ಗೋವಾದಲ್ಲಿಲ್ಲ ಆ.15ರ ಸ್ವಾತಂತ್ರ್ಯ ದಿನಾಚರಣೆ; ಕಾರಣ ಇಲ್ಲಿದೆ
ಪಣಜಿ, ಆಗಸ್ಟ್ 15: ಬ್ರಿಟೀಷರ ದಾಸ್ಯದ ಸಂಕೋಲೆಯಿಂದ 1947ರ ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯಗೊಂಡಿತು. ಅದೆಷ್ಟೋ ವೀರ ಕಲಿಗಳ ಬಲಿದಾನದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಪ್ರತಿ ಭಾರತೀಯ ಪ್ರಜೆಯೂ ಅವರನ್ನು ಈ ದಿನ ಸ್ಮರಿಸಬೇಕಿದೆ ಮತ್ತು ಸ್ಮರಿಸುತ್ತಾರೆ ಕೂಡ.
ಪ್ರತಿ ವರ್ಷ ಈ ದಿನವನ್ನು ರಾಷ್ಟ್ರೀಯ ಹಬ್ಬವಾಗಿ, ಅದ್ಧೂರಿಯಾಗಿ, ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಆತಂಕದ ನಡುವೆಯೂ ದೇಶದಾದ್ಯಂತ ಸರಳವಾಗಿಯೂ, ಸಂಭ್ರಮದಿಂದ 75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವವನ್ನು ಆಚರಿಸಲಾಗಿದೆ.
ಕೋವಿಡ್, ಪ್ರವಾಹ ಎದುರಿಸಲು ಉತ್ತರ ಕನ್ನಡ ಸಜ್ಜು: ಸ್ವಾತಂತ್ರ್ಯೋತ್ಸವದಲ್ಲಿ ಸಚಿವ ಹೆಬ್ಬಾರ್ ಸಂದೇಶ
ದೇಶದಾದ್ಯಂತ ಸ್ವಾತಂತ್ರ್ಯ ದಿನವನ್ನು ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ- ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಸೇರಿದಂತೆ ಎಲ್ಲೆಡೆಯೂ ತ್ರಿವರ್ಣ ಧ್ವಜಾರೋಹಣಗೈದು, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಈ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಇಷ್ಟೆಲ್ಲ ಕಾರ್ಯಕ್ರಮಗಳು ಭಾರತದಾದ್ಯಂತ ನಡೆಯುತ್ತಿದ್ದರೂ, ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದರೂ ಗೋವಾದಲ್ಲಿ ಮಾತ್ರ ಆಗಸ್ಟ್ 15 ಸಾಮಾನ್ಯ ದಿನದಂತೆ ಇರುತ್ತದೆ ಮತ್ತು ಇದೆ ಕೂಡ. ಕಾರಣ, ಭಾರತದಲ್ಲಿ ಬ್ರಿಟೀಷರನ್ನು ಓಡಿಸಿ ಸ್ವಾತಂತ್ರ್ಯ ಪಡೆದುಕೊಂಡರೂ ಸಹ, ಗೋವಾ ಪೋರ್ಚುಗೀಸರ ಕಪಿಮುಷ್ಠಿಯಲ್ಲೇ ಇತ್ತು. ಭಾರತದ ಸ್ವಾತಂತ್ರ್ಯಾ ನಂತರವೂ ಗೋವಾ ಪೋರ್ಚುಗೀಸರ ವಸಾಹತಾಗಿಯೇ ಉಳಿದಿತ್ತು.
'ಆಜಾದಿ ಕಾ ಅಮೃತ್ ಮಹೋತ್ಸವ': ಅಂಜುದೀವ್ನಲ್ಲಿ ನೌಕಾಪಡೆಯಿಂದ ಧ್ವಜಾರೋಹಣ
ಗೋವಾದ ಕಡಲತೀರಗಳ ರಮಣೀಯ ಸೌಂದರ್ಯಕ್ಕೆ ಮಾರು ಹೋಗಿದ್ದ ಪೋರ್ಚುಗೀಸರು, 450 ವರ್ಷಗಳಿಗೂ ಹೆಚ್ಚು ಕಾಲ ಈ ರಾಜ್ಯವನ್ನು ಆಳಿದರು. ಪೋರ್ಚುಗೀಸರು ಮೊದಲು ಭಾರತದಲ್ಲಿ ವಸಾಹತು ಸ್ಥಾಪಿಸಿದ್ದು ಗೋವಾದಲ್ಲೇ ಹಾಗೂ ಕೊನೆಯದಾಗಿ ದೇಶವನ್ನು ತೊರೆದಿದ್ದು ಕೂಡ ಗೋವಾದಿಂದಲೇ.
ಗೋವಾದಲ್ಲಿ ಹಲವು ಬದಲಾವಣೆಗೆ ಕಾರಣರಾದ ಪೋರ್ಚುಗೀಸರು
ಕೇವಲ ಸಮುದ್ರ, ಮರಳಿನ ರಾಜ್ಯವಾಗಿದ್ದ ಗೋವಾ 1510ರಲ್ಲಿ ಪೋರ್ಚುಗೀಸರಿಂದ ಆಕ್ರಮಣಕ್ಕೊಳಗಾದ ನಂತರ ಅನೇಕ ಬದಲಾವಣೆಗಳಿಗೆ ತೆರೆದುಕೊಂಡಿತು. ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿ ಮಾರ್ಪಾಡಾಗಿ, ಇದರೊಂದಿಗೆ ನಾಲ್ಕು ಶತಮಾನಗಳಿಗೂ ಹೆಚ್ಚು ಕಾಲ ಗೋವಾದ ಜನರು ಪೋರ್ಚುಗೀಸರೆಂಬ ಶೈತಾನನ ಚಿತ್ರಹಿಂಸೆಗೂ ಒಳಗಾದರು. ಗೋವಾದಲ್ಲಿ ಕೊಂಕಣಿ ಭಾಷೆಯನ್ನು ನಿಗ್ರಹಿಸುವುದರಿಂದ ಹಿಡಿದು, ಹಿಂದೂಗಳು ಮತ್ತು ಕ್ಯಾಥೊಲಿಕ್ಗಳಿಗೆ ಕಿರುಕುಳ ನೀಡಿದ ಪೋರ್ಚುಗೀಸರು, ಹಿಂದೂ ದೇವಾಲಯಗಳ ನಾಶ ಮಾಡಿದರು. ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ವಿವಾಹ ಆಚರಿಸುವುದಕ್ಕೆ 1540ರ ಅವಧಿಯಲ್ಲಿ ನಿಷೇಧ ಹೇರಿದರು.
ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ರಾಮ್ ಮನೋಹರ್ ಲೋಹಿಯಾ
ಭಾರತದಲ್ಲಿ ಪೋರ್ಚುಗೀಸರ ಆಳ್ವಿಕೆಯ ಅಂತ್ಯದ ಆರಂಭವು 1946ರ ಜೂನ್ 18ರಲ್ಲಿ ಆರಂಭವಾಯಿತು. ಭಾರತದ ಉಳಿದ ಭಾಗಗಳು ಈ ಅವಧಿಯಲ್ಲಿ ಸ್ವಾತಂತ್ರ್ಯದತ್ತ ಸಾಗುತ್ತಿದ್ದಾಗ, ಕಾರ್ಯಕರ್ತ ಮತ್ತು ರಾಜಕೀಯ ನಾಯಕ ರಾಮ್ ಮನೋಹರ್ ಲೋಹಿಯಾ, ಬರಹಗಾರ ಡಾ. ಜೂಲಿಯೊ ಮೆನೆಜೆಸ್ ಅವರೊಂದಿಗೆ ಗೋವಾಕ್ಕೆ ಭೇಟಿ ನೀಡಿದ್ದರು. ಗೋವನ್ನರು ಪೋರ್ಚುಗೀಸರಿಂದಾಗಿ ಅನುಭವಿಸುತ್ತಿದ್ದ ಸಂಕಷ್ಟಗಳ ಬಗ್ಗೆ ತಿಳಿದ ಲೋಹಿಯಾ, ರಾಜ್ಯದಲ್ಲಿ ನಾಗರಿಕ ಅಸಹಕಾರ ಚಳುವಳಿಯನ್ನು ಆರಂಭಿಸಿದರು. ಇದರಿಂದಾಗಿ ಅವರನ್ನು ಬಂಧಿಸಲಾಯಿತು. ಕೆಲವು ನಿಯಮ ಹಾಗೂ ಕಾನೂನುಗಳ ಅಡಿಯಲ್ಲಿ ಚಳುವಳಿಯನ್ನು ಹತ್ತಿಕ್ಕಲಾಯಿತು.
ಆದರೆ ಇದು ಪೋರ್ಚುಗೀಸರ ವಿರುದ್ಧ ಗೋವನ್ನರು ಸಂಘಟಿತರಾಗಲು, ಸಭೆ ಸೇರಲು ಮತ್ತು ಕಾರ್ಯತಂತ್ರ ರೂಪಿಸಲು ಪ್ರೇರೇಪಿಸಿತು. ಗೋವಾದಲ್ಲಿ ಅನೇಕ ಯುವ ನಾಯಕರು ಮತ್ತು ಹೋರಾಟಗಾರರ ಮೇಲೆ ಈ ನಾಗರಿಕ ಅಸಹಕಾರ ಚಳವಳಿ ಪ್ರಭಾವ ಬೀರಿತು. ಕೇವಲ 13 ವರ್ಷ ವಯಸ್ಸಿನವನಾಗಿದ್ದ ಪ್ರಭಾಕರ ವಿಠ್ಠಲ್ ಸಿನಾರಿ ಎಂಬ ಯುವಕ ಕೂಡ ಈ ಚಳವಳಿಯಲ್ಲಿ ಭಾಗವಹಿಸಿದ್ದು, ಈ ಚಳವಳಿಯ ತೀವ್ರತೆ ಎಷ್ಟಿತ್ತೆನ್ನುವ ಬಗ್ಗೆ ಅಂದಾಜು ನೀಡಬಲ್ಲದು.
ಯುನೈಟೆಡ್ ಫ್ರಂಟ್ ಆಫ್ ಲಿಬರೇಶನ್ ರಚನೆ
ಸಿನಾರಿ ಮತ್ತು ಆತನ ಆಪ್ತರು ಆಜಾದ್ ಗೋಮಂತಕ್ ದಳ (AGD) ಎಂಬ ಕ್ರಾಂತಿಕಾರಿ ಸಂಘಟನೆಯನ್ನು ಅಂದು ಕಟ್ಟಿದರು. ನಂತರ ಇದು ಪೋರ್ಚುಗೀಸರ ವಿರುದ್ಧ ಹೋರಾಡಲು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಜೊತೆಗೆ ಕೈಜೋಡಿಸಿತು. ಪುಣೆಯ ಕುಸ್ತಿಪಟು ನಾನಾ ಕಾಜ್ರೇಕರ್, ಸಂಗೀತ ನಿರ್ದೇಶಕ ಸುಧೀರ್ ಫಡ್ಕೆ, ಬಾಂಬೆಯ (ಈಗಿನ ಮುಂಬೈ) ರಾಷ್ಟ್ರೀಯವಾದಿಗಳು ಮತ್ತು ಇತರರು ಆಜಾದ್ ಗೋಮಂತಕ್ ದಳದೊಂದಿಗೆ ಒಗ್ಗೂಡಿ ಯುನೈಟೆಡ್ ಫ್ರಂಟ್ ಆಫ್ ಲಿಬರೇಶನ್ ಎಂಬ ದೊಡ್ಡ ಒಕ್ಕೂಟವನ್ನು ರಚಿಸುತ್ತಾರಂತೆ.
ಸಂಗೀತ ಕಾರ್ಯಕ್ರಮದ ಮೂಲಕ ದೇಣಿಗೆ ಸಂಗ್ರಹ
ಒಂದು ದೊಡ್ಡ ಗುಂಪಾದ ಈ ಒಕ್ಕೂಟದ ಮೂಲಕ ಗೋವಾವನ್ನು ಪೋರ್ಚುಗೀಸರಿಂದ ಮರಳಿ ಪಡೆಯುವುದಕ್ಕೂ ಮೊದಲು ನರೋಲಿ, ದಾದ್ರಾ ಮತ್ತು ನಾಗರ್ ಹವೇಲಿಯ ಪೋರ್ಚುಗೀಸ್ ವಸಾಹತುಗಳನ್ನು ಸ್ವತಂತ್ರಗೊಳಿಸಲು ಏಕಾಏಕಿ ಈ ತಂಡ ದಾಳಿಗಳನ್ನು ನಡೆಸಿತು. ಪೋರ್ಚುಗೀಸರಿಂದ ಗೋವಾ, ದಾದ್ರಾ ಮತ್ತು ನಗರ್ ಹವೇಲಿಯನ್ನು ಮುಕ್ತಗೊಳಿಸಲು ಇವರಿಗೆ ಶಸ್ತ್ರಾಸ್ತ್ರಗಳನ್ನು ಖರೀದಿಸುವುದಕ್ಕಾಗಿ ಅಂದಿನ ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್ ಪುಣೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಿ ದೇಣಿಗೆ ಸಂಗ್ರಹಿಸಿಕೊಟ್ಟಿದ್ದರಂತೆ.
ಅಂಜುದೀವ್ ನ ಬಳಿಕ ಗೋವಾ ವಶಕ್ಕೆ
ಇನ್ನು, 1.5 ಚದರ ಕಿಲೋ ಮೀಟರ್ಗಳಷ್ಟು ವಿಸ್ತಾರವಾದ ಕಾರವಾರ ಸಮೀಪದ ಅಂಜುದೀವ್ ದ್ವೀಪವು ಗೋವಾ ವಿಮೋಚನೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿತ್ತು. ಈ ದ್ವೀಪವನ್ನು 1498ರಲ್ಲಿ ತಮ್ಮ ವಶಕ್ಕೆ ಪಡೆದ ಪೋರ್ಚುಗೀಸರು, ಇಲ್ಲಿ ಕೋಟೆ ಮತ್ತು ಚರ್ಚ್ ಅನ್ನು ನಿರ್ಮಿಸಿದ್ದರು.
ಏಳು ನಾವಿಕರ ಪ್ರಾಣತ್ಯಾಗ
ಗೋವಾ ವಿಮೋಚನೆಯ ಭಾಗವಾಗಿ ಅಂಜುದೀವ್ ದ್ವೀಪವನ್ನು ವಶಪಡಿಸಿಕೊಳ್ಳಲು ಭಾರತೀಯ ನೌಕಾಪಡೆಯು ಆಗಿನ ಲೆಫ್ಟಿನೆಂಟ್ ಕಮಾಂಡರ್ ಅರುಣ್ ಆಡಿಟ್ಟೊ ನೇತೃತ್ವದಲ್ಲಿ 'ಆಪರೇಷನ್ ವಿಜಯ್' ಅನ್ನು 1961ರ ಡಿಸೆಂಬರ್ 18ರಂದು ಕೈಗೊಂಡಿತು. ಈ ಸಂದರ್ಭದಲ್ಲಿ ಐಎನ್ಎಸ್ ಮೈಸೂರು ಮತ್ತು ಐಎನ್ಎಸ್ ತ್ರಿಶೂಲ್ ಯುದ್ಧನೌಕೆಗಳು ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಈ ವೇಳೆ ಅಂತಿಮವಾಗಿ ಏಳು ನಾವಿಕರು ಪ್ರಾಣ ತ್ಯಾಗವನ್ನು ಮಾಡಿದರೆ., ಇಬ್ಬರು ಅಧಿಕಾರಿಗಳು ಮತ್ತು ಹದಿನೇಳು ನಾವಿಕರು ಗಾಯಗೊಂಡರು. ನೌಕಾ ಕಾರ್ಯಪಡೆ ಅಂಜುದೀವ್ ದ್ವೀಪವನ್ನು ಕೊನೆಗೂ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಡಿಸೆಂಬರ್ 19 ಗೋವಾ ವಿಮೋಚನಾ ದಿನ
ಸುದೀರ್ಘ ಹೋರಾಟ ಮತ್ತು ಕಾಯುವಿಕೆಯ ನಂತರ ಗೋವಾ 1961ರ ಡಿಸೆಂಬರ್ 19ರಂದು ಪೋರ್ಚುಗೀಸರ ಆಳ್ವಿಕೆಯಿಂದ ಬಿಡುಗಡೆ ಹೊಂದಿತು. ಪತ್ರಕರ್ತರು, ಸತ್ಯಾಗ್ರಹಿಗಳು, ಸಶಸ್ತ್ರ ಸಜ್ಜಿತ ಸ್ವಯಂಸೇವಕರು, ಚಲನಚಿತ್ರ ಕಲಾವಿದರು ಸಹ ಗೋವಾ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಹೀಗಾಗಿ ಪ್ರತಿ ವರ್ಷ ಡಿಸೆಂಬರ್ 19ರಂದು ಗೋವಾ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ. ಅಂಜುದೀವ್ ದ್ವೀಪ ವಶಪಡಿಸಿಕೊಂಡಿದ್ದು ಭಾರತದಲ್ಲಿ ಪೋರ್ಚುಗೀಸರ ಆಳ್ವಿಕೆಯನ್ನು ಕೊನೆಗೊಳಿಸಿ, ಭಾರತ ವಿದೇಶಿಗರಿಂದ ವಶಪಡಿಸಿಕೊಂಡ ಕೊನೆಯ ದ್ವೀಪವಾಗಿ ಅಂಜುದೀವ್ ಉಳಿಯಿತು.