕಾರ ಹಿಡಿಯದ ನಿರಾಸೆಯಿದ್ದರೂ ಪಕ್ಷದ ಸಾಧನೆ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ. ಬಿಜೆಪಿಯ ಷಡ್ಯಂತ್ರ ಹಾಗೂ ಕುದುರೆ ವ್ಯಾಪಾರದಿಂದ ಶೂನ್ಯದಲ್ಲಿದ್ದ ಕಾಂಗ್ರೆಸ್ 11 ಸ್ಥಾನ ಗಳಿಸಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಂಜಾಬ್ ಫಲಿತಾಂಶ ಪಕ್ಷದ ಮಟ್ಟಿಗೆ ದೊಡ್ಡ ಆಘಾತ. ಉತ್ತರಾಖಂಡ ಹಾಗೂ ಮಣಿಪುರದಲ್ಲೂ ನಾವು ನಿರೀಕ್ಷಿಸಿದ ಫಲಿತಾಂಶ ಬಂದಿಲ್ಲ" ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹೊಟ್ಟೆ ತುಂಬಿಸುವುದಿಲ್ಲ
"ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯವನ್ನು ನಾವು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವಲ್ಲಿ ಎಡವಿದ್ದೇವೆ. ಇದರ ಲಾಭ ಪಡೆದುಕೊಂಡಿರುವ ಬಿಜೆಪಿ ಈ ರಾಜ್ಯಗಳಲ್ಲಿ ಜನಾದೇಶ ಪಡೆದುಕೊಂಡಿದೆ. ಪಂಚರಾಜ್ಯ ಚುನಾವಣಾ ಫಲಿತಾಂಶವನ್ನು ನಾನು ಬಿಜೆಪಿ ಗೆಲುವು ಅಥವಾ ಕಾಂಗ್ರೆಸ್ನ ಸೋಲು ಎಂದು ವಿಶ್ಲೇಷಿಸಲು ಹೋಗುವುದಿಲ್ಲ. ಈ ಫಲಿತಾಂಶ ಈ ದೇಶದ ಭವಿಷ್ಯದ ಸೋಲು ಎಂದು ಮಾತ್ರ ಹೇಳಬಲ್ಲೆ. ಬಿಜೆಪಿ ಪ್ರತಿಪಾದಿಸುತ್ತಿರುವ ಧರ್ಮಾಧಾರಿತ ಸಂಗತಿಗಳು ತಮ್ಮ ಹೊಟ್ಟೆ ತುಂಬಿಸುವುದಿಲ್ಲ ಎಂಬ ಸತ್ಯ ಮತದಾರನಿಗೆ ಅರಿವಾಗುವವರೆಗೂ ಈ ರೀತಿಯ ಫಲಿತಾಂಶ ನಿರೀಕ್ಷಿತ" ಎಂದು ದಿನೇಶ್ ಗುಂಡೂರಾವ್ ಹೇಳಿದರು.