ಗೋವಾ ಚುನಾವಣೆ: ಎಎಪಿ ಗೆದ್ದರೆ ಭಂಡಾರಿ ಸಮುದಾಯದ ವ್ಯಕ್ತಿ ಸಿಎಂ, ಕ್ರಿಶ್ಚಿಯನ್ ಡಿಸಿಎಂ
ಪಣಜಿ, ನವೆಂಬರ್ 11: ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ಭಂಡಾರಿ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವುದಾಗಿ ಆಮ್ ಆದ್ಮಿ ಪಕ್ಷದ(ಎಎಪಿ) ಹಿರಿಯ ನಾಯಕ, ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರು ಗುರುವಾರ ಹೇಳಿದ್ದಾರೆ.
ಇಂದು ಪಣಜಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಸೋಡಿಯಾ ಅವರು, ಗೋವಾದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಕ್ರೈಸ್ತ ಸಮುದಾಯದ ವ್ಯಕ್ತಿ ಉಪಮುಖ್ಯಮಂತ್ರಿ ಆಗಲಿದ್ದಾರೆ ಎಂದು ತಿಳಿಸಿದರು.
ಜನರಿಗೆ 'ದೆಹಲಿ ಮಾದರಿ' ಬೇಕು, ಪಂಜಾಬ್-ಗೋವಾದಲ್ಲಿ ಎಎಪಿ ಗೆಲುವು ನಿಶ್ಚಿತ: ಕೇಜ್ರಿವಾಲ್
ಗೋವಾದಲ್ಲಿ ಎಎಪಿಗೆ ಹೆಚ್ಚು ಮನ್ನಣೆ ಸಿಗುತ್ತಿದೆ, ಎಲ್ಲಾ ಸಮುದಾಯಗಳ ಜನರು ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷದ ಜೊತೆ ಕೈಜೋಡಿಸುತ್ತಿದ್ದಾರೆ ಎಂದು ದೆಹಲಿಯ ಉಪ ಮುಖ್ಯಮಂತ್ರಿ ಹೇಳಿದ್ದಾರೆ.
ಗೋವಾ ವಿಮೋಚನೆಯ ನಂತರ ರಾಜ್ಯದ ಇತಿಹಾಸದಲ್ಲಿ ಒಮ್ಮೆ ಮಾತ್ರ ಭಂಡಾರಿ ಸಮುದಾಯದ ನಾಯಕರೊಬ್ಬರು ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಅದು ಕೂಡ ಎರಡೂವರೆ ವರ್ಷಗಳ ಅಲ್ಪಾವಧಿಗೆ ಯಾರನ್ನೂ ಹೆಸರಿಸದೆ ಸಿಸೋಡಿಯಾ ಹೇಳಿದರು.
ರಾಜ್ಯದಲ್ಲಿ ಸಾಕಷ್ಟು ಜನಸಂಖ್ಯೆಯನ್ನು ಹೊಂದಿರುವ ಭಂಡಾರಿ ಸಮುದಾಯವನ್ನು ಸರ್ಕಾರದಲ್ಲಿ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಯಾವಾಗಲೂ ಕಡೆಗಣಿಸಲಾಗಿದೆ ಎಂದರು.
ಪಂಜಾಬ್, ಗೋವಾ, ಯುಪಿ ಮತ್ತು ಉತ್ತರಾಖಂಡದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಜನರು "ದೆಹಲಿ ಮಾದರಿಯ ಆಡಳಿತಕ್ಕೆ" ಖಂಡಿತವಾಗಿ ಮತ ಹಾಕುತ್ತಾರೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಜನರಿಗೆ ದೆಹಲಿ ಮಾದರಿಯ ಸರ್ಕಾರ ಬೇಕಾಗಿದೆ. ದೇಶದ ಪ್ರತಿ ಮೂಲೆ ಮೂಲೆಯಲ್ಲೂ ದೆಹಲಿ ಮಾದರಿಯ ಸರ್ಕಾರವನ್ನು ಜನರು ಬಯಸುತ್ತಾರೆ. ಜನರಿಗೆ ನಾವು ಬೇಕು ಎಂದು ಆದಾಗ, ನಾವ್ಯಾಕೆ ಆ ರಾಜ್ಯಗಳಿಗೆ ಹೋಗದೆ ಇರಬೇಕು," ಎಂದು ಪ್ರಶ್ನಿಸಿದ್ದಾರೆ.
ಶಾಲೆಯ ಗುಣಮಟ್ಟವನ್ನು ಅಧಿಕ ಮಾಡುವ ನಿಟ್ಟಿನಲ್ಲಿ, ಉತ್ತಮ ಆಸ್ಪತ್ರೆಯನ್ನು ಒದಗಿಸಲು ಹಾಗೂ ಜನರಿಗೆ ವಿದ್ಯುತ್ ಅನ್ನು ಒದಗಿಸುವ ನಿಟ್ಟಿನಲ್ಲಿ ನಾವು ಜನರಲ್ಲಿ ಮತಯಾಚನೆ ಮಾಡುತ್ತೇವೆ. ನಾವು ದೆಹಲಿಯಲ್ಲಿ ಇದೇ ರೀತಿಯ ಕಾರ್ಯವನ್ನು ಮಾಡಿದ್ದೇವೆ," ಎಂದು ಎಎಪಿಯ ಚುನಾವಣಾ ಕಾರ್ಯತಂತ್ರದ ಬಗ್ಗೆ ಪ್ರತಿಕ್ರಿಯಿಸುತ್ತಾ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
ಇನ್ನು "ಅದರಲ್ಲೂ ಮುಖ್ಯವಾಗಿ ಗೋವಾ ಹಾಗೂ ಪಂಜಾಬ್ನಲ್ಲಿ ಜನರು ದೆಹಲಿ ಮಾದರಿಯನ್ನು ಮೆಚ್ಚಿ ನಮಗೆ ಮತ ನೀಡಲಿದ್ದಾರೆ. ಪಂಜಾಬ್ ಕಾಂಗ್ರೆಸ್ನ ಒಳಜಗಳವನ್ನು ಜನರು ನೋಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಹಾಗೂ ಶಿರೋಮಣಿ ಅಕಾಳಿದಳದ ವಿರುದ್ಧ ಜನರಿಗೆ ಇರುವ ಅಸಮಾಧಾನವು ಎಎಪಿ ಪಂಜಾಬ್ನಲ್ಲಿ ಜನರ ನಂಬಿಕೆ ಗಳಿಸಲು ದಾರಿ ದೀಪವಾಗಲಿದೆ," ಎಂದು ಕೂಡಾ ಕೇಜ್ರಿವಾಲ್ ಉಲ್ಲೇಖ ಮಾಡಿದ್ದಾರೆ.
ನಾನು ದೇಶದ 130 ಕೋಟಿ ಜನರನ್ನು ಐಕ್ಯವಾಗಿರಿಸಲು ಬಯಸುತ್ತೇನೆ, ಇದುವೇ ನಿಜವಾದ ಹಿಂದುತ್ವ. ಜನರನ್ನು ಧರ್ಮದ ಆಧಾರದಲ್ಲಿ ವಿಂಗಡನೆ ಮಾಡುವುದು, ಗಲಭೆಗಳನ್ನು ಸೃಷ್ಟಿ ಮಾಡುವುದು, ದಲಿತರ ವಿರುದ್ಧ ದೌರ್ಜನ್ಯವನ್ನು ಎಸಗುವುದು ನಿಜವಾದ ಹಿಂದುತ್ವ ಅಲ್ಲ. ಜನರು ಪರಸ್ಪರ ಏಕತೆಯಿಂದ ಇರುವುದೇ ನಿಜವಾದ ಹಿಂದುತ್ವ," ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
ಇದೀಗ ಅಯೋಧ್ಯೆಯ ರಾಮಲಲ್ಲಾ ದರ್ಶನವನ್ನೂ ತೀರ್ಥಯಾತ್ರೆಗೆ ಸೇರಿಸಲಾಗಿದೆ. ಹಿರಿಯ ನಾಗರಿಕರಿಗೆ ಉಚಿತ ದರ್ಶನ ಭಾಗ್ಯವನ್ನು ಕಲ್ಪಿಸಲಾಗಿದೆ. ಯಾತ್ರೆ ಕೈಗೊಳ್ಳುವ ಹಿರಿಯರ ನಾಗರಿಕರು ಸಹಾಯಕ್ಕೆ ತಮ್ಮ ಜೊತೆಯಲ್ಲಿ ಒಬ್ಬರನ್ನು ಕರೆದುಕೊಂಡು ಹೋಗಬಹುದು ಎಂದು ಇತ್ತೀಚೆಗೆ ಕೇಜ್ರಿವಾಲ್ ಹೇಳಿದ್ದರು, ಆ ಬೆನ್ನಲ್ಲೇ ಕೇಜ್ರಿವಾಲ್ ಮೃದು ಹಿಂತುತ್ವವಾದಿ ಎಂದು ಆರೋಪ ಮಾಡಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಜ್ರಿವಾಲ್, "ನನಗೆ ಮೃದು ಹಿಂದುತ್ವ ಬೇಡ. ನಗಗೆ ದೇಶದ 130 ಕೋಟಿ ಜನರಲ್ಲಿ ಐಕ್ಯತೆ ಕಾರಬೇಕು. ಜನರ ನಡುವೆ ಪರಸ್ಪರ ಐಕ್ಯತೆ ಬೇಕು. ಇದು ಹಿಂದುತ್ವ, ಹಿಂದುತ್ವವೇ ಏಕತೆ. ಹಿಂದುತ್ವ ಯಾರನ್ನು ವಿಭಜನೆ ಮಾಡುವುದಿಲ್ಲ," ಎಂದು ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.
2022ರಲ್ಲಿ ಗೋವಾ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಈಗಾಗಲೇ ಪಕ್ಷಗಳು ತಯಾರಿ ನಡೆಸಿಕೊಳ್ಳುತ್ತಿವೆ. ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷ ಇಲ್ಲೂ ಕೂಡಾ ತನ್ನ ಪ್ರಭಾವ ಬೆಳೆಸಲು ಮುಂದಾಗಿದೆ.
ಗೋವಾ ಪಣಜಿ, ನವೇಲಿಂ ಮತ್ತು ಸಂಗುವೆಮ್ ಪ್ರದೇಶದಲ್ಲಿ ನಡೆದ ಮೂರು ಕಾರ್ಯಕ್ರಮಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಟಿಎಂಸಿ ಪತ್ರಿಕಾ ಹೇಳಿಕೆಯಲ್ಲಿ ದೃಢಪಡಿಸಿದೆ.
ಅಕ್ಟೋಬರ್ 28ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರುವ ಗೋವಾಗೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲೇ 300ಕ್ಕೂ ಹೆಚ್ಚು ಮಂದಿ ಟಿಎಂಸಿ ಪಕ್ಷಕ್ಕೆ ಸೇರಿರುವುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ನಾಯಕ ಕಾನ್ಸಿಕಾವೊ ಪೀಕ್ಸೊಟ್ ಸೇರಿದಂತೆ ಬ್ಲಾಕ್ ಮಟ್ಟದ ಎಲ್ಲಾ ಕಾಂಗ್ರೆಸ್ ನಾಯಕರು ಹಾಗೂ 170 ಮಂದಿ ಕಾರ್ಯಕರ್ತರು ನವೇಲಿಂನಲ್ಲಿ ಟಿಎಂಸಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಲುಯಿಜಿನ್ಹೋ ಫಲೈರೊ ಅವರ ಸಮ್ಮುಖದಲ್ಲಿ ಗೋವಾ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ ಎಂದು ಪಕ್ಷದ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.